ದ್ವೇಷದ ಪ್ರಚೋದನೆಯಿಂದ ಲಾಭ ಗಳಿಸುತ್ತಿದೆ ಫೇಸ್ಬುಕ್; ಉದ್ಯೋಗ ತೊರೆದ ಭಾರತ ಮೂಲದ ಇಂಜಿನಿಯರ್
ಅಮೆರಿಕಾ ಮತ್ತು ಜಾಗತಿಕ ಮಟ್ಟದಲ್ಲಿ ದ್ವೇಷವನ್ನು ಬಿತ್ತುವ ಮೂಲಕ ಲಾಭಗಳಿಸುತ್ತಿರುವ ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಆ ಕಾರಣದಿಂದಾಗಿ ಫೇಸ್ಬುಕ್ನ ಉದ್ಯೋಗ ತೊರೆಯುತ್ತಿದ್ದೇನೆ ಎಂದು ಅಮೆರಿಕಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಫೇಸ್ಬುಕ್ ಉದ್ಯೋಗಿ ಅಶೋಕ್ ಚಂದ್ವಾನೆ ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದ ಅಶೋಕ್ ಚಂದ್ವಾನೆ, ಫೇಸ್ಬುಕ್ ಸಂಸ್ಥೆಯ ಉದ್ಯೋಗಿಗಳ ಆಂತರಿಕ ನೆಟ್ ವರ್ಕ್ ನಲ್ಲಿ ತಾವು ಉದ್ಯೋಗ ತೊರೆಯುತ್ತಿರುವುದಾಗಿ ಪೋಸ್ಟ್ ಮಾಡಿದ್ದಾರೆ.
ಅವರು ಬರೆದಿರುವ ಪತ್ರದಲ್ಲಿ, ಫೇಸ್ಬುಕ್ ಉತ್ತಮ ಉದ್ಯೋಗ ಸ್ಥಳವಾಗಿದ್ದರೂ ಸಹ, ಸಮಯ ಕಳೆದಂತೆ ಆ ಸಂಸ್ಥೆಯ ನಾಯಕತ್ವ ಸಮಾಜಕ್ಕೆ ಉತ್ತಮವಾದುದ್ದನ್ನು ಮಾಡುವುದಕ್ಕಿಂತ ಹೆಚ್ಚಾಗಿ ಲಾಭದ ಮೊರೆ ಹೋಗಿದೆ. ಇದಕ್ಕಾಗಿ ತನ್ನದೇ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದ್ದಾರೆ.
ಫೇಸ್ಬುಕ್ ವೇದಿಕೆಯನ್ನು ಬಳಸಿಕೊಂಡು ನಡೆಸಲಾಗುತ್ತಿರುವ ಜನಾಂಗೀಯ ನಿಂದನೆ, ಸುಳ್ಳು ಸುದ್ದಿ ಹಾಗೂ ಹಿಂಸೆಯ ಪ್ರಚೋದನೆಯನ್ನು ತಡೆಗಟ್ಟುವಲ್ಲಿ ಫೇಸ್ಬುಕ್ ಸಂಸ್ಥೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರುತ್ಸಾಹ ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್ಅನ್ನು ಬಿಜೆಪಿ ನಿಯಂತ್ರಿಸುತ್ತಿದೆ; RSSನ ದ್ವೇಷದ ಪೋಸ್ಟ್ಗಳಿಗೆ FB ನೆರವಾಗಿದೆ: ವರದಿ
ಕೆಲವು ತಿಂಗಳುಗಳ ಹಿಂದೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡಿದ್ದ ‘ಲೂಟಿ ಆರಂಭಗೊಂಡಾಗ ಶೂಟಿಂಗ್ ಆರಂಭಗೊಳ್ಳುತ್ತದೆ” ಎಂಬ ಫೋಸ್ಟ್ಅನ್ನು ತೆಗೆಯಲು ಫೇಸ್ಬುಕ್ ನಿರಾಕರಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ಕಳೆದ ತಿಂಗಳು ಕೆನೋಶಾದಲ್ಲಿ ನಡೆದ ಹಿಂಸೆಯ ಸಂದರ್ಭದಲ್ಲಿ ತೀವ್ರಗಾಮಿಗಳು ಜನರು ಬಂದೂಕು ಹಿಡಿದು ಬರುವಂತೆ ಪ್ರಚೋದಿಸಿದ್ದರು. ಇದರಿಂದಾಗಿ ಗಂಭೀರ ಗುಂಡಿನ ದಾಳಿ ಮತ್ತು ಹಿಂಸಾಚಾರ ನಡೆಯಲು ಕಾರಣವಾಯಿತು.
ಇಂತಹ ಹಿಂಸೆ ಮತ್ತು ದ್ವೇಷವನ್ನು ಪ್ರಚೋದಿಸುವ ಪೋಸ್ಟ್ಗಳನ್ನೂ ಕೂಡ ಫೇಸ್ಬುಕ್ ತೆಗೆದು ಹಾಕುವಲ್ಲಿ ವಿಫಲವಾಗಿದೆ ಎಂದು ಅವರು ಪೋಸ್ಟ್ ಮಾಡಿರುವ ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Facebook-BJP ನಂಟು: ಫೇಸ್ಬುಕ್ನ ಭಾರತದ ನಿರ್ದೇಶಕಿ ಅಂಖಿದಾಸ್ ವಿರುದ್ಧ ಎಫ್ಐಆರ್!