ನಟಿ ಕಂಗನಾ ವಿರುದ್ಧ ಬೆಳಗಾವಿಯಲ್ಲಿ ದೂರು ದಾಖಲು; FIR ದಾಖಲಿಸದ ಪೊಲೀಸರು!
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ನಟಿ ಕಂಗನಾ ರಣಾವತ್ ವಿರುದ್ಧ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ವಕೀಲ ಹರ್ಷವರ್ಧನ್ ಅವರು ದೂರು ನೀಡಿದ್ದಾರೆ. ಆದರೆ, ನಟಿ ವಿರುದ್ದ ಇದೂವರೆಗೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.
ದೆಹಲಿ ಗಡಿಯಲ್ಲಿ ರೈತರ ಹೋರಾಟ ಮೂರು ತಿಂಗಳಿಂದ ನಡೆಯುತ್ತಿದೆ. ಈ ವೇಳೆ ರೈತರ ವಿರುದ್ಧ ಖಲಿಸ್ತಾನಿಗಳು, ಭಯೋತ್ಪಾದಕರು, ಅವರಿಗೆ ಚೀನಾ-ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ ಎಂದು ಟ್ವೀಟ್ ಮಾಡಿದ್ದಲ್ಲದೆ, ರೈತರನ್ನು ಬೆಂಬಲಿಸಿದ್ದ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ.
ರೈತರ ವಿರೊಧಿ ಟ್ವೀಟ್ ಮಾಡಿದ್ದ ಕಂಗಾನಾ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ವಕೀಲ ಹರ್ಷವಧನ್ ಅವರು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ನಟಿ ವಿರುದ್ದ ದೂರು ನೀಡಿದ್ದಾರೆ. ಅಲ್ಲದೆ, ಕಂಗನಾ ಅವರ ಟ್ವಿಟರ್ ಖಾತೆಯನ್ನೂ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹರ್ಷವಧನ್ ಅವರ ದೂರು ಸ್ವೀಕರಿಸಿರುವ ಪೊಲೀಸರು, ಇದೂವರೆಗೂ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ ಎಂದು ತಿಳಿದು ಬಂದಿದೆ
“ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಆದರೇ ಇದು ದುರುಪಯೋಗ ಆಗಬಾರದು. ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ತಕ್ಷಣ ಸೆಕ್ಷನ್ 153, 154A, 503, 504, 505(1), 505(B), 505(C), 505(2), 506 IPC ಅಡಿ FIR ದಾಖಲಿಸಬೇಕು. ಇಲ್ಲದಿದ್ದರೆ, ನಾನು ಕೋರ್ಟ್ ಮೊರೆ ಹೋಗುತ್ತೇನೆ” ಎಂದು ಹರ್ಷವರ್ಧನ್ ಹೇಳಿದ್ದಾರೆ.
ಇದನ್ನೂ ಓದಿ: ಮತ್ತೆ ಅನ್ನದಾತರ ಬಗ್ಗೆ ಕೇವಲವಾಗಿ ಮಾತನಾಡಿದ ಕಂಗನಾ ಕಾಲೆಳೆದ ನೆಟ್ಟಿಗರು!