ಕರ್ಫ್ಯೂ ವೇಳೆ ಬಸ್ ಇದೆ ಸಾರ್ವಜನಿಕರಿಲ್ಲ : ರಾಜ್ಯ ಸರ್ಕಾರದಿಂದ ಮತ್ತೆ ಗೊಂದಲದ ನಿಲುವು..?
ವಿದೇಶದಲ್ಲಿ ರೂಪಾಂತರ ಕೊರೊನಾ ವೇಗವಾಗಿ ಹರಡಿ ಆತಂಕ ಸೃಷ್ಟಿಸಿದ ಬೆನ್ನೆಲ್ಲೆ ಇಂದಿನಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೊಸ ಆದೇಶ ಇಂದು ರಾತ್ರಿ 10 ಗಂಟೆಯಿಂದ ಜಾರಿಗೆ ಬರಲಿದ್ದು ಆಟೋ, ಓಲಾ, ಊಬರ್, ಪಬ್, ಬಾರ್, ರೆಸ್ಟೊರೆಂಟ್ ಹೀಗೇ ಎಲ್ಲವನ್ನೂ ಬಂದ್ ಮಾಡಲಾಗುತ್ತದೆ. ತುರ್ತು ಸಂಚಾರ ಬಿಟ್ಟರೆ ಎಲ್ಲವೂ ಬಂದ್ ಎಂದು ಹೇಳಲಾಗುತ್ತಿದೆ. ಆದರೆ ರಾತ್ರಿ ಹೊತ್ತು ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಕೊಡಲಾಗಿದೆ. ಇದರಿಂದ ಗೊಂದಲ ಸೃಷ್ಟಿಯಾಗಿದೆ. ರಾತ್ರಿ ಕರ್ಫ್ಯೂ ಜಾರಿಯಾದರೆ ಸಾರ್ವಜನಿಕರು ಹೊರಬರುವ ಹಾಗಿಲ್ಲ. ಅಂತಾದರೆ ಬಸ್ ನಲ್ಲಿ ಓಡಾಡುವವರು ಯಾರ ಎನ್ನುವ ಗೊಂದಲ ಸೃಷ್ಟಿಯಾಗಿದೆ.
ಎಲ್ಲಾ ವಾಹನಗಳ ಸಂಚಾರ ಬಂದ್ ಮಾಡುವುದಾದರೆ ಬಸ್ ಕೂಡ ಬಂದ್ ಮಾಡಿ ಎಂದು ಓಲಾ, ಊಬರ್ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಬಸ್ ನಲ್ಲಿ ಬಾರದ ಕೊರೊನಾ ಆಟೋ, ಊಬರ್ ನಲ್ಲಿ ಬರುತ್ತಾ..? ನಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈ ಬಂದ್ ವಿಚಾರ ಬಿಟ್ಟು ಬೇರೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡಿವೆ. ಒಂದು ವೇಳೆ ಎಲ್ಲವೂ ಬಂದ್ ಮಾಡಿ ಬಸ್ ಸಂಚಾರಕ್ಕೆ ಅವಕಾಶ ಕೊಟ್ಟರೆ ನಾವು ಕೂಡ ನಮ್ಮ ವಾಹನಗಳನ್ನು ಹೊರತರುತ್ತೇವೆ ಎಂದು ಓಲಾ ಊಬರ್ ನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಂಜೆ ಮಾರ್ಗಸೂಚಿ ಬರಲಿದ್ದು ಒಂದು ವೇಳೆ ಮಾರ್ಗಸೂಚಿಯಲ್ಲಿ ಇದೇ ರೀತಿಯ ಗೊಂದಲ ಇದ್ದರೆ ನಾವು ವಾಹನಗಳನ್ನು ರಸ್ತೆಗಿಳಿಸುತ್ತೇವೆ ಎಂದು ಓಲಾ ಊಬರ್ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.