ಬಾಲಕಿಯ ಅತ್ಯಾಚಾರ-ಕೊಲೆ ಪ್ರಕರಣ: ಅಪರಾಧಿಗೆ ಮರಣದಂಡನೆ ಶಿಕ್ಷೆ
ಉತ್ತರ ಪ್ರದೇಶದ ಎಂಟು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಹಂತಕನಿಗೆ ಮರಣದಂಡನೆ ವಿಧಿಸಿ ಫಿರೋಜ್ ಬಾದ್ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಫಿರೋಜ್ ಬಾದ್ ನ ಸಿರ್ಸಾಗಾಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಾಪುರ್ ಗ್ರಾಮದಲ್ಲಿ ಕಳೆದ ವರ್ಷ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. 2019ರ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಪ್ರಕರಣವನ್ನು 20 ತಿಂಗಳ ಕಾಲ ವಿಚಾರಣ ನಡೆಸಿದ ನ್ಯಾಯಾಲಯ ಅತ್ಯಾಚಾರಿಗೆ ಪೋಸ್ಕೋ ಕಾಯ್ದೆಯಡಿ ಮರಣ ದಂಡನೆ ಶಿಕ್ಷೆ ವಿಧಿಸಿದೆ.
2019 ಮಾರ್ಚ್ 17 ರಂದು ನೆರೆ ಮನೆಯವರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ 8 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ರಾತ್ರಿಯಾದರೂ ಆ ಬಾಲಕಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದಾಗ ರಾತ್ರಿ 10 ಗಂಟೆ ಸುಮಾರಿನಲ್ಲಿ ಶಿವ ಶಂಕರ್ ಎಂಬಾತನ ಜೊತೆಯಲ್ಲಿ ಆ ಬಾಲಕಿಯನ್ನು ನೋಡಿದ್ದಾಗಿ ಕೆಲವರು ಮಾಹಿತಿ ನೀಡಿದ್ದರು. ಮಾರನೇ ದಿನ ಕತ್ತು ಹಿಸುಕಿದ ರೀತಿಯಲ್ಲಿ ಗೋಧಿ ಹೊಲದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು.
ಇದೇ ಸಂದರ್ಭದಲ್ಲಿ ಆರೋಪಿ ಶಿವ ಶಂಕರ್ ಮತ್ತು ಆತನ ಪೋಷಕರು ಊರಿನಿಂದ ಪಲಾಯನ ಮಾಡಿದ್ದರು. ಇದರ ಆಧಾರದ ಮೇಲೆ ಬಾಲಕಿಯ ಪೋಷಕರು ದೂರು ದಾಖಲಿಸಲಾಗಿತ್ತು. ಪೋಕ್ಸೋ ಕಾಯ್ದೆ ಹಾಗೂ ಅತ್ಯಾಚಾರ, ಕೊಲೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು.
10 ರೂ ಕೊಟ್ಟು ಬಾಲಕಿಯನ್ನು ಪುಸಲಾಯಿಸಿದ್ದ ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ನಂತರ ಸಾಕ್ಷಿ ನಾಶಪಡಿಸಲು ಆಕೆಯನ್ನು ಕೊಲೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಾಲ್ಕು ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಇದನ್ನೂ ಓದಿ: ರೈತ ಪ್ರತಿಭಟನೆ: ಬೀದಿಯಲ್ಲಿ ರಕ್ತಪಾತವನ್ನು ತಪ್ಪಿಸಲು, ಮೋದಿ ಸರ್ಕಾರ ಸಂಸತ್ತಿನಲ್ಲಿ ಬೆವರು ಸುರಿಸಬೇಕು