ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಎ ಜಾರಿ ಇಲ್ಲ: ರಾಹುಲ್ಗಾಂಧಿ
ಮುಂದಿನ ಎರಡು-ಮೂರು ತಿಂಗಳುಗಳಲ್ಲಿ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಸ್ಸಾಂ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದ್ದು, ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿಗೆ ತರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಭರವಸೆ ನೀಡಿದ್ದಾರೆ.
ಸಿಎಎ ಜಾರಿಗೆ ನಿಯಮಾವಳಿಗಳ ರೂಪಿಸುವುದರಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಕಳೆದ ವಾರ ಮಾತನಾಡಿದ ಅಮಿತ್ ಶಾ, ಕೊರೊನಾ ಲಸಿಕೆ ವಿತರಣಾ ಪ್ರಕ್ರಿಯೆ ಮುಗಿದ ತಕ್ಷಣ ದೇಶಾದ್ಯಂತ ಸಿಎಎಯನ್ನು ಜಾರಿ ಮಾಡುವುದಾಗಿ ಘೋಷಿಸಿದ್ದಾರೆ.
ಹೀಗಾಗಿ, ಅಸ್ಸಾಂ ಸೇರಿದಂತೆ ದೇಶಾದ್ಯಂತ ಭಾರೀ ವಿರೋಧ ಮತ್ತು ಚರ್ಚೆಗೆ ಗ್ರಾಸವಾಗಿದ್ದ ಸಿಎಎ, ಇದೀಗ ಮತ್ತೆ ಚರ್ಚೆಗೆ ಬಂದಿದೆ. ಈ ವಿಚಾರವಾಗಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ರಾಹುಲ್ಗಾಂಧಿ, ಬಿಜೆಪಿ ಹಾಗೂ ಆರೆಸ್ಸೆಸ್ ಅಸ್ಸಾಂ ಅನ್ನು ವಿಭಜನೆ ಮಾಡಲು ಮುಂದಾಗಿವೆ. ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಎ ಜಾರಿಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ ಅಸ್ಸಾಮಿಗರ ಅಹವಾಲುಗಳು, ಬೇಡಿಕೆಗಳನ್ನು ಕೇಳುವ-ೀಡೇರಿಸುವ ಅಸ್ಸಾಮಿಗರೇ ಆದವರು ಮುಖ್ಯಮಂತ್ರಿಯಾಗಬೇಕು. ನಾಗ್ಪರ ಅಥವಾ ದೆಹಲಿಯಿಂದ ರಾಜ್ಯವನ್ನು ನಿಯಂತ್ರಿಸುವ ಹಾಗೂ ನಿಯಂತ್ರಣಕ್ಕೆ ಒಳಪಡಿಸುವಂತೆ ಮುಖ್ಯಮಂತ್ರಿ ರಾಜ್ಯಕ್ಕೆ ಬೇಡ. ಹಾಗಾಗಿ ಕಾಂಗ್ರೆಸ್ಅನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ರಾಹುಲ್ಗಾಂಧಿ ಹೇಳಿದ್ದಾರೆ.
ಅಸ್ಸಾಂ ಒಪ್ಪಂದದಿಂದಾಗಿ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಅಸ್ಸಾಂ ಒಪ್ಪಂದಲ್ಲಿ ಹೇಳಲಾದ ಪ್ರತಿಯೊಂದು ಸೂತ್ರದ ರಕ್ಷಣೆಗೆ ನಾನು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬದ್ಧರಿದ್ದೇವೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಕ್ರಮ ವಲಸಿಗರು ಅಸ್ಸಾಂಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಇದನ್ನು ರಾಜ್ಯದ ಜನರೊಂದಿಗೆ ಮಾತುಕತೆ ನಡೆಸುವ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿಯ ಕಾರ್ಪೋರೆಟ್ ಮಿತ್ರರಿಗೆ ದೇಶದ ಸಂಪತ್ತು ನೀಡುವ ಹುನ್ನಾರ ಬಜೆಟ್ನಲ್ಲಿದೆ: ರಾಹುಲ್ಗಾಂಧಿ