ಐದು ತಿಂಗಳಿಂದ ಸಂಬಳವಿಲ್ಲದೆ ಅತಿಥಿ ಉಪನ್ಯಾಸಕರನ್ನು ಸಂಕಷ್ಟಕ್ಕೆ ನೂಕಿದ ರಾಜ್ಯಸರ್ಕಾರ!
ಕೊರೊನಾ ಬಾಧಿತ ವರ್ಗಗಳಿಗೆ ಆಕಾಶವೇ ಕೈಗೆಟುಕುವಂತೆ ಮಾಡಿರುವುದಾಗಿ ಕೊಚ್ಚಿಕೊಳ್ಳುವ ರಾಜ್ಯ ಸರಕಾರ ಅತಿಥಿ ಉಪನ್ಯಾಸಕರ ಬದುಕನ್ನು ಬೀದಿಗೆ ತಂದು ಕೃತಾರ್ಥವಾಗಿದೆ. ಕಳೆದ ಐದು ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ವೇತನ ನೀಡದೇ ಸರಕಾರ ಅವರ ಬಾಳಲ್ಲಿ ಚೆಲ್ಲಾಟವಾಡಿದ್ದು , ಹಲವರು ಜೀವನ ನಿರ್ವಹಣೆಗಾಗಿ ಬೀದಿಗೆ ಬಂದಿದ್ದಾರೆ.
ಇಷ್ಟಾದರೂ ಸರಕಾರ ಅವರಿಗೆ ಕನಿಷ್ಟ ವೇತನ ಒದಗಿಸುವ ಭರವಸೆಯನ್ನೂ ನೀಡದಿರುವುದು ಅದರ ಕಾಳಜಿಗೆ ಕನ್ನಡಿ ಹಿಡಿದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಹಲವಾರು ಅತಿಥಿ ಉಪನ್ಯಾಸಕರು ಬೀದಿಯಲ್ಲಿ ಕೂಲಿ ನಾಲಿ ಮಾಡುವುದರ ಮೂಲಕ ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳನ್ನು ಅನು ಸರಿಸಲಾರಂಭಿಸಿದ್ದಾರೆ.
ಯಾರು ಏನೇ ಹೇಳಿದರೂ ಈ ವಿಚಾರದಲ್ಲಿ ಸರಕಾರ ಕಿವುಡಾಗಿರುವುದು ಬಿಜೆಪಿ ಶಾಸಕರಿಗೆ ನುಂಗಲಾಗದ ತುತ್ತಾಗಿದೆ. ಸರಕಾರ ನೆರವಿಗೆ ಬಾರದಿದ್ದರೇ ಅಧಿವೇಶನ ಸಂದರ್ಭದಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರೊಂದಿಗೆ ವಿಧಾನಸೌಧದ ಎದುರು ಉಪವಾಸ ಕೂರ ಬೇಕಾಗುತ್ತದೆ ಎಂದು ಎಂಎಲ್ಸಿ ಆಯನೂರು ಮಂಜುನಾಥ ಎಚ್ಚರಿಸಿದ್ದಾರೆ.
ಉಪನ್ಯಾಸಕರ ಗೌರವಧನ ಬಿಡುಗಡೆಗೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಇಲ್ಲ ಸಲ್ಲದ ತಾಂತ್ರಿಕ ಕಾರಣಗಳನ್ನು ನೀಡುತ್ತಿದ್ದಾರೆ. ಈವರೆಗೆ ಏನಿಲ್ಲವೆಂದರೂ ಮೂರು ಬಾರಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಅರುಹಲಾಗಿದೆ. ಇಷ್ಟಾದರೂ ಅವರ ಕಣ್ಣು ತೆರೆಯದಿರುವುದು ದುರದೃಷ್ಟಕರ ಎಮದು ಮಂಜುನಾಥ್ ಬೇಸರಿಸಿದ್ದಾರೆ.