ತೀವ್ರಗೊಂಡ ರೈತರ ಹೋರಾಟ: ಡಿಸೆಂಬರ್ 08 ರಂದು ಭಾರತ್ ಬಂದ್!
ರೈತ ವಿರೋಧಿ ಕೃಷಿ ನೀತಿಗ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇನ್ನು ಮುಂದೆ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಕೃಷಿ ನೀತಿಗಳನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿರುವ ರೈತರು ಡಿಸೆಂಬರ್ 08 ರಂದು ಭಾರತ್ ಬಂದ್ಗೆ ಕರೆಕೊಟ್ಟಿದ್ದಾರೆ.
ಸರ್ಕಾರದ ಜೊತೆ ಮಾತುಕತೆಯಿಂದ ಪ್ರಯೋಜನವಿಲ್ಲ. ಅವರು ಕಾಯ್ದೆಗಳನ್ನು ವಾಪಸ್ ಪಡೆಯಲು ಮುಂದಾಗುತ್ತಿಲ್ಲ. ಹಾಗಾಗಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ. ಹಾಗಾಗಿ ಮಂಗಳವಾರ ಭಾರತ್ ಬಂದ್ ನಡೆಸಲಿದ್ದೇವೆ. ದೆಹಲಿಯ ಪ್ರತಿ ರಸ್ತೆಗಳನ್ನು, ಪ್ರತಿ ಟೋಲ್ಗಳನ್ನು ಬಂದ್ ಮಾಡುತ್ತೇವೆ ಎಂದು ರೈತರು ಘೋಷಿಸಿದ್ದಾರೆ.
ಮಂಗಳವಾರದಂದು ಇಡೀ ದೇಶದ್ಯಾಂತ ಬಂದ್ ಬಂದ್ ಆಚರಿಸಲು ತೀರ್ಮಾನಿಸಿದ್ದೇವೆ. ಈ ಮೂರು ಕರಾಳ ಕಾಯ್ದೆಗಳು ವಾಪಸ್ ಆಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಗುಡುಗಿದ್ದಾರೆ.
ಲಾಠೀ ಏಟು, ಜಲಫಿರಂಗಿ ಮತ್ತು ಅಶ್ರವಾಯುಗಳನ್ನು ಸಿಡಿಸಿ ರೈತರನ್ನು ಬಗ್ಗುಬಡಿಯಲು ಯತ್ನಿಸಿದ ಸರ್ಕಾರ ಕಳೆದ ಮೂರು ದಿನಗಳಿಂದ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿತ್ತು. ಆದರೆ ರೈತರು ಕೇಂದ್ರದ ವಾದಗಳನ್ನು ಒಪ್ಪದೆ, 3 ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಪಟ್ಟು ಹಿಡಿದು ಹೋರಾಟ ಮುಂದುವರೆಸಿದಾಗ ಅವರ ಮೇಲೆ ಸಾಂಕ್ರಾಮಿಕ ಕಾಯ್ದೆ ಉಲ್ಲಂಘನೆಯ ಆರೋಪಗಳನ್ನು ಹೊರಿಸಿದೆ. ದೆಹಲಿ ಪೊಲೀಸರು ಈ ಕುರಿತು ರೈತ ಹೋರಾಟಗಾರರಿಗೆ ನೋಟಿಸ್ ನೀಡಿದ್ದಾರೆ.
ಎಂಎಸ್ಪಿ ಕೊಡುತ್ತೇವೆ ಎಂಬ ಸರ್ಕಾರದ ಮಾತನ್ನು ನಾವು ನಂಬುವುದಿಲ್ಲ. ಸ್ವಾಮಿನಾಥನ್ ಆಯೋಗದ ವರದಿಯಂತೆ ರೈತ ಬೆಳೆದ ಬೆಳಗೆ ಖರ್ಚು ಸೇರಿ ಒಂದೂವರೆ ಪಟ್ಟು ಬೆಲೆ ನಿಗದಿ ಮಾಡಬೇಕು. ಇದಕ್ಕಾಗಿ ಕಾನೂನು ತರಬೇಕೆಂದು ಆಗ್ರಹಿಸಿದ್ದಾರೆ. ಅದೇ ಸಮಯದಲ್ಲಿ ನೀತಿ ಆಯೋಗವು ಕಾರ್ಪೊರೇಟ್ಗಳ ಪರವಾಗಿ ಬ್ಯಾಟಿಂಗ್ ಮಾಡುತ್ತಾ ಕೃಷಿ ಕಾಯ್ದೆಗಳನ್ನು ಸಮರ್ಥಿಸುವುದನ್ನು ಎಐಕೆಎಸ್ಸಿಸಿ ಖಂಡಿಸಿದೆ.
ಇದನ್ನೂ ಓದಿ: ರೈತರ ಹೋರಾಟಕ್ಕೆ ತಮಿಳು ನಟ ಕಾರ್ತಿ ಬೆಂಬಲ!