ದಿಶಾ ರವಿ ಬಿಡುಗಡೆಗೆ ಒತ್ತಾಯ; ಹೆಣ್ಣುಮಕ್ಕಳು ಓದಿ ಅಂತಾರೆ; ಪ್ರಶ್ನಿಸಿದ್ರೆ ಅವರನ್ನೇ ಬಂಧಿಸುತ್ತಾರೆ: ಸಿದ್ದರಾಮಯ್ಯ
ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಜೊತೆ ದಿಶಾ ರವಿ ಟೂಲ್ಕಿಟ್ ಅನ್ನು ಹಂಚಿಕೊಂಡಿದ್ದರು ಎಂಬ ಆರೋಪದ ಮೇಲೆ ದಿಶಾ ಅವರನ್ನು ದೆಹಲಿ ಸೈಬರ್ ಪೊಲೀಸರು ಬಂಧಿಸಿದ್ದು, ಅವರ ಬಂಧನವನ್ನು ವಿರೋಧಿಸಿ ಸಾಮಾಜಿಕ ಕಾರ್ಯತರ್ಕರು ಪ್ರತಿಭಟನೆ ನಡೆಸಿದ್ದು, ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಿರೋಧ ಪಕ್ಷಗಳೂ ಕೂಡ ದಿಶಾ ರವಿ ಅವರ ಬಂಧನವನ್ನು ವಿರೋಧಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ “ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಿತ ಹೆಣ್ಣುಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ. ದಿಶಾ ರವಿ ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ, ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು. ನೆನಪಿರಲಿ: ನಾರಿ ಮುನಿದರೆ ಮಾರಿ” ಎಂದು ಟ್ವೀಟ್ ಮಾಡಿದ್ದಾರೆ.
ದಿಶಾ ರವಿ ಬಂಧನದ ವಿರುದ್ಧ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ದಿಶಾ ರವಿಯಂತಹ ಯುವತಿಯರು ಭಾರತದ ಭರವಸೆಯಾಗಿದ್ದಾರೆ. ಕಾರಣ, ಅವರು ತಮ್ಮ ಬಗ್ಗೆ ಮಾತ್ರವಲ್ಲ, ಭವಿಷ್ಯದ ಪೀಳಿಗೆಗಳ ಬಗ್ಗೆಯೂ ಕಾಳಜಿ ಹೊಂದಿದ್ದಾರೆ. ನಾವೀಗ ಪ್ರಜಾಪ್ರಭುತ್ವದ ತತ್ವಗಳಂತೆ ನಡೆದುಕೊಳ್ಳುತ್ತಿಲ್ಲ. ಪ್ರತಿಭಟನೆಗಳನ್ನು ಪಿತೂರಿಗಳೆಂದು ಬಿಂಬಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ನಡೆಯಲ್ಲ ಎಂದು ಹೇಳಿದ್ದಾರೆ.
ಟೂಲ್ಕಿಟ್ ಎಂಬುದು ಪಿತೂರಿಯೂ ಅಲ್ಲ. ದೇಶದ್ರೋಹವೂ ಅಲ್ಲ. ಅದೊಂದು ಪ್ರತಿಭಟನೆಗೆ ಮಾಡಿಕೊಳ್ಳುವ ಸಿದ್ಧತೆಯ ಕರಡು. ಆದ್ದರಿಂದ, ದಿಶಾ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ @narendramodi,
ಶಿಕ್ಷಿತ ಹೆಣ್ಣುಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ.#DishaRavi ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ,
ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು.
ನೆನಪಿರಲಿ:
ನಾರಿ ಮುನಿದರೆ ಮಾರಿ.#DishaRaviArrested pic.twitter.com/qNsLwuPM0W— Siddaramaiah (@siddaramaiah) February 15, 2021
ಸ್ಥಳೀಯ ಅಭಿಯಾನವನ್ನು ಮಾಡುವವರು ಸಹ ಟೂಲ್ಕಿಟ್ ಸಿದ್ಧಪಡಿಸುತ್ತಾರೆ. ನಾವು ಪ್ರಧಾನ ಮಂತ್ರಿಯವರ ಪ್ರಚಾರದ ಟೂಲ್ಕಿಟ್ ಅನ್ನು ನೋಡಬೇಕು. ನಾವೀಗ ಅಸಂಬದ್ಧತೆಯ ಮಿತಿಗಳನ್ನು ದಾಟುತ್ತಿದ್ದೇವೆ. ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದೇವೆ ಎಂದು ದೆಹಲಿ ಮೂಲದ ವಿಜ್ಞಾನ ಮತ್ತು ಪರಿಸರ ಕೇಂದ್ರದ ಮುಖ್ಯಸ್ಥೆ ಸುನೀತಾ ನರೇನ್ ಹೇಳಿದ್ದಾರೆ.
ಇದನ್ನೂ ಓದಿ: ಗ್ರೇಟಾ ಥನ್ಬರ್ಗ್ “ಟೂಲ್ಕಿಟ್” ಪ್ರಕರಣ : ಬೆಂಗಳೂರಿನ ಯುವ ಹೋರಾಟಗಾರ್ತಿ ಬಂಧನ!