ಕೆಂಪುಕೋಟೆ ಘಟನೆಯ ರುವಾರಿ, BJP ಬೆಂಬಲಿಗ-ನಟ ದೀಪ್ ಸಿಧು ಅರೆಸ್ಟ್!
ಗಣರಾಜ್ಯೋತ್ಸವದ ದಿನ ರೈತರು ನಡೆಸಿದ ಟ್ರಾಕ್ಟರ್ ಪರೇಡ್ ವೇಳೆ, ದೆಹಲಿಯ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಲು ಪ್ರಚೋದನೆ ನೀಡಿದ್ದ ಬಿಜೆಪಿ ಬೆಂಬಲಿಗ, ನಟ ದೀಪ್ ಸಿಧುನನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 26ರಂದು ರೈತರು ದೆಹಲಿ ಗಡಿಯ ಹೆದ್ದಾರಿಗಳಲ್ಲಿ ಟ್ರಾಕ್ಟರ್ ಪರೇಡ್ ನಡೆಸುತ್ತಿದ್ದಾಗ, ರೈತರ ಒಂದು ಗುಂಪನ್ನು ಕೆಂಪುಕೋಟೆ ಎಡೆಗೆ ನುಗ್ಗುವಂತೆ ಪ್ರಚೋದಿಸಿ ಹಿಂಸಾಚಾರಕ್ಕೆ ಕಾರಣನಾಗಿದ್ದ ಮತ್ತು ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಲು ರೈತರ ಒಂದು ಗುಂಪಿಗೆ ದೀಪ್ ಸಿಧು ಪ್ರಚೋದನೆ ನೀಡಿದ್ದ ಎಂದು ಆರೋಪಗಳು ಕೇಳಿಬಂದಿದ್ದವು.
ದೀಪ್ ಸಿಧು ಜೊತೆಗೆ ಕೆಂಪುಕೋಟೆಯತ್ತ ಹೊರಟಿದ್ದ ರೈತರ ಗುಂಪು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಟ್ರಾಕ್ಟರ್ ಪಲ್ಟಿ ಹೊಡೆದು ಒಂದು ರೈತ ಸಾವನ್ನಪ್ಪಿದ್ದರು.
ಘಟನೆಯ ನಂತರ ರೈತ ಮುಖಂಡರ ಮೇಲೆ 22 ಕೇಸ್ಗಳನ್ನು ದಾಖಲಿಸಿದ್ದ ದೆಹಲಿ ಪೊಲೀಸರು ಎಫ್ಐಆರ್ನಲ್ಲಿ ದೀಪ್ ಸಿಧು ಹೆಸರನ್ನು ಕೈಬಿಟ್ಟಿದ್ದರು. ಪೊಲೀಸರ ಈ ಕ್ರಮಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಅದಾದ ನಂತರ ಆತನ ಮೇಲೆ ಕೇಸ್ ದಾಖಲಿಸಿದ ಪೊಲೀಸರು ಆತನ ಬಂಧನಕ್ಕೆ ಮುಂದಾಗಿದ್ದರು. ಕೆಂಪುಕೋಟೆ ಘಟನೆ ನಡೆದ ನಂತರ ತಲೆಮರೆಸಿಕೊಂಡಿದ್ದ ದೀಪ್ ಸಿಧು ಮಂಗಳವಾರ ಬೆಳಗ್ಗೆ ಪೊಲೀಸರ ಬಲೆಗೆ ಸಿಕ್ಕಿದ್ದಾನೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರದ ರುವಾರಿ ದೀಪ್ ಸಿಧು: ಯಾರು ಈತ – ಈತನ ಹಿನ್ನೆಲೆ ಏನು?