ಪಂಜಾಬ್ನಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ! ಇಂದಿನ ಸ್ಥಿತಿಯಲ್ಲಿ ಬಹುಮತ ಸಾಧ್ಯವಾ?
ಕೇಂದ್ರ ಸರ್ಕಾರ ಕೃಷಿ ಮಸೂದೆಗಳ ವಿರುದ್ಧ ತೀವ್ರ ಪ್ರತಿಭಟನೆ ಸಾಕ್ಷಿಯಾಗಿರುವ ಪಂಜಾಬ್ನಲ್ಲಿ ರಾಜಕೀಯವೂ ಗರಿಗೆದರಿದೆ. ಬಿಜೆಪಿಯೊಂದಿಗೆ ಮೂರು ದಶಕಗಳಿಂದ ಮೈತ್ರಿ ಮಾಡಿಕೊಂಡು, ಎನ್ಡಿಎ ಭಾಗವಾಗಿದ್ದ ಶಿರೋಮಣಿ ಅಕಾಲಿ ದಳ ಮೈತ್ರಿಕೂಟದಿಂದ ಹೊರಬಂದಿದೆ.
ಇದು ರೈತರ ಪ್ರತಿಭಟನೆಯ ನಡುವೆಯೂ ರಾಜಕೀಯ ಪಕ್ಷಗಳ ರಾಜಕೀಯವನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ. ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವಾಗಲೇ ಚುನಾವಣೆಯ ಸದ್ದು ಸುದ್ದಿಯಾಗಲು ಪುಷ್ಠಿ ನೀಡಿದೆ.
ಅಕಾಲಿ ದಳ ಎನ್ಡಿಎಯಿಂದ ಹೊರಗುಳಿದಿರುವುದು ಸ್ವಾಗರ್ತಾಹ, ಬಿಜೆಪಿಯು 2020ರ ಚುನಾವಣೆಯಲ್ಲಿ ಪಂಜಾಬ್ನ 117 ಕ್ಷೇತ್ರಗಳಿಯೂ ಸ್ವಂತತ್ರವಾಗಿ ಸ್ಪರ್ಧಿಸಲಿದೆ ಎಂದು ಬಿಜೆಪಿ ಮುಖಂಡ ಮದನ್ ಮೋಹನ್ ಮಿತ್ತಲ್ ಹೇಳಿದ್ದಾರೆ. ಅಲ್ಲದೆ, ಯಥಾ ಪ್ರಕಾರ ವಿವಿಧ ಪಕ್ಷದ ನಾಯಕರು ಪಕ್ಷಕ್ಕೆ ಸೆಳೆಯುವ ಬಿಜೆಪಿ, ಪಂಜಾಬ್ನಲ್ಲೂ ಅಕಾಲಿ ದಳದ ಹಲವು ನಾಯಕರು ತಮ್ಮ ಸಂಪರ್ಕದಲ್ಲಿದ್ದು ಅವರೆಲ್ಲರೂ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ, ಶಿರೋಮಣಿ ಅಕಾಲಿ ದಳ ಏಕಾಂಗಿಯಾಗಿ ಸ್ಪರ್ಧಿಸಿದರೆ ಬಹುಮತ ಗಳಿಸಲು ಸಾಧ್ಯವೇ ಇಲ್ಲ ಎಂದೂ ಅವರು ಹೇಳಿದ್ದಾರೆ. ಆದರೆ, ಕಳೆದ 2017ರ ವಿಧಾನಸಭಾ ಚುನಾವಣೆಯ ಫಲಿತಾಂಶ ನೋಡಿದರೆ, ಬಿಜೆಪಿಗೂ ಬಹುಮತ ಪಡೆಯಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಬಿಜೆಪಿಗರ ಮುಂದಿಡುತ್ತದೆ.
2017 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಕಾಲಿ ದಳ ಮೈತ್ರಿಯೊಂದಿಗೆ ಸ್ಪರ್ಧಿಸಿದ್ದವು. ಒಟ್ಟು ಕ್ಷೇತ್ರಗಳಲ್ಲಿ ಅಕಾಲಿದಳ 94 ಮತ್ತು ಬೆಜೆಪಿ 23 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಈ ಪೈಕಿ ಅಕಾಲಿ ದಳವು 14 ಕ್ಷೆತ್ರಗಳಲ್ಲಿ ಗೆದ್ದರೆ, ಬಿಜೆಪಿ ಕೇವಲ 2 ಸ್ಥಾನಗಳನ್ನಷ್ಟೇ ಪಡೆದುಕೊಂಡಿತ್ತು. ಇದಲ್ಲದೆ, ಕಾಂಗ್ರೆಸ್ 79 ಸ್ಥಾನಗಳೊಂದಿಗೆ ಬಹುಮತ ಗಳಿಸಿ ಸರ್ಕಾರ ರಚಿಸಿದರೆ, ಆಮ್ ಆದ್ಮಿ ಪಕ್ಷ 19 ಸ್ಥಾನಗಳನ್ನು ಗೆದ್ದು ಪ್ರಮುಖ ವಿಪಕ್ಷವಾಗಿ ಹೊರಹೊಮ್ಮಿತ್ತು.
ದೇಶಾದ್ಯಂತ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಂಜಾಬ್ನಲ್ಲಿ ಇನ್ನೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಮುಂದಿನ ಚುನಾವಣೆಯಲ್ಲೂ ಗರಿಷ್ಟ ಸ್ಥಾನಗಳನ್ನು ಗೆಲ್ಲುತ್ತೇವೆಂದು ಬೀಗುತ್ತಿದೆ. ಅಲ್ಲದೆ, ವಿಪಕ್ಷವಾಗಿರುವ ಆಮ್ ಆದ್ಮಿ ಪಕ್ಷವು ಮತ್ತಷ್ಟು ವಿಸ್ತರಣೆಗೊಳ್ಳುತ್ತಿದೆ. ಹೀಗಿರುವ ಸಂದರ್ಭದಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಎರಡೂ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಲಾರವು. ಬಿಜೆಪಿಗೆ ಕೇಂದ್ರದ ಮತ್ತು ಮೋದಿಯವರ ಪ್ರಭಾವನ್ನು ಬಳಿಸಿಕೊಂಡು ಗೆಲ್ಲಬಹುದು ಎಂದುಕೊಂಡಿದ್ದರೆ ಅದೂ ಕೂಡ ಭ್ರಮನಿರಸನವೇ ಆಗಿದೆ. 2017ರ ಚುನಾವಣೆಯಲ್ಲೂ ಮೋದಿಯವರ ಪ್ರಭಾಗ ಪಂಜಾಬ್ನಲ್ಲಿ ಕೆಲಸ ಮಾಡಿಲ್ಲ.
ಇದನ್ನೂ ಓದಿ: ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ NDA ಮೈತ್ರಿ ಮುರಿದು ಹೊರಬಂದ ಅಕಾಲಿ ದಳ!
ಅಕಾಲಿ ದಳ ಮತ್ತು ಬಿಜೆಪಿ ನಡುವಿನ ವೈಮನಸ್ಯ ಈಗ ಉದ್ಭಿಸಿರುವುದೂ ಅಲ್ಲ. ಕೇಂದ್ರ ಸರ್ಕಾರ ಸಿಎಎ ಜಾರಿಗೆ ಮುಂದಾದಾಗಲೇ ಅದನ್ನು ಅಕಾಲಿ ದಳ ವಿರೋಧಿಸಿತ್ತು. ಅಲ್ಲಿಂದ ಮೈತ್ರಿಯಲ್ಲಿ ಬಿರುಕು ಮೂಡಿದೆ. ಈಗ ಕೇಂದ್ರ ಕೃಷಿ ನೀತಿ ವಿರುದ್ಧ ಪಂಜಾಬ್ನಲ್ಲಿ ರೈತರ ಆಕ್ರೋಶ ತಾರಕಕ್ಕೇರಿದ್ದು, ಎನ್ಡಿಎಯಲ್ಲಿ ಮುಂದುವರಿದರೆ ಪಂಜಾಬ್ ರೈತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಆಲೋಚನೆಯಲ್ಲಿ ಅಕಾಲಿ ದಳಕ್ಕೆ ಸರ್ಕಾರದಿಂದ ಹೊರಬರಲು ನಿರ್ಧರಿಸಿದೆ. ಅಲ್ಲದೆ, ಕೇಂದ್ರ ಸಚಿವೆಯಾಗಿದ್ದ ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಈ ಹಿಂದೆ ಅಕಾಲಿ ದಳವು ಎನ್ಡಿಎಯಿಂದ ಹೊರಬರದಿದ್ದರೆ ಬಿಜೆಪಿಗರೇ ಇವರನ್ನು ಹೊರದಬ್ಬುತ್ತಾರೆ ಎಂದು ಹೇಳಿದ್ದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, “ಪಂಜಾಬ್ನಲ್ಲಿ ಕೃಷಿ ಮಸೂದೆಯ ಬಗ್ಗೆ ಜನರಿಗೆ ಅರಿವು ಮೂಢಿಸುವಲ್ಲಿ ಅಕಾಲಿದಳ ವಿಫಲವಾಗಿದೆ ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿದ ನಂತರ ಅಕಾಲಿ ದಳದ ನಾಯಕರಿಗೆ ಬೇರೆ ಆಯ್ಕೆಇಲ್ಲ. ಅಕಾಲಿ ದಳದ ಇಂದಿನ ನಿರ್ಧಾರ ರಾಜಕೀಯ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ನಾಟಕ. ಮುಖ ಉಳಿಸಿಕೊಳ್ಳಲು ರೈತರ ಹೋರಾಟ ಮಾಡುತ್ತಿದೆ. ಅಂತಿಮವಾಗಿ ಇನ್ನಷ್ಟು ರಾಜಕೀಯ ದುಸ್ಥಿತಿಗೆ ಬಂದಿದ್ದಾರೆ. ಅವರಿಗೆ ಪಂಜಾಬ್ನಲ್ಲೂ ಸ್ಥಾನ ಇಲ್ಲ, ಕೇಂದ್ರದಲ್ಲೂ ಸ್ಥಾನ ಇಲ್ಲ ಎಂಬಂತಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ಕೃಷಿ ನೀತಿ ರೈತ ವಿರೋಧಿಯಾಗಿದೆ ಎಂದು ಸಚಿವ ಸ್ಥಾನಕ್ಕೆ ಕೇಂದ್ರ ಸಚಿವೆ ರಾಜೀನಾಮೆ!