ರೈತ ಹೋರಾಟಕ್ಕೆ ಬೆಂಬಲ: ಕೇರಳದಿಂದ ಕಾಶ್ಮೀರಕ್ಕೆ ಸೈಕಲ್ ಜಾಥಾ ಹೊರಟ ವಿದ್ಯಾರ್ಥಿ!
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ರೈತರ ಹೋರಾಟ 52ನೇ ದಿನಕ್ಕೆ ಕಾಲಿಟ್ಟಿದೆ. ದೇಶಾದ್ಯಂತ ರೈತರಿಗೆ ಬೆಂಬಲವ್ಯಕ್ತವಾಗುತ್ತಿದೆ. ವೈದ್ಯರು, ವಿದ್ಯಾರ್ಥಿಗಳು, ವಕೀಲರು ರೈತರನ್ನು ಬೆಂಬಲಿಸಿ ದೆಹಲಿ ಗಡಿಗೆ ತೆರಳಿದ್ದಾರೆ. ಅಂತೆಯೇ ಕೇರಳದ ವಿದ್ಯಾರ್ಥಿಯೊಬ್ಬ ರೈತ ಹೋರಾಟವನ್ನು ಬೆಂಬಲಿಸಿ ಕಾಶ್ಮೀರಕ್ಕೆ ಸೈಕಲ್ನಲ್ಲಿ ಹೊರಟಿದ್ದಾನೆ.
ಕೇರಳದ ತಿರುವನಂತಪುರಂನ 22 ವರ್ಷದ ವಿದ್ಯಾರ್ಥಿ ಜಿಬಿನ್ ಜಾರ್ಜ್ ಎಂಬಾತ ತನ್ನ ಊರಿನಿಂದ ಕಾಶ್ಮೀರದವರೆಗೂ ಸೈಕ್ಲಿಂಗ್ ಮಾಡುವ ಮೂಲಕ ರೈತರಿಗೆ ನೈತಿಕ ಬೆಂಬಲ ಸೂಚಿಸಲು ಮುಂದಾಗಿದ್ದಾನೆ.
ತಿರುವನಂತಪುರಂನ ಅಟ್ಟಿಂಗಲ್ನಲ್ಲಿರುವ ರಾಜಧಾನಿ ಹೊಟೇಲ್ ಮ್ಯಾನೇಜ್ಮೆಂಟ್ & ಕೆಟರಿಂಗ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪದವಿ ಓದುತ್ತಿರುವ ಜಾರ್ಜ್, ತಾನು ಸಾಗುವ ಹಾದಿಯ ಉದ್ದಕ್ಕೂ ಸಿಗುವ ಎಲ್ಲಾ ಊರುಗಳಲ್ಲಿಯೂ ಹೊಸ ಕೃಷಿ ನೀತಿಗಳಿಂದಾಗುವ ಪರಿಣಾಮಗಳು, ರೈತರ ಸಮಸ್ಯೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾನೆ.
ಪಶ್ಚಿಮ ಕರಾವಳಿಯ ಮಂಗಳೂರು, ಕಾರವಾರ ಹಾದಿಯಲ್ಲಿ ಗೋವಾ ತಲುಪಿ, ಅಲ್ಲಿಂದ ಮಹಾರಾಷ್ಟ್ರದ ಮೇಲೆ ಹಾದು ಕಾಶ್ಮೀರ ತಲುಪಲಿದ್ದಾನೆ, ಕಾಶ್ಮೀರದಿಂದ ವಾಪಸ್ ಹೊರಟು ದೆಹಲಿ ರೈತ ಪ್ರತಿಭಟನಾ ಸ್ಥಳಕ್ಕೆ ಹೋಗುವುದಾಗಿ ವಿದ್ಯಾರ್ಥಿ ತಿಳಿಸಿದ್ದಾನೆ. ದೆಹಲಿಯಲ್ಲಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿ ಮುಂದಾಗಿದ್ದಾನೆ.
ಇದನ್ನೂ ಓದಿ: ರೈತರಿಗಾಗಿ ಹೊಲಿಗೆ ಸೇವೆ: ವಿದೇಶಿ ಉದ್ಯೋಗದ ಅವಕಾಶವನ್ನೇ ಮುಂದೂಡಿದ ಯುವಕ