ಟ್ರಾಕ್ಟರ್ ಪರೇಡ್: ರೈತರ ಮೇಲೆ ಪೊಲೀಸರ ಅಶ್ರುವಾಯು ದಾಳಿ; ಪ್ರತಿಭಟನಾಕಾರ ಸಾವು!
ಜನಗಣರಾಜ್ಯೋತ್ಸವಕ್ಕೆ ಕರೆ ಕೊಟ್ಟಿದ್ದ ರೈತರು, ದೆಹಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಈ ವೇಳೆ ಕೆಂಪುಕೋಟೆಯತ್ತ ಹೊರಟಿದ್ದ ರೈತರನ್ನು ಐಟಿಓ ಸರ್ಕಲ್ನಲ್ಲಿ ತಡೆದ ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿ, ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ ಟ್ರಾಕ್ಟರ್ ಮಗುಚಿಕೊಂಡಿದ್ದು, ಪ್ರತಿಭಟನೆಯಲ್ಲಿದ್ದ ಒಬ್ಬ ರೈತ ಸಾವನ್ನಪ್ಪಿದ್ದಾರೆ.
ರೈತರು ದೆಹಲಿಯೊಳಗೆ ಪ್ರವೇಶಿಸದಂತೆ ತಡೆಯಲು ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಅಲ್ಲದೆ, ಬ್ಯಾರಿಕೇಡ್ಗಳನ್ನು ದಾಟಿ ರೈತರು ಬಂದರೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲು ಬಸ್ಗಳನ್ನೂ ಪೊಲೀಸರು ತಂದು ನಿಲ್ಲಿಸಿದ್ದರು ಎಂದು ಆರೋಪಿಸಲಾಗಿದೆ.
ದೆಹಲಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ರೈತರು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಇಂದು ಟ್ರಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ರಾಜ್ಪಾತ್ನಲ್ಲಿ ಅಧಿಕೃತ ಪಥಸಂಚಲನ ನಡೆದ ನಂತರ, ರೈತರು ಪರೇಡ್ ನಡೆಸಬೇಕು ಎಂದು ಹೇಳಿದ್ದ ಪೊಲೀಸರು ದೆಹಲಿಯೊಳಗೆ ಪ್ರವೇಶಿಸಬಾರದು, ಗಡಿ ರಸ್ತೆಗಳಲ್ಲಿಯೇ ಪರೇಡ್ ಮುಗಿಸಬೇಕು ಎಂದು ಹೇಳಿದ್ದರು.
ಈ ಮಧ್ಯೆ, ದೆಹಲಿ ಪ್ರವೇಶಿಸಿದ ರೈತರ ಮೇಲೆ ಪೊಲೀಸರು ಆಶ್ರುವಾಯು-ಜಲಪಿರಂಗಿ, ಲಾಠಿ ಚಾರ್ಜ್ ನಡೆಸಿದ್ದಾರೆ.
ಇದನ್ನೂ ಓದಿ: ಟ್ರಾಕ್ಟರ್ ಪರೇಡ್: ದೆಹಲಿ ಗಡಿಯಲ್ಲಿ ರೈತರ ಮೇಲೆ ಪೊಲೀಸರ ಅಶ್ರುವಾಯು ದಾಳಿ!