ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ; ಯಾವೊಬ್ಬ ನಾಯಕರಿಗೂ ವಿವೇಚನೆ ಇಲ್ಲ: ಶ್ರೀನಿವಾಸ್ ಪ್ರಸಾದ್
“ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗುತ್ತಿದೆ. ಆದರೆ, ಈ ಬಗ್ಗೆ ಯಾವೊಬ್ಬ ನಾಯಕರಿಗೂ ವಿವೇಚನೆ ಇಲ್ಲ. ಪಕ್ಷಕ್ಕಾಗಿ ದುಡಿಯೋದು ಯಾರೋ? ಸ್ವಾರ್ಥಕ್ಕೆ ಮಾಡಿಕೊಳ್ಳೋದು ಇನ್ಯಾರೋ? ತಮ್ಮ ಮನೆ ಬೆಳೆಸಿಕೊಳ್ಳೋದೇ ಆಯ್ತು. ತಮ್ಮ ಅವಧಿ ಮುಗಿಯಿತು ಎಂದು ತಪ್ಪು ಮಾಡಬಾರದು” ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, “ಆಡಳಿತದ ಬಗ್ಗೆ ನಮಗೆ ತೃಪ್ತಿ ಇರಬಹುದು. ಆದರೆ, ಜನರಲ್ಲಿ ಅತೃಪ್ತಿ ಇದೆ. ಅವರಲ್ಲಿ ಹತಾಶೆ, ನಿರಾಸೆ ಮೂಡಿದೆ. ಇದು ನನ್ನ ಅನುಭವಕ್ಕೂ ಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಇದು ಜನರಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಲು ಕಾರಣವಾಗುತ್ತಿದೆ ಎಂಬ ವಿವೇಚನೆ ನಮ್ಮ ರಾಜ್ಯದ ಯಾವೊಬ್ಬ ನಾಯಕರಿಗೂ ಇಲ್ಲವಾಗಿದೆ” ಎಂದು ಹೇಳಿದರು.
ಚುನಾವಣೆಗೆ ಇನ್ನೂ ಸಮಯವಿದೆ ಎಂದುಕೊಂಡು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಕಣ್ಮುಚ್ಚಿ ಕುಳಿತಿದ್ದರೆ, ಅಧಿಕಾರದ ಅಮಲನ್ನು ತಲೆಗೇರಿಸಿಕೊಂಡರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶ್ರೀನಿವಾಸ ಪ್ರಸಾದ್ ಎಚ್ಚರಿಸಿದರು.
Read Also: ಸಿದ್ದರಾಮಯ್ಯ ವಿರುದ್ಧ ಸಿಡಿದ ತನ್ವೀರ್; ಅಮಾನತಿಗೂ ಸಿದ್ದ ಎಂದ ಕಾಂಗ್ರೆಸ್ ಶಾಸಕ!
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ವಿರುದ್ಧ ವೇದಿಕೆಯಲ್ಲೇ ಹರಿಹಾಯ್ದ ಶ್ರೀನಿವಾಸ್ ಪ್ರಸಾದ್, “ನಾನು ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಕಾಂಗ್ರೆಸ್ನಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷ ಆಗಲಿಲ್ಲ ಎಂಬುದೊಂದನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ಜವಾಬ್ದಾರಿ ನಿಭಾಯಿಸಿ ಪಕ್ಷ ಸಂಘಟಿಸಿದವನು. ಇದುವರೆಗೆ, ನನ್ನನ್ನು ಒಂದೇ ಒಂದು ರಾಜ್ಯ ಕಾರ್ಯಕಾರಿಣಿಗೆ ಆಹ್ವಾನಿಸಿದ್ದೀರಾ? ನನ್ನ ಸಲಹೆ ಪಡೆದಿದ್ದೀರಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಿಜೆಪಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವುದನ್ನು ಒಪ್ಪಿಕೊಳ್ಳಬೇಕು. ಮತದಾರರು ಪ್ರಜ್ಞಾವಂತರಿದ್ದಾರೆ. ತಿದ್ದಿಕೊಳ್ಳದಿದ್ದರೆ ಜನರು ತಕ್ಕ ಪಾಠ ಕಲಿಸುತ್ತಾರೆ” ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ನಂತರ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, “ಶ್ರೀನಿವಾಸ ಪ್ರಸಾದ್ ಬಿಜೆಪಿಯ ಸೌಭಾಗ್ಯ. ಅವರ ಭಾವನೆಗಳನ್ನು ವರಿಷ್ಠರ ಗಮನಕ್ಕೆ ತರುವೆ” ಎಂದು ಸಮಾಧಾನಪಡಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಧೈರ್ಯವಿಲ್ಲ – ಹೆದರುತ್ತಾರೆ ಎಂದು ಚೀನೀಯರು ಅರ್ಥಮಾಡಿಕೊಂಡಿದ್ದಾರೆ: ರಾಹುಲ್ಗಾಂಧಿ