ಟ್ರಾಕ್ಟರ್ ಪರೇಡ್: ದೆಹಲಿ ಗಡಿಯಲ್ಲಿ ರೈತರ ಮೇಲೆ ಪೊಲೀಸರ ಅಶ್ರುವಾಯು ದಾಳಿ!
ಇಂದು ದೇಶಾದ್ಯಂತ 72ನೇ ಗಣರಾಜ್ಯೋತ್ಸವದ ಸಂಭ್ರಮ ನಡೆಯುತ್ತಿದೆ. ಆದರೆ, ದೆಹಲಿ ಗಡಿಯಲ್ಲಿ ರೈತರು ಪೊಲೀಸರ ಆಶ್ರುವಾಯು ದಾಳಿಗೆ ಎದೆಯೊಡ್ಡಿ ನಿಂತಿದ್ದಾರೆ.
ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ನೀತಿಗಳ ವಿರುದ್ದ ರೈತರ ಪ್ರತಿಭಟನೆ ಇಂದಿಗೆ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಇಂದಿನ ಗಣರಾಜ್ಯ ದಿನವನ್ನು ಜನಗಣರಾಜ್ಯೋತ್ಸವವನ್ನಾಗಿ ನಿರ್ಧರಿಸಿದ್ದ ರೈತರು, ದೆಹಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಈ ವೇಳೆ ರ್ಯಾಲಿ ಭಾಗಿಯಾಗಿದ್ದ ರೈತರ ಮೇಲೆ ದೆಹಲಿ ಪೊಲೀಸರು ಆಶ್ರುವಾಯು ಮತ್ತು ಲಾಠಿ ಚಾರ್ಜ್ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿಯ ಸಿಂಘುಗಡಿಯಲ್ಲಿ ರೈತರ ಟ್ರಾಕ್ಟರ್ಗಳು ಸಾಲು ಸಾಲಾಗಿ ಮೆರವಣಿಗೆ ಹೊರಟಿವೆ. ರೈತರ ಪರೇಡ್ಅನ್ನು ಅನುಮತಿಸಿ ರೂಟ್ ಮ್ಯಾಪ್ಕೂಡ ಹಾಕಿಕೊಟ್ಟಿದ್ದ ಪೊಲೀಸರೇ, ಪರೇಡ್ ತಡೆಯಲು ಬೆಳ್ಳಂಬೆಳಗ್ಗೆಯೇ ಬ್ಯಾರಿಕೇಟ್ಗಳನ್ನು ರಸ್ತೆಗೆ ಅಡ್ಡಲಾಗಿ ಜೋಡಿಸಿದ್ದರು.
ಇದರಿಂದ ಸಿಟ್ಟಾಗಿರುವ ರೈತರು 12 ಗಂಟೆಗೆ ನಿಗದಿ ಮಾಡಿದ್ದ ರ್ಯಾಲಿಯನ್ನು 08 ಗಂಟೆಗೇ ಆರಂಭಿಸಿದ್ದಾರೆ. ಪೊಲೀಸರ ಬ್ಯಾರಿಕೇಡ್ ಭೇದಿಸಿ ಟ್ರಾಕ್ಟರ್ ರ್ಯಾಲಿ ಹೊರಟಿದ್ದಾರೆ. ಶಾಂತಿಯುತವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಎಡೆ ಮಾಡಿಕೊಡದೆ ಪರೇಡ್ ಆರಂಭವಾಗಿದೆ. ಸಾವಿರಾರು ಟ್ರಾಕ್ಟರ್ಗಳು ಇಂದು ದೆಹಲಿಯ ಐದು ಗಡಿಭಾಗಗಳಿಂದ ರಾಜಧಾನಿಯ ಸುತ್ತಲೂ ಇರುವ ಹೆದ್ದಾರಿಯಲ್ಲಿ ಪರೇಡ್ ನಡೆಸುತ್ತಿದ್ದಾರೆ. ಆದರೆ, ಅವರ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿಯೂ ರೈತರ ಟ್ರಾಕ್ಟರ್ ಪರೇಡ್ ನಡೆಯಲಿದೆ. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹಲವಾರು ರೈತ ಹೋರಾಟಗಳು ನಡೆಯುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಟ್ರಾಕ್ಟರ್ ರ್ಯಾಲಿ ನಡೆಯಲಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಐದು ಹೆದ್ದಾರಿಗಳಿಂದ ಟ್ರಾಕ್ಟರ್ ರ್ಯಾಲಿ ಫ್ರೀಡಂ ಪಾರ್ಕ್ ಕಡೆಗೆ ಹೊರಡಲಿವೆ.
ಇದನ್ನೂ ಓದಿ: ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಗಣತಂತ್ರ ಪ್ರತಿಭಟನಾ ಪರೇಡ್; ಗಡಿಯಲ್ಲಿ ರೈತರ ಶಕ್ತಿ ಪ್ರದರ್ಶನ!