ದೇಶಕ್ಕೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ಎಂದಿಗೂ ಹೇಳಲಿಲ್ಲ – ಕೇಂದ್ರ ಸರ್ಕಾರ ಯುಟರ್ನ್!
ಇಡೀ ದೇಶಕ್ಕೆ ಕೋವಿಡ್ -19 ಲಸಿಕೆ ನೀಡಲಾಗುವುದು ಎಂದು ಕೇಂದ್ರ ಎಂದಿಗೂ ಹೇಳಲಿಲ್ಲ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಹೌದು.. ಇಡೀ ಜಗತ್ತಿನ ಜನತೆಗೆ ಸಾವಿನ ಭಯ ಹುಟ್ಟಿಸಿದ ಮಹಾಮಾರಿ ಕೊರೊನಾ ಲಸಿಕೆ ದೇಶದ ಎಲ್ಲಾ ಜನತೆಗೆ ಸಿಗುವ ನಿರೀಕ್ಷೆ ಸದ್ಯ ಕೇಂದ್ರದ ಹೇಳಿಕೆಯಿಂದ ಹುಸಿಯಾಗಿದೆ.ಪ್ರತಿ ಭಾರತೀಯ ನಾಗರಿಕನಿಗೆ ಕೋವಿಡ್ -19 ಲಸಿಕೆ ಹಾಕುವ ಕೇಂದ್ರದ ಯಾವುದೇ ಯೋಜನೆ ಇಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ದೇಶದ ಎಲ್ಲ ಜನರಿಗೂ ಲಸಿಕೆ ನೀಡುವುದಾಗಿ ಎಲ್ಲಿಯೂ ಹೇಳಿಲ್ಲ ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಗತ್ತಿನ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರಮಾಣ ಮತ್ತು ಸಾವಿನ ಪ್ರಮಾಣ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಇದೇ ಪ್ರಮಾಣ ಕಾಯ್ದುಕೊಳ್ಳುವ ಮೂಲಕ ಸೋಂಕು ಮತ್ತಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಬಿಜೆಪಿ ನಾಯಕರು ತಾವು ಗೆದ್ದರೆ ಇಡೀ ಬಿಹಾರಕ್ಕೆ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಿಗೆ ಮತ್ತೊಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕರು ಇಡೀ ದೇಶಕ್ಕೆ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ಉಲ್ಟಾ ಹೊಡೆದಿರುವ ಕೇಂದ್ರ ಆರೋಗ್ಯ ಇಲಾಖೆ, ” ಕೊರೋನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಇಡೀ ದೇಶದ ಜನರಿಗೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಎಂದಿಗೂ ಮಾತನಾಡಿಯೇ ಇಲ್ಲ” ಎಂದು ಹೇಳುವ ಮೂಲಕ ಜನರಿಗೆ ಉಚಿತ ಲಸಿಕೆ ನೀಡುವ ಭರವಸೆಗೆ ಉಲ್ಟಾ ಹೊಡೆದಿದೆ.
ಜುಲೈ 2021 ರ ವೇಳೆಗೆ ಕೇಂದ್ರ ಸುಮಾರು 300-400 ಡೋಸ್ ಲಸಿಕೆಗಳನ್ನು ಖರೀದಿಸುವ ಸಾಧ್ಯತೆಯಿದೆ. 2 ವಾರಗಳಲ್ಲಿ ಎಸ್ಐಐ ತನ್ನ ಲಸಿಕೆಗಾಗಿ ತುರ್ತು ಬಳಕೆಯ ಪರವಾನಗಿಯನ್ನು ಪಡೆಯಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲ್ಲಾ ಹೇಳಿದ್ದಾರೆ.