ದ್ವೇಷ ಭಾಷಣ: ಒತ್ತಡಕ್ಕೆ ಮಣಿದು ಬಿಜೆಪಿ ನಾಯಕ ರಾಜಾ ಸಿಂಗ್ ಖಾತೆ ನಿಷೇಧಿಸಿದ ಫೇಸ್ಬುಕ್
ಭಾರತದ ಫೇಸ್ಬುಕ್ ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಮಧ್ಯೆ, ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುವ ಬಿಜೆಪಿ ನಾಯಕರ ಖಾತೆಗಳನ್ನು ನಿರ್ಬಂಧಿಸುವಂತೆ ಒತ್ತಡ ಮಣಿದ ಫೇಸ್ಬುಕ್ ಬಿಜೆಪಿ ನಾಯಕ ಟಿ.ರಾಜಾ ಸಿಂಗ್ ಅವರ ಖಾತೆಯನ್ನು ನಿರ್ಬಂಧಿಸಿದೆ ಎಂದು ತಿಳಿದುಬಂದಿದೆ.
“ಫೇಸ್ಬುಕ್ನಲ್ಲಿ ಹಿಂಸೆ ಹಾಗೂ ದ್ವೇಷವನ್ನು ಪ್ರಚೋದಿಸುವ ಪೋಸ್ಟ್ಗಳು ನಮ್ಮ ನೀತಿಯನ್ನು ಉಲ್ಲಂಘಿಸುತ್ತವೆ. ಬಿಜೆಪಿ ಮುಖಂಡ ರಾಜಾ ಸಿಂಗ್ ಅವರು ಅಂತಹ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಆ ಕಾರಣಕ್ಕಾಗಿ ಅವರ ಫೇಸ್ಬುಕ್ ಖಾತೆಯನ್ನು ನಿಷೇಧಿಸಿದ್ದೇವೆ.” ಎಂದು ಫೇಸ್ಬುಕ್ ವಕ್ತಾರ ತಿಳಿಸಿರುವುದಾಗಿ ‘ವಾಲ್ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
ರಾಜಾ ಸಿಂಗ್ ಭಾರತದಲ್ಲಿರುವ ರೋಹಿಂಗ್ಯಾ ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿದ್ದರು. ರೋಹಿಂಗ್ಯಾರನ್ನು ದೇಶದಿಂದ ಹೊರಗಟ್ಟಬೇಕು ಎಂದು ಸತತವಾಗಿ ಪೋಸ್ಟ್ಗಳನ್ನು ಹಾಕಿದ್ದರು.
ಭಾರತದ ಫೇಸ್ಬುಕ್ ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಆರ್ಎಸ್ಎಸ್ ಫೇಸ್ಬುಕ್ನ್ನು ಭಾರತದಲ್ಲಿ ನಿಯಂತ್ರಿಸುತ್ತಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಅಲ್ಲದೆ, “ಫೇಸ್ಬುಕ್ ಉದ್ಯೋಗಿಗಳನ್ನು ಮಾತ್ರ ಒಳಗೊಂಡಿರುವ ಕಂಪನಿಯ ಆಂತರಿಕ ಗುಂಪಿನಲ್ಲಿ ಫೇಸ್ಬುಕ್ ಚೀಫ್ ಅಂಖಿ ದಾಸ್ ಹಲವು ವರ್ಷಗಳಿಂದ ಸತತವಾಗಿ ಬಿಜೆಪಿ ಪರವಾದ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧದ ಪೂರ್ವಗ್ರಹದ ಪೋಸ್ಟ್ಗಳನ್ನು ಹಾಕುತ್ತಿದ್ದರು. 2014ರ ಚುನಾವಣೆ ಸಂದರ್ಭದಲ್ಲಿ ಈ ಕೆಲಸವನ್ನು ವ್ಯಾಪಕವಾಗಿ ಮಾಡಿದ್ದಾರೆ” ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇದನ್ನೂ ಓದಿ: ಬಿಜೆಪಿ ಗೆಲುವಿಗಾಗಿ ಫೇಸ್ಬುಕ್ ಚುನಾವಣಾ ಪ್ರಚಾರ: ತನಿಖೆಗೆ ಕಾಂಗ್ರೆಸ್ ಆಗ್ರಹ