ನನ್ನ ಅಜ್ಜಿ ಇಂಧಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ್ದು ತಪ್ಪು: ರಾಹುಲ್ಗಾಂಧಿ
ಮಾಜಿ ಪ್ರಧಾನಿ, ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರು 21 ತಿಂಗಳುಗಳ ಕಾಲ ದೇಶಾದ್ಯಂತ ತುರ್ತುಪರಿಸ್ಥಿತಿ ಹೇರಿದ್ದು ತಪ್ಪು. ಆದರೆ, ಕಾಂಗ್ರೆಸ್ ಯಾವುದೇ ಸಂದರ್ಭದಲ್ಲೂ ದೇಶದ ಸಾಂಸ್ಥಿಕ ಚೌಕಟ್ಟನ್ನು ಸೆರೆ ಹಿಡಿಯಲು ಪ್ರಯತ್ನಿಸಲಿಲ್ಲ. ಅದು ಪ್ರಸ್ತುತ ಸನ್ನಿವೇಶಕ್ಕಿಂತ ಮೂಲಭೂತವಾಗಿ ಭಿನ್ನವಾಗಿತ್ತು ಎಂದು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಹೇಳಿದ್ದಾರೆ.
1975 ಮತ್ತು 1977ರ ಸಮಯದಲ್ಲಿ 21 ತಿಂಗಳು ಕಾಲ ಹೇರಲಾಗಿದ್ದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಏನೆಲ್ಲಾ ನಡೆಯಿತೋ, ಅದೆಲ್ಲವೂ ಖಂಡಿತವಾಗಿಯೂ ತಪ್ಪು. ನನ್ನ ಅಜ್ಜಿ ಆ ರೀತಿಯಲ್ಲಿ ಮಾಡಬಾರದಿತ್ತು ಎಂದು ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಅವರೊಂದಿಗೆ ವರ್ಚುವಲ್ ಚರ್ಚೆಯಲ್ಲಿ ರಾಹುಲ್ಗಾಂಧಿ ಹೇಳಿದ್ದಾರೆ.
ತುರ್ತುಪರಿಸ್ಥಿತಿ ವೇಳೆಯಲ್ಲಿ ಏನಾಯಿತು ಮತ್ತು ಈಗ ಏನಾಗುತ್ತಿದೆ ಎಂಬುದರ ನಡುವೆ ಮೂಲಭೂತ ವ್ಯತ್ಯಾಸವಿದೆ. ಕಾಂಗ್ರೆಸ್ ಪಕ್ಷ ಯಾವುದೇ ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ – ಸಾಂಸ್ಥಿಕ ಚೌಕಟ್ಟನ್ನು ಸೆರೆಹಿಡಿಯಲು ಪ್ರಯತ್ನಿಸಲಿಲ್ಲ. ನಮ್ಮ ಸೈದಾಂತಿಕತೆಯೂ ಅದನ್ನು ಅನುಮತಿಸುವುದಿಲ್ಲ. ನಾವು ಬಯಸಿದರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ರಾಹುಲ್ಗಾಂಧಿ ತಿಳಿಸಿದ್ದಾರೆ.
ಆದರೆ, ಆರ್ಎಸ್ಎಸ್ ದೇಶದ ಸಾಂಸ್ಥಿಕ ಚೌಕಟ್ಟಿನಲ್ಲಿಯೇ ವ್ಯತ್ಯಾಸ ತರಲು ಯತ್ನಿಸುತ್ತಿದೆ. ಸಂಘ ಪರಿವಾರದ ಜನರನ್ನು ಸಾಂಸ್ಥಿಕ ಸಂಸ್ಥೆಗಳಲ್ಲಿ ತುಂಬಿಸುತ್ತಿದೆ. ಬಿಜೆಪಿ ಚುನಾವಣೆಯಲ್ಲಿ ಸೋತರೂ, ಸಾಂಸ್ಥಿಕ ರಚನೆಯಲ್ಲಿ ನಾವು ಅವರ ಜನರನ್ನು ತಡೆಯುವುದು ಸುಲಭವಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಮರಿಂದರ್ ಪಾಳಯಕ್ಕೆ ಪ್ರಶಾಂತ್ ಕಿಶೋರ್; ದೀದಿ ಸಖ್ಯ ತೊರೆದ ರಾಜಕೀಯ ತಜ್ಞ: BJP ಲೇವಡಿ