ಸಿದ್ದರಾಮಯ್ಯ ವಿರುದ್ಧ ಸಿಡಿದ ತನ್ವೀರ್; ಅಮಾನತಿಗೂ ಸಿದ್ದ ಎಂದ ಕಾಂಗ್ರೆಸ್ ಶಾಸಕ!
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಒಳಗೆ ಅಸಮಾಧಾನ ಕಾವು ಹೊಗೆಯಾಡುತ್ತಿದೆ. ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ನ ಕೆಲವು ನಾಯಕರು ಆರೋಪಿಸಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಬೆಂಬಲಿಗರು ಒತ್ತಾಯಿಸಿದ್ದಾರೆ.
ಇದರಿಂದಾಗಿ ಸಿಟ್ಟಿಗೆದ್ದರುವ ತನ್ವೀರ್ ಸೇಠ್, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೇಳಿದ್ದೇ ಸಿದ್ದರಾಮಯ್ಯನವರು. ನಾನೇನಾದ್ರು ಮೈತ್ರಿ ಮಾಡಿಕೊಳ್ಳಬಾರದು ಎಂದು ಡೀಲ್ ಮಾಡಿದ್ದೇನೆ ಎಂಬದಾದರೆ ತನಿಖೆ ಮಾಡಲಿ ಎಂದು ಹೇಳಿದ್ದಾರೆ.
ನಾನು ಯಾವುದಕ್ಕೂ ಹೆದರುವ ವ್ಯಕ್ತಿಯಲ್ಲ. ನನಗೂ ನನ್ನದೇ ಗೌರವ ಇದೆ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆ ಅಲ್ಲ. ಅಮಾನತು ಮಾಡಿದರೂ ಅದಕ್ಕೂ ಸಿದ್ಧ. ನನ್ನನ್ನು ಅಮಾನತು ಮಾಡುವುದಾದರೆ ಮಾಡಲಿ, ಆದರೆ ನನ್ನ ವಿರುದ್ಧ ಕ್ರಮ ಕೈಗೊಂಡರೆ ಪರಿಣಾಮ ಎದುರಿಸಲು ಸಿದ್ಧರಾಗಲಿ ಎಂದು ಗುಡುಗಿದ್ದಾರೆ.
ಪಾಲಿಕೆಯ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಹೇಳಿದ್ದೇ ಸಿದ್ದರಾಮಯ್ಯನವರು. ಆದರೆ ಗಂಡು ಮಗುವಾಗಿಲ್ಲ, ಹೆಣ್ಣು ಮಗುವಾಗಿದೆ. ಹೆಣ್ಣು ಮಗು ಬೇಡ ಅಂದರೆ ಅದಕ್ಕೆ ನಾನು ಏನುಮಾಡಲಿ, ಇದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕನಸು ಭಗ್ನ : ಕೈ-ದಳ ದೋಸ್ತಿ – ಜೆಡಿಎಸ್ ಗೆ ಮೈಸೂರು ಮೇಯರ್ ಪಟ್ಟ!