ಕಾಮಗಾರಿ ಪೂರ್ಣಗೊಳ್ಳದ ಉಕ್ಕಿನ ಸೇತುವೆಯನ್ನು ಪ್ರಾಚೀನ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಎಎಪಿ ಕಿಡಿ

ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿರುವ ಉಕ್ಕಿನ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿ ಆರಂಭಗೊಂಡು ಮೂರು ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಮೇಲ್ಸೇತುವೆಗೆ ಅಳವಡಿಸಲಾಗಿರುವ ಕಬ್ಬಿಣಗಳು ತುಕ್ಕು ಹಿಡಿಯುತ್ತಿದ್ದು, ಪ್ರಚೀನ ಕಾಲದ ಪಳಿಯುಳಿಕೆಯಂತೆ ಕಾಣಲಾರಂಭಿಸಿದೆ. ಕಾಮಗಾರಿ ಪೂರ್ಣಗೊಳಿಸದೆ ಜನರ ತೆರಿಗೆ ಹಣವನ್ನು ಕೊಳ್ಳೆ ಹೊಡೆದು ನುಂಗುತ್ತಿರುವ ಸರ್ಕಾರ, ಮೇಲ್ಸೇತುವೆಯನ್ನು ಪ್ರಾಚೀನ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಿ ಎಂದು ಆಮ್‌ ಆದ್ಮಿ ಪಕ್ಷದ ಸಹ ಸಂಚಾಲಕ ಹಾಗೂ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ವ್ಯಂಗ್ಯವಾಡಿದ್ದಾರೆ.
ನಗರದ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಬಳಿ ಆಮ್ ಆದ್ಮಿ ಪಕ್ಷದಿಂದ ನಡೆದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸುಮಾರು 3 ವರ್ಷಗಳ ಹಿಂದೆ ಅಂದರೆ ಜೂನ್ 30, 2017 ರಂದು ಕಾರ್ಯಾದೇಶವಾಗಿನಿಂದ ಕೇವಲ ಶೇ 40 ರಷ್ಟು ಕಾಮಗಾರಿ ಪೂರ್ಣಗೊಂಡಿರುವುದನ್ನು ನೋಡಿದರೆ ಬಿಬಿಎಂಪಿಯ ಆಡಳಿತ ವೈಖರಿಗೆ ಕನ್ನಡಿಯಾಗಿದೆ‌.
ಈ ಕಾಮಗಾರಿಯ ಅವಧಿ 18 ತಿಂಗಳು ಅಂದರೆ 2019ರ ಮಾರ್ಚ್ ಅಂತ್ಯಕ್ಕೆ ಮುಗಿಸಬೇಕಿತ್ತು, ಈಗಾಗಲೇ ಬರೋಬ್ಬರಿ 27 ತಿಂಗಳುಗಳು ಕಳೆದಿವೆ. 2020 ಮುಗಿಯುತ್ತಾ ಬಂದರೂ ಅದರ ಸುಳಿವಿಲ್ಲ. ಈ ಉಕ್ಕಿನ ಸೇತುವೆಯನ್ನು ಪ್ರಾರಂಭಿಸುವಾಗ ಅಂದಾಜು ಮಾಡಿದ್ದ ಯೋಜನಾ ವೆಚ್ಚ 19 ಕೋಟಿ. ಈಗಾಗಲೇ ಎರಡು ಬಾರಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿದ್ದು 60 ಕೋಟಿಗೆ ಮುಟ್ಟಿದೆ. ಇದೇ ರೀತಿ ಎಲ್ಲಾ ಕಾಮಗಾರಿಗಳನ್ನು ಕಾಲಾವಧಿಯಲ್ಲಿ ಮುಗಿಸದೆ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಈಗ ಇಲ್ಲಿ ಕಾಮಗಾರಿ ಆರಂಭಿಸಿದರೆ ಹಿಂದೆಂದೂ ಕಾಣದಷ್ಟು ಸಂಚಾರ ದಟ್ಟಣೆ ಉಂಟಾಗುತ್ತದೆ. ಶಿವಾನಂದ ಸರ್ಕಲ್ ಮಾತ್ರವಲ್ಲದೆ ಸುತ್ತಲಿನ  ಮಲ್ಲೇಶ್ವರ, ಆನಂದರಾವ್ ವೃತ್ತ ಹಾಗೂ ಇನ್ನಿತರೆ ಕಡೆಗಳಲ್ಲೂ ಸಂಚಾರ ದಟ್ಟಣೆ ವಿಪರೀತವಾಗಲಿದೆ.
ಮೊದಲು ಮೇಲ್ಸೇತುವೆ ಉದ್ದವನ್ನು 326 ಮೀ.ಗೆ ನಿಗದಿ ಮಾಡಲಾಗಿತ್ತು. ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷದ ನಂತರ ರೇಸ್‌ಕೋರ್ಸ್ ರಸ್ತೆ ದಿಕ್ಕಿಗೆ ಮೇಲ್ಸೇತುವೆ ಉದ್ದವನ್ನು 493 ಮೀ.ಗೆ ಏರಿಕೆ ಮಾಡಲಾಗಿದೆ ಎಂಬುದು ಏಕೆ ಎಂದು ಅಧಿಕಾರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಸಂಚಾರ ದಟ್ಟಣೆಯಿಂದ ಕಿರಿಕಿರಿ ಅನುಭವಿಸುತ್ತಿರುವ ಜನರಿಗೆ ಉತ್ತಮ ಸೌಕರ್ಯ ಒದಗಿಸುತ್ತೇವೆ ಎಂದು ಆರಂಭಿಸುವ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮುಂದೂಡಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿ, ಹಣ ನುಂಗುವ ಹುನ್ನಾರವಾಗಿದೆ. ಈ ಕೂಡಲೇ ಈ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಮುಗಿದಿರುವ ಕಾಮಗಾರಿಯ ಗುಣಮಟ್ಟ ಸಹ ಕಳಪೆ ಆಗಿದ್ದು ಈಗಾಗಲೇ ಹಾಕಿರುವ ಉಕ್ಕಿನ ಕಂಬಗಳ ಸಾಮರ್ಥ್ಯವೂ ಸಹ ಅನುಮಾನಸ್ಪದವಾಗಿದ್ದು ಅರ್ಧ ಕಾಮಗಾರಿ ಮುಗಿಸಿ ನಿಲ್ಲಿಸಿರುವ ಕಂಬಗಳು ತುಕ್ಕು ಹಿಡಿದಿವೆ.
 ದೆಹಲಿ ಸರ್ಕಾರ ಈಗಾಗಲೇ ಸುಮಾರು 25 ಕ್ಕೂ ಹೆಚ್ಚು ಫ್ಲೈಓವರ್‌ಗಳನ್ನು ಸುಮಾರು 4 ವರ್ಷಗಳ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದೆ, ಇದು ಎಂಜಿನಿಯರಿಂಗ್ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.
ವಿಕಾಸಪುರಿಯಿಂದ ಮೀರಾಭಾಗ್ ಎಲಿವೇಟೆಡ್ ಕಾಮಗಾರಿ ಒಂದು ಕ್ರಾಂತಿಕಾರಕ ಯೋಜನೆ ಎಂದೇ ಕರೆಯಬಹುದು
ಈ ಯೋಜನೆಯ ಒಟ್ಟಾರೆ ಉದ್ದ: 4300, ವೆಚ್ಚ: ರೂ .559.60 ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಿದ್ದ ಯೋಜನೆಗೆ ಖರ್ಚಾಗಿದ್ದು  445 ಕೋಟಿ, ಉಳಿತಾಯ ರೂ 114.60 ಕೋಟಿ  ಈ ಕಾಮಗಾರಿ ಮಂಜೂರಾದ ದಿನಾಂಕ 24.07.2016 ಪೂರ್ಣಗೊಂಡ ದಿನಾಂಕ: 21.07.2017   ಕೇವಲ ಒಂದು ವರ್ಷದ ಅವಧಿಯಲ್ಲಿ ಉದ್ದನೆಯ ಎಲಿವೇಟೆಡ್ ಕಾಮಗಾರಿ ಮುಗಿಸಿರುವುದು ನಿಜಕ್ಕೂ ಹೆಮ್ಮೆಯ ಸಾಧನೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ
ಈ ಮೇಲಿನ ಎರಡು ನಿದರ್ಶನಗಳು ಮಾತ್ರ ನಿಮ್ಮ ಮುಂದೆ ಇರಿಸಲಾಗಿದೆ. ಕಳೆದ 6 ವರ್ಷಗಳಲ್ಲಿ ಇಂತಹ 20 ಕ್ಕೂ ಹೆಚ್ಚು ಯಶಸ್ವಿ ಕಾಮಗಾರಿಗಳನ್ನು ಮುಗಿಸಿದ ನಿದರ್ಶನವಿದೆ.
ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸದಿದ್ದರೆ ಎಲ್ಲಾ ಅಪೂರ್ಣ ಕಾಮಗಾರಿಗಳ ಎದುರು ಸರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮೀಕಾಂತ್ ರಾವ್, ಉಪಾಧ್ಯಕ್ಷ ಸುರೇಶ್ ರಾಥೋಡ್, ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಮುಖ್ಯ ವಕ್ತಾರ ಶರತ್ ಖಾದ್ರಿ, ಜ್ಯೋತೀಶ್, ರಾಜಾಜಿನಗರ ಕ್ಷೇತ್ರದ ಹಿರಿಯ ಮುಖಂಡ ಗುರುಮೂರ್ತಿ, ವಿಜಯ್ ಕುಮಾರ್, ಜಗದೀಶ್ ಚಂದ್ರ, ಸತೀಶ್ ಗೌಡ ಜನನಿ ಭರತ್, ಪೂರ್ಣಿಮ ನಾಯ್ಡು, ಅಲ್ಪಸಂಖ್ಯಾತ ಘಟಕದ ಫರೀದ್ ಇದ್ದರು.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights