ಸಿದ್ದರಾಮಯ್ಯ ಪುತ್ರನ ಸಾವಿಗೆ ಡ್ರಗ್ಸ್ ಕಾರಣ; ಹೆಚ್ಡಿಕೆಯನ್ನೂ ವಿಚಾರಣೆಗೊಳಪಡಿಸಿ: ಪ್ರಮೋದ್ ಮುತಾಲಿಕ್
ಸ್ಯಾಂಡಲ್ವುಡ್ ಅಂಗಳದಲ್ಲಿ ಚರ್ಚೆಯಾಗುತ್ತಿರುವ ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಪತನಕ್ಕೆ ಡ್ರಗ್ ಮಾಫಿಯಾದ ಹಣವನ್ನು ಬಳಸಲಾಗಿದೆ ಎಂದು ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಡ್ರಗ್ ಮಾಫಿಯಾದ ವಿಚಾರದಲ್ಲಿ ಮೊದಲಿಗೆ ಹೆಚ್ಡಿ ಕುಮಾರಸ್ವಾಮಿಯವರನ್ನು ವಿಚಾರಣೆಗೆ ಒಳಪಡಿಸಿ ಎಂದು ಹೇಳಿದ್ದಾರೆ.
ವಿರೊಧ ಪಕ್ಷದ ನಾಯಕ ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಡ್ರಗ್ಸ್ ಕಾರಣವಾಗಿದ್ದು, ರಾಕೇಶ್ ಡ್ರಗ್ಸ್ ಸೇವಿಸುತ್ತಿದ್ದರು. ಬೇಹುಗಾರಿಕೆ ಇಲಾಖೆ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದೆ. ಜೊತೆಗೆ, ಎಲ್ಲಾ ಮೂರು ಪಕ್ಷಗಳು ಇದರಲ್ಲಿ ಶಾಮೀಲಾಗಿವೆ ಎಂದು ಆರೋಪಿಸಿದ್ದಾರೆ.
ಡ್ರಗ್ ಮಾಫಿಯಾದಲ್ಲಿ ಇಡೀ ಚಿತ್ರರಂಗವೇ ಭಾಗಿಯಾಗಿದೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ. ಆದರೆ, ಮಾಫಿಯಾದಲ್ಲಿ ರಾಜಕಾರಣಿಗಳು ಹಾಗು ಪೊಲೀಸರೂ ಕೈಜೋಡಿಸಿದ್ದಾರೆ. ಇದರ ಎಲ್ಲಾ ಮಾಹಿತಿಯೂ ಪೊಲೀಸರಿಗೆ ತಿಳಿದಿದೆ. ಆದರೆ, ರಾಜಕಾರಣಿಗಳು ಅವರ ಕೈ ಕಟ್ಟಿಹಾಕಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ 2009ರ ಪಬ್ ಗಲಾಟೆ ನಡೆದಾಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನನ್ನನ್ನು ಮಾತ್ರ ಟಾರ್ಗೆಟ್ ಮಾಡಿ 15 ದಿನ ಜೈಲಿಗೆ ಕಳಿಸಿತ್ತು. ಡ್ರಗ್ ದಂಧೆಯ ಬಗ್ಗೆ ಟಾರ್ಗೆಟ್ ಮಾಡಲೇ ಇಲ್ಲ. ಆಗ ಪಬ್ ಗಳಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದೆ ಎಂದು ಕೂಗಾಡಿದರೂ ಸರ್ಕಾರ ನನ್ನ ಮಾತನ್ನು ಕೇಳಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ದಂಧೆ: ಬೆಳ್ಳಂಬೆಳಿಗ್ಗೆ ನಟಿ ರಾಗಿಣಿ ಬೆಂಗಳೂರಿನ ನಿವಾಸದ ಮೇಲೆ ಸಿಸಿಬಿ ದಿಢೀರ್ ದಾಳಿ..!