ಮತ್ತೆ ಭುಗಿಲೆದ್ದ ಸಂಪುಟ ಸದ್ದು; ಬಿಜೆಪಿಯಲ್ಲಿ ಹೊಸಬರು-ಹಳಬರ ನಡುವೆ ಜಟಾಪಟಿ!
ಗ್ರಾಮ ಪಂಚಾಯಿತಿ ಚುನಾವಣೆ ನೆಪವಾಗಿಟ್ಟುಕೊಂಡು ನೆನೆಗುದಿಗೆ ಬಿದ್ದಿರುವ ರಾಜ್ಯ ಸಂಪುಟ ವಿಸ್ತರಣೆ ಕೂಗು ಮತ್ತೆ ಬಿಜೆಪಿಯಲ್ಲಿ ಸದ್ದು ಮಾಡತೊಡಿಗಿದೆ.
ಲಂಡನ್ನಲ್ಲಿ ರೂಪಾಂತರಗೊಂಡಿರುವ ಹೊಸ ಕೊರೊನಾ ವೈರಸ್ ರಾಜ್ಯದಲ್ಲಿ ಮತ್ತೆ ಅಟ್ಟಹಾಸ ಮೆರೆಯುತ್ತಾ ಆತಂಕ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರವನ್ನು ಕಾಡಲಾರಂಭಿಸಿದೆ. ಈಗಾಗಲೇ ಕೊರೊನಾ ಹಾಗೂ ಲಾಕ್ಡೌನಿಂದ ರಾಜ್ಯದ ಜನತೆ ಹಾಗೂ ಸರ್ಕಾರ ಹೊಡೆತ ಅನುಭವಿಸಿದ್ದು, ಮತ್ತೆ ಅಟ್ಟಹಾಸ ಮುಂದುವರೆದರೆ ಏನು ಎಂಬ ಚಿಂತೆ ಸರ್ಕಾರವನ್ನು ಕಾಡುತ್ತಿದೆ.
ಈ ನಡುವೆ, ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು ಬಿಜೆಪಿಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸಂಪುಟ ವಿಸ್ತರಣೆಗೆ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಕೊಡಿಸಲು ಹರಸಾಹಸ ನಡೆಸುತ್ತಿದ್ದಾರೆ.
ರಾಜ್ಯ ವಿಜೆಪಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅರುಣ್ಸಿಂಗ್ರನ್ನು ಭೇಟಿ ಮಾಡಿರುವ ವಿಜಯೇಂದ್ರ, ಸಂಪುಟ ವಿಸ್ತರಣೆಗೆ ವರಿಷ್ಠರಿಂದ ಅನುಮತಿ ಪಡೆಯುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ಆಗಬಹುದು. ನಮ್ಮ ಜೊತೆ ಬಂದ ಎಲ್ಲರಿಗೂ ಸಚಿವ ಸ್ಥಾನ ಸಿಗುತ್ತದೆ ಎಂದು ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 838 ಕೋಟಿ ಮೊತ್ತದ ಭಾರೀ ಹಗರಣ: ಸ್ಥಳೀಯ ಶಾಸಕ ಭಾಗಿ?
ಸದ್ಯದಲ್ಲೇ ಸಿ.ಪಿ. ಯೋಗೇಶ್ವರ್ ಸಂಪುಟ ಸೇರುತ್ತಾರೆ. ಹಾಗೆಯೇ ನಮ್ಮೊಂದಿಗೆ ಬಂದ ಎಲ್ಲರಿಗೂ ಸಚಿವ ಸ್ಥಾನ ಕೊಡಿಸಲು ಪ್ರಯತ್ನಿಸುತ್ತಿದ್ದೇನೆ. ಈ ವಿಷಯದಲ್ಲಿ ಸಿಎಂ ಯಡಿಯೂರಪ್ಪ ಮತ್ತು ವರಿಷ್ಠರು ತೀರ್ಮಾನಿಸುತ್ತಾರೆ ಎಂದಿದ್ದಾರೆ.
ಈ ಬಾರಿಯೂ ಸಂಪುಟ ವಿಸ್ತರಣೆ ವೇಳೆ ಮಾಜಿ ಸಚಿವ ಉಮೇಶ್ ಕತ್ತಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬ ಊಹಾಪೋಹಗಳಿಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ನಮ್ಮ ಜತೆ ಬಂದವರಿಗೆ ಮಂತ್ರಿ ಸ್ಥಾನ ಪಕ್ಕಾ ಎಂದಿರುವ ರಮೇಶ್ ಜಾರಕಿಹೊಳಿ ವಿರುದ್ದ ಶಾಸಕ ರೇಣುಕಾಚಾರ್ಯ ಹಾಗೂ ಅತೃಪ್ತ ಬಿಜೆಪಿ ಶಾಸಕರು ಮತ್ತೆ ಆಸಮಧಾನ ಹೊರಹಾಕುವ ಸಾಧ್ಯತೆ ಇದೆ. ಈಗಾಗಲೇ ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಪಕ್ಕಾ ಆಗುವುದರಿಂದ ರಮೇಶ್ ಜಾರಕಿಹೊಳಿ ಪಾತ್ರ ಇದೆ ಎಂಬುದನ್ನು ಅರಿತ ರೇಣುಕಾಚಾರ್ಯ, ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಮತ್ತೆ ಈ ವಿಚಾರ ಬಿಜೆಪಿಯಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಒಂದೇ ದಿನದಲ್ಲಿ 27 ಮಂಗಗಳ ದಯಾಮರಣಗೊಳಿಸಿದ ನಾಸಾ ಪ್ರಯೋಗಾಲಯ..!