ಕನ್ನಡವೆಂಬ ಅಸ್ಮಿತೆ… ಮತ್ತು ಹಿಂದಿಯೆಂಬ ಕೋಮುವಾದದ ತನುಜಾತೆ…!

ಹಾವೇರಿಯಲ್ಲಿ ನಡೆಯಲ್ಲಿರುವ ಕೋವಿಡ್ ನಂತರದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿರುವ ಆಯ್ಕೆಯಾಗಿರುವ ದೊಡ್ಡರಂಗೇಗೌಡರರ ಸಾಹಿತ್ಯದ ಬಗ್ಗೆ ಕನ್ನಡ ಜಗತ್ತಿನಲ್ಲಿ ಹಲವಾರು ಪ್ರಶ್ನೆಗಳು ದಶಕಗಳಿದ ಉಳಿದುಕೊಂಡಿವೆ. ದೊರಂಗೌ ಅವರು ಹೆಚ್ಚೆಚ್ಚು ಸಾಹಿಯ ಬರೆದಷ್ಟು ಕನ್ನಡಿಗರ ತಲ್ಲಣಗಳು ಹೆಚ್ಚಾಗುತ್ತಿರುವುದು ದುರಂತವೇ ಸರಿ. ಅದಕ್ಕೆ ಲಂಕೇಶ್ ಅವರು ದೊರಂಗೌ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯ ಎರಡರ ಪರಿಚಯವನ್ನೂ ಮಾಡಿಕೊಡುವ ರೀತಿ “ದೊಡ್ಡರಂಗೇಗೌಡ್ರು-ಹಾಕಿಕೊಂಡ್ರು ಪೌಡ್ರು” ಅಂತ ಬರೆದಿದ್ದರಂತೆ. ಕಳೆದ ವರ್ಷ ಮಾನ್ಯರು ಮೋದಿಯನ್ನು ಹೊಗಳಿ ಆತುರಾತುರವಾಗಿ ಬರೆದಿದ್ದ ಮಕುಟಮಣಿ ಎಂಬ ಬಾಲವಾಡಿ ಬರಹವನ್ನು ಕಂಡು ಸಾಹಿತ್ಯಾಸಕ್ತರು ಕಂಗಾಲಾಗಿದ್ದರು. ಹಾಗೂ ಅದರಲ್ಲಿ ಬಿಜೆಪಿಗರೇ ನಾಚಿ ನೀರಾಗುವಷ್ಟಿದ್ದ ಮೋದಿ ಭಜನೆಯನ್ನು ನೋಡಿದ ಮೇಲೆ ಮಾನ್ಯರು ಹಿಂದೂತ್ವವಾದಿಗಳ “ಥಿಂಕ್‌ಟ್ಯಾಂಕ್” ಅಲ್ಲ ಬದಲಿಗೆ “ಥಿಂಕ್ ಬಕೆಟ್” ಮಾತ್ರ ಎಂಬ ತೀರ್ಮಾನಕ್ಕೆ ಬಂದಿದ್ದರು.

ಅದಕ್ಕೆ ಮತ್ತಷ್ಟು ಪುರಾವೆ ಒದಗಿಸುವಂತೆ ದೊರಂಗೌ ಅವರು ಸಮ್ಮೇಳನಾಧ್ಯಕ್ಷಗಿರಿ ಘೋಷಣೆಯಾದ ಮರುಕ್ಷಣವೇ ಹಿಂದಿಯು ರಾಷ್ಟ್ರಭಾಷೆ, ಅದನ್ನು ಎಲ್ಲರೂ ಕಲಿಯುವುದೇ ವಿಹಿತವೆಂದು ಅಪ್ಪಣೆ ಕೊಡಿಸಿದ್ದಾರೆ. ಇದರಿಂದ ದೊರಂಗೌ ಅವರನ್ನು ಆಯ್ಕೆ ಮಾಡಿದ್ದು ಕನ್ನಡ ಸಮ್ಮೇಳನಕ್ಕೋ ಅಥವಾ ಹಿಂದಿ ಸಮ್ಮೇಳನಕ್ಕೋ ಎಂಬ ಜಿಗ್ನಾಸೆ ಪ್ರಾರಂಭವಾದೊಡನೆ ಒಂದಷ್ಟು ಕನ್ನಡಪರ ಮಾತನಾಡಿ ಮಾನ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇದಕ್ಕೆ ಸ್ವಲ್ಪ ದಿನಗಳ ಹಿಂದೆ ಭದ್ರಾವತಿಯಲ್ಲಿ ರಾಪಿಡ್ ಆಕ್ಷನ್ ಫೋರ್ಸ್ ನ ಘಟಕವೊಂದನ್ನು ಉದ್ಘಾಟನೆ ಮಾಡಲು ಬಂದಿದ್ದ ಗೃಹಮಂತ್ರಿ ಅಮಿತ್ ಶಾ ಅವರ ಕಾರ್ಯಕ್ರಮದ ಬ್ಯಾನರ್, ಉದ್ಘಾಟನಾ ಫಲಕ ಯಾವುದರಲ್ಲೂ ಕನ್ನಡದ ಸುಳಿವೂ ಇರಲಿಲ್ಲ. ಬೇರೆ ಯಾವ ರಾಜ್ಯದಲ್ಲೂ ಈ ರೀತಿ ಸ್ಥಳೀಯ ಭಾಷೆಯನ್ನು ಮೂಲೆಗುಂಪು ಮಾಡಿ ಹಿಂದಿಯನ್ನು ಮಾತ್ರ ನೆರೆಸುವುದಿಲ್ಲ ಎಂಬ ಕೂಗೂ ಎದ್ದಿತ್ತು.

ಇದನ್ನೂ ಓದಿ: ರೈತ ವಿರೋಧಿ ಕೃಷಿ ನೀತಿಗಳು: ಪ್ರಧಾನಿ ಮೋದಿ V/S ಮುಖ್ಯಮಂತ್ರಿ ಮೋದಿ!

ಇನ್ನು ಸಿಟಿ ರವಿಯಂಥ ಹಿಂದೂತ್ವವಾದಿ-ಹಿಂದಿವಾದಿ ರಾಜಕಾರಣಿಗಳಂತೂ ಹಿಂದಿ ಹೇರಿಕೆಯ ವಿರೋಧವನ್ನು ಹಿಂದಿ ಹಾಗೂ ರಾಷ್ಟ್ರದ್ರೋಹವೆಂಬಂತೆ ಚಿತ್ರಿಸಲು ಪ್ರಾರಂಭವಾಗಿ ತುಂಬಾ ದಿನಗಳಾಯಿತು.

ಇವೆಲ್ಲಾ ಪರಸ್ಪರ ಸಂಬಂಧಗಳಿರುವ ವಿಷಯಗಳಾಗಿವೆ. ಹಿಂದಿ-ಹಿಂದೂ-ಹಿಂದೂಸ್ಥಾನ್ ಎಂಬ ಭಾರತೀಯ ಹಿಟ್ಲರ್ ಶಾಹಿಯ ಕಾರ್ಯಯೋಜನೆಗಳ ಭಾಗವಾಗಿದೆ. ಆದ್ದರಿಂದಲೇ ಹಿಂದಿಯ ಯಾಜಮಾನಿಕೆಯನ್ನು ನ್ಯೂ ನಾರ್ಮಲ್ ಮಾಡುವ ಯಾವ ಪ್ರಯತ್ನಗಳನ್ನು ಈ ಭಾರತೀಯ ನಾಜಿಗಳು ಬಿಟ್ಟುಕೊಡುತ್ತಿಲ್ಲ.

ಅದರಲ್ಲೂ ಎರಡನೇ ಬಾರಿ ಅಧಿಕಾರಕ್ಕೆ ಬಂದಮೇಲೆ ತಮ್ಮ ಆರ್ಯನ್ ಅಜೆಂಡಾಗಳೆನ್ನೆಲ್ಲಾ ತೀವ್ರವಾಗಿ ಮತ್ತು ಆಕ್ರಮಣಶೀಲವಾಗಿ ಜಾರಿ ಮಾಡುತ್ತಿರುವ ಮೋದಿ ಸರ್ಕಾರದ ಬಹುಮುಖ್ಯ ಸಾಂಸ್ಕೃತಿಕ-ರಾಜಕೀಯ ಹುನ್ನಾರಗಳಲ್ಲಿ ಹಿಂದಿಯ ಯಾಜಮಾನಿಕೆ ಮತ್ತು ಹೇರಿಕೆಯನ್ನು ಸ್ಥಾಪಿಸಿ ಕನ್ನಡದಂಥ ಜನಭಾಷೆಗಳ ಅಸ್ಮಿತೆಯನ್ನು ಹಿಂದಿಗೆ ಅಧೀನಗೊಳಿಸುವುದು ಪ್ರಮುಖವಾಗಿದೆ. ಇದನ್ನು ಅಧಿಕಾರಕ್ಕೆ ಬಂದ ಮೊದಲ ವರ್ಷದಿಂದಲೇ ಮೋದಿ ಸರ್ಕಾರ ಪ್ರಾರಂಭಿಸಿತು.

ಹಿಂದಿ ದಿವಸ್-ಹಿಂದೂತ್ವ ದಿವಸ್?

ಒಂದು ದೇಶಕ್ಕೆ ಒಂದೇ ಧರ್ಮ, ಒಂದೇ ಚುನಾವಣೆ, ಒಂದೇ ತೆರಿಗೆ ಎನ್ನುವ ಬಿಜೆಪಿ-ಆರೆಸ್ಸೆಸ್‌ಗಳ ಸರ್ವಾಧಿಕಾರಿ ಧೋರಣೆಯ ಭಾಗವಾಗಿ ಗೃಹಮಂತ್ರಿ ಅಮಿತ್ ಶಾ ಅವರು ಒಂದು ದೇಶಕ್ಕೆ ಒಂದು ಭಾಷೆ ಇರಬೇಕು ಮತ್ತು ಅದು ಹಿಂದಿಯೇ ಆಗಬೇಕು ಎಂದು ಕೂಡಾ ಪ್ರತಿಪಾದಿಸಿದ್ದರು. ೨೦೧೯ರ ಸೆಪ್ಟೆಂಬರ್-೧೪ರ ಹಿಂದಿ ದಿವಸ್ ಅಂದು ದೇಶವನ್ನುದ್ದೇಶಿಸಿ ಮಾಡಿದ್ದ ಟ್ವೀಟ್ ಒಂದರಲ್ಲಿ: ವಿವಿಧ ಭಾಷೆಗಳುಳ್ಳ ಭಾರತವು ವಿಶ್ವಮಾನ್ಯ ಸ್ಥಾನ ಪಡೆಯಬೇಕಾದರೆ ಒಂದೇ ಭಾಷೆಯ ಅಗತ್ಯವಿದೆ. ಈ ದೇಶದಲ್ಲಿ ಅತಿ ಹೆಚ್ಚಿನ ಜನ ಹಿಂದಿ ಭಾಷೆಯನ್ನು ಮಾತನಾಡುವುದರಿಂದ ಮತ್ತು ಅದಕ್ಕೆ ದೇಶವನ್ನು ಒಂದುಗೂಡಿಸುವ ಶಕ್ತಿ ಇರುವುದರಿಂದ ದೇಶದ ಜನರು ತಮ್ಮ ಮಾತೃಭಾಷೆಯ ಜೊತೆಜೊತೆಗೆ ಹಿಂದಿಯನ್ನು ಬಳಸಬೇಕು. ಹೀಗೆ ಮಾಡಿದಲ್ಲಿ ೨೦೨೨ರ ಹೊತ್ತಿಗೆ ಹಿಂದಿಗೆ ಜಗತ್ತಿನಲ್ಲಿ ಚಿರಸ್ಥಾಯಿಯಾದ ಸ್ಥಾ ದಕ್ಕುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಆಗಲೂ ಈ ಹಿಂದಿ ಸರ್ವಾಧಿಕಾರಿ ಧೋರಣೆಯ ವಿರುದ್ಧ ದೇಶಾದ್ಯಂತ ಪ್ರತಿರೋಧ ಭುಗಿಲೆದ್ದಿತ್ತು. ಅದರಿಂದ ಪಾಠ ಕಲಿತಿರುವ ಮೋದಿ ಪ್ರಭುತ್ವವು ಹಿಂದಿಯ ಸಾಂಸ್ಕೃತಿಕ ಯಾಜಮಾನ್ಯವನ್ನು ಸ್ಥಾಪಿಸುವ ಮೂಲಕ ಹಿಂದಿಯನ್ನು ಹೇರುವ ಪರೋಕ್ಷ ತಂತ್ರಗಳನ್ನು ಅನುಸರಿಸುತ್ತಿದೆ.

ಇದನ್ನೂ ಓದಿ: ಭೂಮಾಲೀಕರ ದರ್ಪ, ಭೂ ಹೀನ ದಲಿತರ ದೈನ್ಯತೆ ತೊಲಗಲು ಭೂಮಿ ರಾಷ್ಟ್ರೀಕರಣವಾಗಬೇಕು: ಅಂಬೇಡ್ಕರ್

ಹಾಗೆ ನೋಡಿದರೆ, ಈ ನಮ್ಮ ಬಹುಭಾಷಿಕ ಭಾರತದ ಮೇಲೆ ಹಿಂದಿಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೇರುವ ಹುನ್ನಾರಗಳನ್ನು ಬಿಜೆಪಿ ಸರ್ಕಾರ ನಿರಂತರವಾಗಿ ಮಾಡಿಕೊಂಡೇ ಬರುತ್ತಿದೆ. ಎರಡನೇ ಬಾರಿ ಅಧಿಕಾರಕ್ಕೆ ಏರಿದ ತರುಣದಲ್ಲೇ ಅದು ಪರಿಚಯಿಸಿದ ನವ ಶಿಕ್ಷಣ ನೀತಿಯ ಕರಡಿನಲ್ಲಿ ಆ ಪ್ರಯತ್ನವನ್ನು ನಡೆಸಿತ್ತು. ಆ ಕರಡಿನಲ್ಲಿ ಅದು ಹಿಂದಿಯನ್ನು ಹಿಂದಿಯೇತರ ರಾಜ್ಯದ ಮಕ್ಕಳು ಆರನೇ ತರಗತಿಯಿಂದ ಕಡ್ಡಾಯವಾಗಿ ಕಲಿಯಬೇಕೆಂಬ ಪ್ರಸ್ತಾಪವನ್ನು ಮಾಡಿತ್ತು. ಆದರೆ ಅದರ ವಿರುದ್ಧ ದಕ್ಷಿಣ ಹಾಗೂ ಪೂರ್ವ ಭಾರತದಲ್ಲಿ ಭುಗಿಲೆದ್ದ ಬಂಡಾಯದ ಕಾರಣದಿಂದಾಗಿ ಆ ಪ್ರಸ್ತಾಪವನ್ನು ಈಗ ಕರಡಿನಿಂದ ಹಿಂತೆಗೆದುಕೊಂಡಿತು. ಆದರೆ ಅಂತಿಮಗೊಂಡ ನೀತಿಯಲ್ಲಿ ತ್ರಿಭಾಶಾ ಸೂತ್ರದ ಮೂಲಕ ಹಿಂದಿಯನ್ನು ದಕ್ಷಿಣ ಹಾಗೂ ಪೂರ್ವ ಭಾರತದವರ ಮೇಲೆ ಹೇರುವುದರ ಜೊತೆಗೆ ಸಂಸ್ಕೃತದ ಯಾಜಮಾನಿಯನ್ನು ದೇಶೀಯ ಭಾಷೆಗಳ ಮೇಲೆ ಹೇರಿದೆ.

ಅದೇರೀತಿ ೨೦೧೮ರಲ್ಲಿ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನೂ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಲು ೪೦೦ ಕೋಟಿ ರೂ.ಗಳ ಅಭಿಯಾನವೊಂದನ್ನು ಬಿಜೆಪಿ ಸರ್ಕಾರ ಪ್ರಾರಂಭಿಸಿತ್ತು. ಜಗತ್ತಿನಲ್ಲಿ ಭಾರತವು ಎರಡನೇ ಅತಿದೊಡ್ಡ ಜನಸಂಖ್ಯೆಯುಳ್ಳ ದೇಶವಾಗಿದ್ದು, ಅವರೆಲ್ಲರ ಭಾಷೆ ಹಿಂದಿಯೇ ಆಗಿದೆಯೆಂದು ಬಿಜೆಪಿ ಇಡೀ ಜಗತ್ತಿನ ಎದುರು ಪ್ರತಿಪಾದಿಸಲು ಮುಂದಾಗಿತ್ತು. ಆದರೆ ಆಗಲು ದೊಡ್ಡ ಪ್ರತಿರೋಧ ಎದುರಾಗಿದ್ದರಿಂದ ಆ ಪ್ರಯತ್ನದಿಂದ ಹಿಂದೆ ಸರಿದಿತ್ತು.

ಬಹುಭಾಷಿಕ ಭಾರತದ ಮೇಲೆ ಆಡಳಿತಾತ್ಮಕವಾಗಿ ಹಿಂದಿ ಹೇರಲು ಸಾಂವಿಧಾನಾತ್ಮಕ ತೊಡಕಿರುವುದರಿಂದ, ಆರೆಸ್ಸೆಸ್- ಬಿಜೆಪಿ ಸರ್ಕಾರ ಹುಸಿ ರಾಷ್ಟ್ರೀಯತೆಯ ಪ್ಯಾಕೇಜಿನಲ್ಲಿ ಹಿಂದಿಯನ್ನು ಹೇರುತ್ತಿದೆ. ಅದಕ್ಕಾಗಿ ಅದು ಹಲವಾರು ಸುಳ್ಳುಗಳನ್ನು ಹೇಳುತ್ತಿದೆ:

ಅ) ಹಿಂದಿ ಮಾತ್ರ ರಾಷ್ಟ್ರ ಭಾಷೆ.

ಆ) ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಆಡುವ ಭಾಷೆ

ಇ) ಒಂದು ದೇಶಕ್ಕೆ ಒಂದೇ ಭಾಷೆ ಇದ್ದರೆ ವಿಶ್ವಮಾನ್ಯವಾಗಬಹುದು..ಇತ್ಯಾದಿ.

ಇದರ ಜೊತೆಗೆ ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕೆಂದು ಹೇಳುತ್ತಿದೆ. ಆದರೆ ಇವೆಲ್ಲವೂ ಹಸಿಸುಳ್ಳು ಮತ್ತು ಅರ್ಧಸತ್ಯಗಳಿಂದ ಕೂಡಿದ ಪ್ರಚಾರವಾಗಿದೆ. ಹಾಗೂ ಅವೈಜ್ನಾನಿಕ, ಅಪ್ರಜಾತಾಂತ್ರಿಕ ಮತ್ತು ವಿದ್ಯಾರ್ಥಿ-ಶಿಕ್ಷಣ ವಿರೋಧಿ ಪ್ರಸ್ತಾಪಗಳೂ ಆಗಿವೆ.

ಹಿಂದಿ ರಾಷ್ಯ್ರಭಾಷೆಯಲ್ಲ:

ಮೊದಲನೆಯದಾಗಿ ನಮ್ಮ ದೇಶದ ಸಂವಿಧಾನದಲ್ಲಿ ರಾಷ್ಟ್ರ್ರಭಾಷೆಯೆಂಬ ಪರಿಕಲ್ಪನೆಯೇ ಇಲ್ಲ. ಏಕೆಂದರೆ ಅಖಂಡ ಭಾರತದ ವಿಭಿನ್ನ ಜನಜೀವನದಲ್ಲಿ ಹಾಗೂ ನಾಗರೀಕತೆಯಲ್ಲಿ ಹಲವು ಸಾಮ್ಯತೆಗಳಿರುವುದು ನಿಜ. ಆದರೆ ಒಂದು ಆಧುನಿಕ ಅರ್ಥದಲ್ಲಿ ಭಾರತವು ಎಂದಿಗೂ ಒಂದು ರಾಷ್ಟ್ರೀಯತೆಯೂ ಆಗಿರಲಿಲ್ಲ. ರಾಷ್ಯ್ರವೂ ಆಗಿರಲಿಲ್ಲ. ಆದ್ದರಿಂದಲೇ ಇಡೀ ಭಾರತಕ್ಕೆ ಒಂದು ಎಂಬ ಯಾವ ರಾಷ್ಟ್ರಭಾಷೆಯೂ ವಿಕಸಿತಗೊಳ್ಳಲಿಲ್ಲ. ಹಾಗೆ ನೋಡಿದರೆ ಭಾರತ ಎಂಬ ಈ ಉಪಖಂಡದಲ್ಲಿ ಕನ್ನಡ, ತಮಿಳು, ಬಂಗಾಳಿ, ತೆಲುಗು, ಮರಾಠಿಯಂಥ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೇ ಹೊರತು ಹಿಂದಿಗಲ್ಲ. ವಾಸ್ತವವಾಗಿ ಈಗ ನಾವು ಬಳಸುತ್ತಿರುವ ದೇವನಾಗರಿ ಲಿಪಿಯ ಮತ್ತು ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿಗೆ ಇರುವುದು ಕೇವಲ ೧೨೦ ವರ್ಷಗಳ ಇತಿಹಾಸ ಮಾತ್ರ.

ಇದನ್ನೂ ಓದಿ:

ಹಾಗೆಯೇ ತಮಿಳು, ತೆಲುಗು, ಬಂಗಾಳಿ ಭಾಷೆಯಾಧಾರಿತ ರಾಷ್ಟ್ರೀಯತೆಗಳು ವಿಕಸನಗೊಂಡು ನೂರಾರು ವರ್ಷಗಳಾಗಿವೆ. ಆದರೆ ಭಾರತ ಎಂಬ ರಾಷ್ಟ್ರದ ಪರಿಕಲ್ಪನೆ ಉಗಮಗೊಂಡಿದ್ದೇ ಬ್ರಿಟಿಷ್ ವಿರೋಧಿ ಹೋರಾಟದ ಪ್ರಕ್ರಿಯೆಯಲ್ಲಿ..ಅಂದರೆ ಕೇವಲ ೨೦೦ ವರ್ಷಗಳಿಂದೀಚೆಗೆ.

ಹೀಗಾಗಿ ಕರ್ನಾಟಕವು ಭಾರತ ಜನನಿಯ ತನುಜಾತೆಯಲ್ಲ. ಬದಲಿಗೆ ಭಾರತವೇ ಕರ್ನಾಟಕವನ್ನೂ ಒಳಗೊಂಡಂತೆ ಈ ಉಪಖಂಡದ ಹಲವಾರು ರಾಷ್ಟ್ರೀಯತೆಗಳು ಒಟ್ಟುಗೂಡಿ ಜನ್ಮವಿತ್ತ ರಾಷ್ಟ್ರವಾಗಿದೆ.

ದೇವನಾಗರಿ ಹಿಂದಿ-ಕೋಮುವಾದದ ತನುಜಾತೆ

ಇಂದು ನಮ್ಮ ಸಂವಿಧಾನದಲ್ಲಿ ಬಳಸುತ್ತಿರುವ ಹಿಂದಿ ಭಾಷೆಯ ಹುಟ್ಟೂ ಸಹ ಭಾರತವನ್ನು ಆವರಿಸಿಕೊಂಡ ಕೋಮುವಾದಿ ರಾಜಕಾರಣದ ಫಲಿತಾಂಶವೇ ಆಗಿದೆ. ಹಿಂದಿಯ ಮೂಲ ಆಗಿನ ಮೊಘಲ್ ಸಂಸ್ಥಾನದ ರಾಜಧಾನಿಯಾಗಿದ್ದ ದೆಹಲಿಯಲ್ಲಿ ಬೀಡುಬಿಟ್ಟಿದ ಸೈನಿಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿದ್ದ ಖರಿಬೋಲಿ ಅಥವಾ ಹಿಂದೂಸ್ಥಾನಿಯಾಗಿದೆ. ಖಡಿಬೋಲಿ ಅಂದರೆ ಕಟ್ಟರ್ ಭಾಷೆ ಎಂದರ್ಥ. ಇದು ಒಂದು ರೀತಿಯಲ್ಲಿ ಪರ್ಶಿಯನ್ ಹಾಗೂ ಸ್ಥಳೀಯ ಭಾಷೆಗಳ ಮಿಶ್ರಣವೇ ಆಗಿತ್ತು. ಆದರೆ ದೇಶದ ಕೋಮುವಾದೀ ರಾಜಕಾರಣದ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಖರಿಬೋಲಿಯ ಪರ್ಷಿಯನೀಕರಣ ಹೆಚ್ಚಾಗಿ ಉರ್ದು ಭಾಷೆ ಹುಟ್ಟಿಕೊಂಡು ಪಾಕಿಸ್ತಾನದ ಆಡಳಿತ ಭಾಷೆಯಾಯಿತು. ಹಾಗೆಯೇ ಖರಿಬೋಲಿಯ ಸಂಸ್ಕೃತೀಕರಣ-ದೇವನಾಗರೀಕರಣದ ಮೂಲಕ ಹಿಂದಿ ಹುಟ್ಟುಕೊಂಡಿತು. ಹಾಗೆ ನೋಡಿದರೆ ಸ್ವಾತಂತ್ರ್ಯಾನಂತರದ ಇತ್ತೀಚಿನ ದಶಕಗಳವರೆಗೂ ಹಿಂದೀಯ ಖ್ಯಾತ ಬರಹಗಾರರೆಲ್ಲಾ ಉರ್ದು ವಿದ್ವಾಂಸರೂ ಅಗಿರುತ್ತಿದ್ದರು. ಆದರೆ ಭಾರತದ ಕೋಮುವಾದಿ ರಾಜಕಾರಣ ಭಾಷಿಕ ವಿಶ್ವಕ್ಕೂ ಹರಡಿ ಭಾರತದ ಗುರುತಿಗೆ ಒಂದು ಭಾಷೆಯ ಅಗತ್ಯವಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿತು.

ಈ ಐತಿಹಾಸಿಕ ಕಾರಣದಿಂದಾಗಿಯೇ ಸಂವಿಧಾನ ರಚನಾ ಸಭೆಯಲ್ಲೂ ಈ ಪ್ರಶ್ನೆ ಗಂಭೀರವಾಗಿ ಚರ್ಚೆಯಾಯಿತು. ಇದರ ಬಗ್ಗೆ ಅಧ್ಯಯನ ಮಾಡಿ ಸಲಹೆ ಕೊಡಲು ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಕೆ.ಎಂ. ಮುನ್ಷಿಯವರ ಸಮಿತಿಯೊಂದನ್ನು ರಚಿಸಲಾಗಿತ್ತು.
ಆ ಸಮಿತಿಯು ಭಾರತದಲ್ಲಿ ಯಾವ ಒಂದು ಭಾಷೆಯೂ ಅದರಲ್ಲೂ ಹಿಂದಿ ಭಾಷೆಯು ರಾಷ್ಟ್ರ ಭಾಷೆಯಾಗುವ ಅಗತ್ಯವಿಲ್ಲ, ಸಾಧ್ಯವೂ ಇಲ್ಲ ಎಂದು ವರದಿ ಕೊಟ್ಟಿತು.

ರಾಜ್ ಎಂದರೆ ರಾಷ್ಟ್ರವಲ್ಲ!

ಈ ಎಲ್ಲಾ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನವು ಹಿಂದಿ ಮತ್ತು ಇಂಗ್ಲಿಷನ್ನು ರಾಜ್‌ಭಾಷೆಯನ್ನಾಗಿ ಅಂಗೀಕರಿಸಿತು. ರಾಷ್ಟ್ರಭಾಷೆಯಾಗಿ ಅಲ್ಲ. ಸಂವಿಧಾನದ ಆರ್ಟಿಕಲ್ ೩೪೩ರಿಂದ ೩೫೧ರವರೆಗಿನ ವಿಧಿಗಳು ಇದನ್ನು ಸ್ಪಷ್ಟಪಡಿಸುತ್ತದೆ. ಅದು ದೇವನಾಗರಿ ಲಿಪಿಯಲ್ಲಿ ಬರೆಯಲ್ಪಡುವ ಹಿಂದಿಯನ್ನು ಸರ್ಕಾರದ ಅಧಿಕೃತ ಭಾಷೆಯನ್ನಾಗಿಯೂ, ಮುಂದಿನ ೧೫ ವರ್ಷಗಳವರೆಗೆ ಇಂಗ್ಲೀಷನ್ನು ಸಹ ಹಿಂದಿಯ ಜೊತೆಗೆ ಅಧಿಕೃತ ಭಾಷೆಯನ್ನಾಗಿ ಮುಂದುವರೆಸಬೇಕೆಂದು ಸ್ಪಷ್ಟಪಡಿಸುತ್ತದೆ. ೧೯೬೩ರ ಅಧಿಕೃತ ಭಾಷಾ ಮಸೂದೆಯು ಜಾರಿಯಾದ ನಂತರ ಇಂಗ್ಲೀಷನ್ನೂ ಸಹ ಕಾಲಾವಧಿಯ ಮಿತಿಯಲ್ಲದೆ ಅಧಿಕೃತ ಭಾಷೆಯಾಗಿ ಮುಂದುವರೆಸಲು ಆದೇಶಿಸಲಾಗಿದೆ. ಅಷ್ಟು ಮಾತ್ರವಲ್ಲ. ಆರ್ಟಿಕಲ್ ೩೪೮ರ ಪ್ರಕಾರ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟಿನ ವ್ಯವಹಾರದ ಅಧಿಕೃತ ಭಾಷೆ ಇಂಗ್ಲೀಷೇ ಆಗಿದೆ. ಅಲ್ಲದೆ ಎಲ್ಲಾ ಶಾಸನಸಭೆಗಳಲ್ಲೂ ಆಯಾ ರಾಜ್ಯಗಳ ಮಾತೃಭಾಷೆಯೊಂದಿಗೆ ಇಂಗ್ಲೀಷಿನಲ್ಲೂ ಮಸೂದೆಯನ್ನು ಮಂಡಿಸಬೇಕಿದೆ. ಹಾಗೂ ಕೇಂದ್ರದ ಸಂಸತ್ತಿನಲ್ಲಿ ಮಸೂದೆಗಳು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಮಂಡಿಸಬೇಕಾಗುತ್ತದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಖಂಡಿತ idiot ಅಲ್ಲ….! ಆದರೆ……….?

ಆದರೆ ಮಸೂದೆಗಳ ಮೂಲ ಅಧಿಕೃತ ರೂಪ ಇಂಗ್ಲೀಷೇ ಆಗಿದ್ದು ಹಿಂದಿ ಅದರ ಅನುವಾದವಾಗಿರುತ್ತದೆ.

ಹೀಗೆ ಸಾರಾಂಶದಲ್ಲಿ ಹಿಂದಿಯು ಸರ್ಕಾರಗಳ ನಡುವಿನ ಮತ್ತು ಸರ್ಕಾರ ಹಾಗೂ ಹಿಂದೀ ಭಾಷಿಕ ಜನರ ನಡುವಿನ ಸಂಪರ್ಕದ ಅಧಿಕೃತ ಭಾಷೆಯಾಗಿದೆಯೇ ವಿನಾ ಸಂವಿಧಾನದಲ್ಲಿ ಎಲ್ಲೂ ಅದನ್ನು ರಾಷ್ಟ್ರಭಾಷೆಯೆಂದು ಹೆಚ್ಚುಗಾರಿಕೆಯನ್ನು ನೀಡಿಲ್ಲ.

ಗುಜರಾತ್ ಹೈಕೋರ್ಟಿನ ತೀರ್ಮಾನ:

ಅಷ್ಟು ಮಾತ್ರವಲ್ಲ. ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಿ ಎಲ್ಲಾ ಮಾರಾಟದ ಸರಕುಗಳ ಮೇಲೆ ಕಡ್ಡಾಯವಾಗಿ ಅದರ ವಿವರಗಳನ್ನುಹಿಂದಿಯಲ್ಲಿ ನಮೂದಿಸಬೇಕೆಂದು ಆಗ್ರಹಿಸಿ ೨೦೧೦ರಲ್ಲಿ ಸುರೇಶ್ ಕಚ್ಚಡಿಯಾ ಎಂಬುವರು ಗುಜರಾತಿನ ಹೈಕೋರ್ಟಿನಲ್ಲಿ ದಾವೆಯೊಂದನ್ನು ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ದ್ವಿಸದಸ್ಯ ಪೀಠವು ಹಿಂದಿಯು ಭಾರತದ ಒಂದು ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲವೆಂದೂ ಹಾಗೂ ರಾಷ್ಟ್ರಭಾಷೆಯೆಂಬ ವರ್ಗೀಕರಣವೇ ಸಂವಿಧಾನದಲ್ಲಿಲ್ಲವೆಂದು ಸ್ಪಷ್ಟವಾದ ತೀರ್ಮಾನ ನೀಡಿದೆ.

ಇದಲ್ಲದೆ ಸಂವಿಧಾನದ ೮ ನೇ ಶೆಡ್ಯೂಲಿನಲ್ಲಿ ಕನ್ನಡ. ತೆಲುಗು, ತಮಿಳು, ಮರಾಠಿ, ಬಂಗಾಳಿ, ಅಸ್ಸಾಮಿ ಇನ್ನಿತರ ೨೨ ಭಾಷೆಗಳನ್ನು ಮಾನ್ಯ್ ಮಾಡಲಾಗಿದೆ. ಅದರಲ್ಲಿ ಹಿಂದಿ ಭಾಷೆ ಕೂಡ ಇಪ್ಪತ್ತೆರಡರಲ್ಲಿ ಒಂದು ಅಷ್ಟೆ. ಈ ಎಲ್ಲಾ ಭಾಷೆಗಳನ್ನು ಅಭಿವೃದ್ಧಿ ಮಾಡಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳಬೇಕೆಂಬ ಸಂವಿಧಾನವು ನಿರ್ದೇಶನವನ್ನೂ ನೀಡಿದೆ.

ಹೀಗೆ ರಾಜ್ ಭಾಷಾ ಮತ್ತು ಶೆಡ್ಯೂಲ್ ೮ ರಭಾಷೆ ಎಂಬ ಎರಡು ವರ್ಗೀಕರಣಗಳನ್ನು ಬಿಟ್ಟರೆ ನಮ್ಮ ಸಂವಿಧಾನದಲ್ಲೆಲ್ಲೂ ರಾಷ್ಟ್ರ ಭಾಷೆಯೆಂಬ ವರ್ಗೀಕರಣವಿಲ್ಲ.

ಶೆಡ್ಯೂಲ್-೮- ಹಿಂದಿ ವಸಾಹತುಶಾಹಿಯ ಅಸ್ತ್ರ? :

ಹಿಂದಿಯನ್ನು ಏಕೈಕ ರಾಷ್ಟ್ರಭಾಷೆಯನ್ನಾಗಿ ಹೇರಲು ಅಮಿತ್ ಶಾ ಹಾಗೂ ಇತರ ಆರೆಸ್ಸೆಸ್ಸಿಗರರೆಲ್ಲರೂ ಬಳಸುವ ಮತ್ತೊಂದು ವಾದವೆಂದರೆ ಹಿಂದಿಯನ್ನು ಭಾರತದಲ್ಲಿ ಅತಿ ಹೆಚ್ಚು ಜನ ಬಳಸುತ್ತಾರೆ ಎಂಬುದು. ೨೦೧೧ರ ಭಾಷಿಕ ಸೆನ್ಸಸ್‌ನಲ್ಲಿ ಹಿಂದಿ ಮಾತನಾಡುವವರ ಭಾಷೆ ಶೇ.೪೩ ಎಂದು ತೋರಿಸಲಾಗಿರುವುದನ್ನೂ ಸಹ ಅವರು ಅದಕ್ಕೆ ಪುರಾವೆಯಾಗಿ ನೀಡುತ್ತಾರೆ.

ಆದರೆ, ಈ ಭಾಷಾ ಸೆನ್ಸಸ್ ಮಾಡುವಾಗ ಜನರನ್ನು ಹಿಂದಿ ತಿಳಿದಿದೆಯೇ ಎಂದು ಕೇಳಲಾಗಿದೆಯೇ ವಿನಾ ಹಿಂದಿ ಮಾತೃಭಾಷೆಯೇ ಅಥವಾ ಮಾತನಾಡಬಲ್ಲರೇ ಎಂದಲ್ಲ.
ಎರಡನೆಯದಾಗಿ ೧೯೫೦ರಲ್ಲಿ ಶೇ.೨೦ ರಷ್ಟು ಮಾತ್ರ ಹಿಂದೀ ಭಾಷಿಕರದಿದ್ದದ್ದು ೨೦೧೧ರ ವೇಳೆಗೆ ಅದರ ಪ್ರಮಾಣ ಶೇ.೪೩ ಆಗಿದ್ದರ ಹಿಂದೆ ದೊಡ ಭಾಷಿಕ ವಸಾಹತು ರಾಜಕಾರಣವಿದೆ.

ಇದನ್ನೂ ಓದಿ: ರೈತ ವಿರೋಧಿ ಶಾಸನಗಳು: ಬಿಜೆಪಿಯ ಹತ್ತು ಸುಳ್ಳುಗಳು!

ಉದಾಹರಣೆಗೆ, ಉತ್ತರ ಭಾರತದಲ್ಲಿ ಎಲ್ಲಾ ಕಡೆ ಹಿಂದಿಯೇ ಮಾತೃ ಭಾಷೆ ಎಂಬ ಅಬಿಪ್ರಾಯವನ್ನು ಹರಿಬಿಡಲಾಗಿದೆ. ಆದರೆ ೨೦೧೧ರ ಬಿಹಾರದ ಭಾಷಿಕ ಸೆನ್ಸಸ್ ನ ವರದಿಯನ್ನೇ ಗಮನಿಸಿದರೆ ಸಾಕು. ಅದು ಎಂಥಾ ರಾಜಕೀಯ ಮಿಥ್ಯೆ ಎಂಬುದು ಅರ್ಥವಾಗುತ್ತದೆ.

ಬಿಹಾರದಲ್ಲಿ ಶೇ.೩೧ ಭಾಗ ಭೋಜ್‌ಪುರಿಯನ್ನೂ, ಶೇ.೨೫ ಭಾಗ ಮಗಹಿ ಯನ್ನೂ ಮಾತನಾಡುತ್ತಾರೆ. ಆದರೆ ಶೇ.೨೧ ಭಾಗ ಮಾತ್ರ ಹಿಂದಿ ಮಾತನಾದುತ್ತಾರೆ.

ಆದರೆ ಭೋಜ್‌ಪುರಿ ಮತ್ತು ಮಗಹಿ ಭಾಷೆಗಳು ಶೆಡ್ಯೂಲ್ ೮ ರಲಿ ಇಲ್ಲ. ಆದರೆ ಭಾಷಿಕ ಸೆನ್ಸಸ್ ನಡೆಸುವಾಗ ತಮ್ಮ ತಮ್ಮ ಮಾತೃಭಾಷೆಯನ್ನು ನೊಂದಾಯಿಸುವಾಗ ಶೆಡ್ಯೂಲ್ ೮ ರಲ್ಲಿರುವ ಭಾಷೆಯನ್ನು ಮಾತ್ರ ದಾಖಲಿಸಲಾಗುತ್ತದೆ!.

ಹೀಗಾಗಿ ಭಾಷಿಕ ಸೆನ್ಸಸ್‌ನಲ್ಲಿ ಇವರೆಲ್ಲರ ಮಾತೃಭಾಷೆಗಳೂ ಹಿಂದಿಯೆಂದೇ ನೊಂದಾಯಿತವಾಗುತ್ತದೆ.;
ಶೆಡ್ಶೂಲ್ ೮ ರಲ್ಲಿ ಕೇವಲ ೨೫೦೦೦ ಜನರು ಮಾತ್ರ ತಮ್ಮ ಮಾತ್ರೂಭಾಷೆಯೆಂದು ನೊಂದಾಯಿಸಿಕೊಂಡಿರುವ ಸಂಸ್ಕೃತಕ್ಕೂ ಸ್ಥಾನವಿದೆ. ಆದರೆ ತಲಾ ೨ ಕೋಟಿ ಭಾಷಿಕರಿರುವ ಭೋಜ್‌ಪುರಿ ಮತ್ತು ಮಗಹಿಗಳಿಗೆ ಶೆಡ್ಯೂಲ್ ೮ ರಲ್ಲಿ ಸ್ಥಾನ ನೀಡಲಾಗಿಲ್ಲ.

ಇತ್ತೀಚೆಗೆ ಭೋಜ್‌ಪುರಿಗೆ ಶೇಡ್ಯೂಲ್ ೮ ರಲ್ಲಿ ಸ್ಥಾನಮಾನ ಸಿಗಬೇಕೆಂದು ನಡೆಸಿದ ಹೋರಾಟವನ್ನು ಬಿಜೆಪಿ ವಿರೋಧಿಸಿದೆ. ಕಾರಣ ಹಿಂದಿ ಭಾಷಿಕರ ಅಧಿಕೃತ ಸಂಖೆ ಕಡಿಮೆಯಗುತ್ತದೆಂದು! ಈ ಕಾರಣದಿಂದಲೇ ಬಿಹಾರ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಕೋಟ್ಯಾಂತರ ಜನ ಮಾತನಾಡುತ್ತಿದ್ದ ಅವಧಿ ಭಾಷೆಯೂ ಸೆನ್ಸಸ್ ನಿಂದ ಕಣ್ಮರೆಯಾಗಿದೆ.

ಅದೇರೀತಿ ಬುಂದೇಲ್‌ಖಂಡಿ, ಚತ್ತೀಸ್‌ಘರಿ, ರಾಜಸ್ಥಾನಿ, ಹರಿಯಾಣ್ವಿ ಭಾಷೆಗಳು ಉತ್ತರ ಭಾರತದ ಕೋಟ್ಯಾಂತರ ಜನರ ಮಾತೃಭಾಷೆಯಾದರೂ ಅವುಗಳು ಶೆಡ್ಯೂಲ್ ೮ರಲ್ಲಿ ಇಲ್ಲವಾದ್ದರಿಂದ ಅವೆಲ್ಲವೂ ಹಿಂದಿ ಎಂದೇ ನೊಂದಾಯಿತವಾಗುತ್ತವೆ. ಶೆಡ್ಯೂಲ್ ೮ರಲ್ಲಿರುವ ಭಾಷೆಗಳಿಗೆ ಮಾತ್ರ ಸರ್ಕಾರದ ಮನ್ನಣೆ ಮತ್ತು ಉತ್ತೇಜನ ಸಿಗುವುದರಿಂದ ಅವು ಸೆನ್ಸಸ್‌ನಿಂದ ಮಾತ್ರವಲ್ಲದೆ ನಿಧಾನಕ್ಕೆ ಒಂದೆರಡು ಪೀಳಿಗೆಯ ನಂತರದಲ್ಲಿ ಇತಿಹಾಸದಿಂದಲೇ ಮರೆಯಾಗುತ್ತವೆ.

ಪ್ರಖ್ಯಾತ ಭಾಷಾ ಶಾಸ್ತ್ರಜ್ನರಾದ ಗಣೇಶ್ ದೇವಿ ಯವರ ಪ್ರಕಾರ ಭಾರತದಲ್ಲಿ ೭೫೦ ಭಾಷೆಗಳಿದ್ದು ಇಂಥಾ ವಸಾಹತುಶಾಹಿ ಪ್ರಕ್ರಿಯೆಗಳಿಂದಾಗಿ ಈಗಾಗಲೇ ೧೨೦ ಭಾಷೆಗಳು ಮೃತವಾಗಿವೆ.

ಇದನ್ನೂ ಓದಿ: ರೈತ ವಿರೋಧಿ ಕೃಷಿ ನೀತಿಗಳು: ಪ್ರಧಾನಿ ಮೋದಿ V/S ಮುಖ್ಯಮಂತ್ರಿ ಮೋದಿ!

ಇದಲ್ಲದೆ ಉತ್ತರಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ದಕ್ಷಿಣ ಭಾರತಕ್ಕೆ ಹೋಲಿಸಿ ನೋಡಿದಲ್ಲಿ ಹೆಚ್ಚು. ಹೀಗಾಗಿಯೂ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ಭಾಷಿಕರ ಸಂಖ್ಯೆ ಕಡಿಮೆಯಾಗಿ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗಿ ನಮೂದಾಗಿಬಿಡುತ್ತದೆ.

ಆದ್ದರಿಂದಲೇ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವುದರ ಹಿಂದೆ ಹಾಗೂ ಹಿಂದಿಯನ್ನು ಅತಿ ಹೆಚ್ಚು ಜನರು ಮಾತನಾಡುತ್ತಾರೆ ಎನ್ನುವ ಹಿಂದೆ ಕೋಮುವಾದಿ ಹಾಗೂ ಭಾಷಿಕ ವಸಾಹತುಶಾಹಿ ಹುನ್ನಾರಗಳಿವೆ.

ಹಿಂದಿ ಎರಡನೇ ಭಾಷೆಯೂ ಆಗಲಾರದು:

ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಏರತೊಡಗಿದೊಡನೆ ಅಮಿತ್ ಶಾ ಅವರು ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕೆಂಬ ಹೊಸ ಪ್ರತಿಪಾದನೆ ಪ್ರಾರಂಭಿಸಿದ್ದಾರೆ. ಆದರೆ ಮಕ್ಕಳು ಮಾತೃಭಾಷೆಯನ್ನು ಪಡೆದುಕೊಳ್ಳುತ್ತಾರೆ (First Language acquisition). ಆದರೆ ಎರಡನೇ ಭಾಷೆಯನ್ನು ಕಲಿಯಬೇಕಾಗುತ್ತದೆ (Second Language Learning). ಎರಡನೇ ಭಾಷಾ ಕಲಿಕೆಯೆಂಬುದು ರಾಜಕೀಯ ಪ್ರೇರಿತವಾದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿಯುತ್ತದೆ. ಎರಡನೆ ಭಾಷಾ ಕಲಿಕೆಯು ಸಹಜ ಆಸಕ್ತಿ, ಪೂರಕ ವಾತಾವರಣ, ಮತ್ತು ಬದುಕಿನ ಅಗತ್ಯವನ್ನು ಆಧರಿಸಿದ್ದರೆ ಮಾತ್ರ ಯಶಸ್ವಿಯಾಗುತ್ತದೆಂದು ಜಗತ್ತಿನಾದ್ಯಂತ ಸಾಬೀತಾಗಿದೆ. ಅಲ್ಲದೆ ಮೊದಲ ಅಥವಾ ಮಾತೃಭಾಷೆಯ ಬಲವಾದ ಬುನಾದಿಯಿಲ್ಲದೆ ಎರಡನೇ ಭಾಷಾ ಕಲಿಕೆಯೂ ಹೊರೆಯೇ ಆಗುತ್ತದೆಂಬುದು ಸಹ ಈಗಾಗಲೇ ಭಾರತದಲ್ಲೂ ರುಜುವಾತಾಗಿದೆ. . ಭಾರತದ ವಸಾಹತುಶಾಹಿ ಹಿನ್ನೆಲೆ ಮತ್ತು ಇಂದಿನ ಜಾಗತೀಕರಣಗಳ ಹಿನ್ನೆಲೆಯಿಂದಾಗಿ ಇಂಗ್ಲೀಷು ಎರಡನೇ ಭಾಷೆಯ ಶೈಕ್ಷಣಿಕ ಪೂರ್ವಗತ್ಯಗಳನ್ನು ಪೂರೈಸುತ್ತಿದೆ. ಆ ಜಾಗದಲ್ಲಿ ಹಿಂದಿಯನ್ನು ಪರಿಚಯಿಸುವುದು ಕೃತಕ ಮಾತ್ರವಲ್ಲ ಹಿಂದಿಯೇತರ ರಾಜ್ಯದ ಮಕ್ಕಳಿಗೆ ಮತ್ತು ಜನರಿಗೆ ಮಾಡುವ ತಾರತಮ್ಯ ಹಾಗೂ ಅನ್ಯಾಯವೂ ಆಗುತ್ತದೆ. ಹೀಗಾಗಿ ಹಿಂದಿಯು ಎರಡನೆ ಭಾಷೆಯಾಗಿ ಸಲ್ಲ.

ಭಾರತಕ್ಕೆ ವಿಶ್ವಮಾನ್ಯತೆ ಹೆಚ್ಚಲು ಬೇಕಿರುವುದು ಹಿಂದಿಯೋ? ಹೆಚ್ಚು ಪ್ರಜಾತಂತ್ರವೋ:

ಭಾರತಕ್ಕೆ ವಿಶ್ವಮಾನ್ಯತೆ ಹೆಚ್ಚಬೇಕೆಂದರೂ ಒಂದೇ ಭಾಷೆಯ ಅಗತ್ಯವಿದೆಯೆಂದು ಆರೆಸ್ಸೆಸ್ ಪ್ರಚಾರ ಮಾಡುತ್ತಿದೆ.

ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಭಾರತವು ವಿಶ್ವಗುರುವಾಗುವುದಿರಲಿ ವಿಫಲ ಪ್ರಜಾತಂತ್ರವಾಗುತ್ತಿದೆ ಯೆಂದು ವಿಶ್ವಸಮುದಾಯ ಒಕ್ಕೊರಲಿಂದ ಹೇಳುತ್ತಿದೆ.

ಅದಕ್ಕೆ ಭಾರತ ಸರ್ಕಾರವೂ ಸದಸ್ಯ ರಾಷ್ಟ್ರವಾಗಿರುವ ಜಾಗತಿಕ ಪ್ರಜಾತಂತ್ರ ಅಧ್ಯಯನ ಸಂಸ್ಥೆಯು ಇತ್ತೀಚೆಗೆ ಹೊರತಂದಿರುವ ವಾರ್ಷಿಕ ವರದಿಯೇ ಸಾಕ್ಷಿ. ಅದಕ್ಕೆ ಕಾರಣ ಭಾರತದ ಜನರ ಬದುಕಿನ ಪರಿಸ್ಥಿತಿ, ನಾಗರಿಕ ಸ್ವಾತಂತ್ರ್ಯಗಳ ಮಾನದಂಡಗಳಲ್ಲಿ ಭಾರತವು ತನ್ನ ನೆರೆಹೊರೆಯ ರಾಷ್ಟ್ರಗಳಿಗಿಂತ ಮಾತ್ರವಲ್ಲ ಆಫ್ರಿಕಾದ ರಾಷ್ಟ್ರಗಳಿಗಿಂತ ಕಳೆದ ಆರುವರೆ ವರ್ಷಗಳಲ್ಲಿ ಪಾತಾಳಕ್ಕೆ ಇಳಿದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಖಂಡಿತ idiot ಅಲ್ಲ….! ಆದರೆ……….?

ಕಾಶ್ನೀರ ವಿಭಜನೆ, ಸಿಎಎ- ಎನ್‌ಪಿ ಅರ್ ಜಾರಿಗೆ ತರಾತುರಿ, ಯೋಜಿತ ದೆಹಲಿ ಗಲಭೆ, ಅದಕ್ಕೆ ಕಾರಣರಾದವರನ್ನು ರಕ್ಷಿಸುತ್ತಾ, ಸಂತ್ರಸ್ತರಾದವರನ್ನೇ ದೋಷಿಗಳ್ನಾಗಿಸುವ ಪಿತೂರಿ, ಕ್ರೂರ, ಅಪ್ರಜಾತಾಂತ್ರಿಕ ಹಾಗು ಅವೈಜ್ನಾನಿಕವಾದ ಕೋವಿಡ್ ನಿಭಾವಣೆ, ಭೀಮಾಕೊರೆಗಾಂವ್ ಪ್ರಕರಣದಲ್ಲಿ ರಾಜಕೀಯ ಭಿನ್ನಮತೀಯರ ಬಂಧನ, ಹತ್ಯೆಗಳು, ಪ್ರಜಾತಾಂತ್ರಿಕ ವಿಧಿ-ರಿವಾಜುಗಳನ್ನೆಲಾ ಗಾಳಿಗೆ ತೂರಿ ರೈತ ವಿರೋಧಿ ಕಾಯಿದೆಗಳನ್ನು ಜಾರಿಗೊಳಿಸಿದ್ದೂ ಮತ್ತು ಎರಡು ತಿಂಗಳಿಂದ ಸತತವಾಗಿ ಪ್ರಜಾತಾಂತ್ರಿಕವಾಗಿ ಅವುಗಳ ವಿರುದ್ಧ ಹೋರಾಡುತ್ತಿರುವ ರೈತ ಜನಾಂದೋಲನದ ಬಗ್ಗೆ ಕ್ರೂರ ನಿರ್ಲಕ್ಷ್ಯ- ಇತ್ಯಾದಿಗಳ ಕಾರಣಕ್ಕಾಗಿ ನರೇಂದ್ರ ಮೋದಿಯವರ ಭಾರತವೂ ಪುಟಿನ್‌ನ ರಷ್ಯಾದಂತೆ, ಎರ್ಡೋಗಾನ್‌ನ ಟರ್ಕಿಯಂತೆ, ಒರ್ಬಾನ್‌ನ ಹಂಗೆರೆಯಂತೆ, ಡ್ಯುಟಿರಾಟೆಯ ಫಿಲಿಫೈನ್‌ನಂತೆ, ಬೊಲ್ಸನಾರೋನ ಬ್ರೆಜಿಲ್‌ನಂತೆ ಸಹ ಸರ್ವಾಧಿಕಾರಿಯಾಗುತ್ತಿದೆಯೆಂದು ಜಾಗತಿಕ ವರದಿಗಳು ಸ್ಪಷ್ಟವಾಗಿ ಹೇಳುತ್ತಿವೆ.

ಇವೆಲ್ಲಕ್ಕೂ ಕಾರಣ ಬಿಜೆಪಿಯ ಹಿಂದೂತ್ವವಾದಿ, ಕಾರ್ಪೊರೇಟ್ ಬಂಡವಾಳಶಾಹಿ ಪರ ನೀತಿಗಳು ಕಾರಣವೇ ಹೊರತು ಭಾರತಕ್ಕೆ ಒಂದು ರಾಷ್ಟ್ರ ಭಾಷೆ ಇರದಿರುವುದಲ್ಲ. ಅಥವಾ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಬಿಟ್ಟರೆ ಇವೆಲ್ಲವೂ ಬದಲಾಗುವುದಿಲ್ಲ.

ಹಿಂದೀ-ಹಿಂದೂ-ಹಿಂದೂತ್ವ- ಹಿಂದೂರಾಷ್ಟ್ರದ ಹುನ್ನಾರ:

ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಬೇಕು ಎಂದು ಸಲಹೆ ಸ್ವರೂಪದ ಅಜೆಂಡಾವನ್ನು ದೇಶದ ಮುಂದಿಟ್ಟ ಎರಡೇ ದಿನಗಳಲ್ಲಿ ಅಮಿತ್ ಶಾ ಅವರು ಮೊನ್ನೆ ಭಾರತಕ್ಕೆ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಏಕೆ ಬೇಕು ಎಂಬ ಪ್ರಶ್ನೆಯನ್ನು ಸಹ ದೇಶದ ಮುಂದಿಟ್ಟಿದ್ದರು.
ಎರಡನೇ ಬಾರಿ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರ ತನ್ನ ಹಿಂದಿ-ಹಿಂದೂ-ಹಿಂದೂರಾಷ್ಟ್ರದ ಅಜೆಂಡಾವನ್ನು ವೇಗಗತಿಯಲ್ಲಿ ಜಾರಿ ಮಾಡಲು ಹೊರಟಿರುವುದು ಸುಸ್ಪಷ್ಟವಾಗಿದೆ.

-ಒಂದು ದೇಶ -ಒಂದೇ ಮಾರುಕಟ್ಟೆ- ಅರ್ಥಾತ್ ಅಂಬಾನಿ-ಆದಾನಿ ಅಥವಾ ಮೋದಾನಿ ಮಾರುಕಟ್ಟೆ…

-ಒಂದು ದೇಶ- ಒಂದು ತೆರಿಗೆ ಆರ್ಥಾತ್ ಬಡವರಿಗೆ ಹೆಚ್ಚುವರಿ ತೆರಿಗೆ….

-ಒಂದು ದೇಶ- ಒಂದು ಧರ್ಮ ಅರ್ಥಾತ್ ಬ್ರಾಹ್ಮಣವಾದಿ ಧರ್ಮ-ಮರ್ಮ…

-ಒಂದು ದೇಶ- ಒಂದು ಭಾಷೆ ಅರ್ಥಾತ್ ದೇವನಾಗರಿ ಲಿಪಿಯ ಹಾಗೂ ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿ ಭಾಷೆ…

-ಒಂದು ದೇಶ- ಒಂದು ಪಕ್ಷ ಅರ್ಥಾತಾ ಬಿಜೆಪಿ ಪಕ್ಷ…

-ಒಂದು ದೇಶ- ಒಬ್ಬ ನಾಯಕ ಅರ್ಥಾತ್ ಮೋದಿ (ಅಥವಾ ಶಾ!)…

ಇದು ಈ ಆಜೆಂಡಾದ ತಾತ್ಪರ್ಯ. ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದದ್ದೂ ಸಹ ಇದೇ ಸರ್ವಾಧಿಕಾರಿ ಪ್ರಣಾಳಿಯ ಮೇಲೆ.

ಆದ್ದರಿಂದಲೇ ಹಿಂದಿಯನ್ನು ರಾಷ್ಟ್ರಭಾಷೆ ಮಾಡಬೇಕೆಂಬ ಪ್ರಸ್ತಾಪವನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

ದೊರಂಗೌಗಳ ಮಾತುಗಳನ್ನು ಕೇವಲ ಬಕೆಟಿಂಗ್ ಎಂದು ಸರಳೀಕರಿಸಲೂ ಆಗುವುದಿಲ್ಲ. ..

-ಶಿವಸುಂದರ್


ಇದನ್ನೂ ಓದಿ: ಕೃಷಿ ಕಾಯಿದೆಗಳು ಮತ್ತು ಆದಾನಿ, ಅಂಬಾನಿಗಳ ಲಾಭಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights