ಮರ್ಯಾದಾ ಹತ್ಯೆ: ದಲಿತನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿಯನ್ನು ಹತ್ಯೆಗೈದ ತಂದೆ; ಪೊಲೀಸರ ನಿರ್ಲಕ್ಷ್ಯವೇ ಕಾರಣ?
ದಲಿತ ಯುವಕನನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ, ರಾಜಸ್ಥಾನ ಹೈಕೋರ್ಟ್ನಿಂದ ರಕ್ಷಣೆ ಪಡೆದಿದ್ದ ಯುವತಿಯನ್ನು ಆಕೆಯ ತಂದೆಯೇ ಕೊಲೆ ಮಾಡಿರುವ ಅಮಾನವೀಯ ಮರ್ಯಾದಾ ಹತ್ಯೆ ಘಟನೆ ರಾಜಸ್ಥಾನದ ದೌಸಾ ಪಟ್ಟಣದಲ್ಲಿ ನಡೆದಿದೆ.
ತನ್ನ ಮಗಳು ಪಿಂಕಿಯನ್ನು ದೌಸಾ ಪಟ್ಟಣದ ತನ್ನ ಮನೆಯಲ್ಲಿ ಕೊಂದಿದ್ದೇನೆ ಎಂದು ಆಕೆಯ ತಂದೆ ಶಂಕರ್ ಲಾಲ್ ಸೈನಿ ಬುಧವಾರ ಪೊಲೀಸರಿಗೆ ತಿಳಿಸಿದ್ದಾರೆ. ಆತನನ್ನು ಪೊಲೀಸರು ಬಂಧಿಸಿದ್ದು, ಶವವನ್ನು ವಶಪಡಿಸಿಳ್ಳಲಾಗಿದೆ. ಆಕೆಯನ್ನು ಕತ್ತುಹಿಸುಕಿ ಕೊಲ್ಲಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.
ಅಂತರ್ಜಾತಿ ವಿವಾಹವಾಗಿದ್ದ ನಮಗೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಹೈಕೋರ್ಟ್ನ ಮೊರೆಹೋಗಿದ್ದೆವು. ರಾಜಸ್ಥಾನ ಹೈಕೋರ್ಟ್ ನಮಗೆ ರಕ್ಷಣೆ ನೀಡುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿತ್ತು. ಆದರೆ, ಪೊಲೀಸರ ನಿರ್ಲಕ್ಷ್ಯದಿಂದ ತನ್ನ ಪತ್ನಿಯನ್ನು ಆಕೆಯ ತಂದೆ ಕೊಲೆ ಮಾಡಿದ್ದಾರೆ. ಇದಕ್ಕೆ ಪೊಲೀಸರ ಬೇಜವಾಬ್ದಾರಿತನವೇ ಕಾರಣ ಎಂದು ಕೊಲೆಗೀಡಾದ ಯುವತಿಯ ಪತಿ ರೋಶನ್ ಮಹಾವರ್ ಆರೋಪಿಸಿದ್ದಾರೆ.
ಫೆಬ್ರವರಿ 16 ರಂದು ಒಬಿಸಿ ಸಮುದಾಯದ ಪಿಂಕಿ ಸೈನಿಯು ದಲಿತ ಸಮುದಾಯದ ರೋಶನ್ ಮಹಾವರ್ (24) ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಇದಕ್ಕೆ ಪಿಂಕಿಯ ಕುಟುಂಬ ಒಪ್ಪಿರಲಿಲ್ಲ. ಹಾಗಾಗಿ ಫೆಬ್ರವರಿ 21 ರಂದು ಪಿಂಕಿ ಮಹಾವರ್ ಅವರೊಂದಿಗೆ ಊರು ತೊರೆದರು. ಫೆಬ್ರವರಿ 26 ರಂದು, ದಂಪತಿಗಳು ರಾಜಸ್ಥಾನ ಹೈಕೋರ್ಟ್ ಮುಂದೆ ಹಾಜರಾಗಿ ನಮ್ಮದು ಪರಸ್ಪರ ಒಪ್ಪಿತ ವಿವಾಹವಾಗಿದ್ದು ರಕ್ಷಣೆ ನೀಡಬೇಕೆಂದು ಕೋರಿದ್ದರು.
ನ್ಯಾಯಾಲಯವು ಅವರಿಗೆ ಸ್ಥಳೀಯ ಪೊಲೀಸರಿಂದ ರಕ್ಷಣೆ ನೀಡುವಂತೆ ಆದೇಶಿಸಿತು ಮತ್ತು “ಅವರು ಎಲ್ಲಿಗೆ ಹೋಗಬೇಕೆಂದು ಬಯಸುತ್ತಾರೆಯೋ ಅಲ್ಲಿಗೆ ಕರೆದೊಯ್ಯಬೇಕು” ಎಂದು ಕೋರ್ಟ್ ಸೂಚಿಸಿತ್ತು ಎಸ್ಪಿ ಕುಮಾರ್ ತಿಳಿಸಿದ್ದಾರೆ.
ಪಿಂಕಿ ಮತ್ತು ರೋಶನ್ ಜೈಪುರಕ್ಕೆ ಹೋಗಲು ಬಯಸಿದ್ದರಿಂದ ಪೊಲೀಸರು ಅವರನ್ನು ಜೈಪುರಕ್ಕೆ ಕರೆದೊಯ್ದರು. “ಮಾರ್ಚ್ 1 ರಂದು ದಂಪತಿಗಳು ದೌಸಾದಲ್ಲಿರುವ ರೋಶನ್ ಮನೆಗೆ ಬಂದರು. ಆದರೆ ಯುವತಿಯ ಕುಟುಂಬ ಸದಸ್ಯರು ಅದೇ ದಿನ ಅವಳನ್ನು ಅಲ್ಲಿಂದ ಬಲವಂತವಾಗಿ ಕರೆದೊಯ್ದರು” ಎಂದು ಎಸ್ಪಿ ಹೇಳಿದ್ದಾರೆ.
“ನಾವು ಪಿಂಕಿಗಾಗಿ ಹುಡುಕುತ್ತಿದ್ದೆವು. ನಿನ್ನೆ (ಬುಧವಾರ) ರಾತ್ರಿ ಆಕೆಯ ತಂದೆ ಪೊಲೀಸ್ ಠಾಣೆಗೆ ತಲುಪಿ ತನ್ನ ಮಗಳನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ನಾವು ಅವರ ಮನೆಗೆ ಹೋದಾಗ, ಪಿಂಕಿಯವರ ಮೃತದೇಹವನ್ನು ಕಂಡೆವು. ಆರಂಭಿಕ ಪರಿಶೀಲನೆಯ ಪ್ರಕಾರ, ಇದು ಕತ್ತು ಹಿಸುಕಿದ ಕೊಲೆ ಪ್ರಕರಣವೆಂದು ತೋರುತ್ತದೆ ” ಎಂದು ಎಸ್ಪಿ ಕುಮಾರ್ ಹೇಳಿದರು.
ಆರೋಪಿ ತಂದೆ ಶಂಕರ್ ಲಾಲ್ ಸೈನಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಅಪರಾಧದಲ್ಲಿ ಇತರ ವ್ಯಕ್ತಿಗಳು ಭಾಗಿಯಾಗಿರುವ ಕುರಿತು ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದಂಪತಿಗಳನ್ನು ರಕ್ಷಿಸಲು ಹೈಕೋರ್ಟ್ ನೀಡಿದ ಆದೇಶಕ್ಕೆ ಪೊಲೀಸರು ಬದ್ಧರಾಗಿಲ್ಲ. ಪೊಲೀಸರು ತೋರಿದ “ಸಂಪೂರ್ಣ ನಿರ್ಲಕ್ಷ್ಯ”ದಿಂದ ಈ ಹತ್ಯೆ ಸಂಭವಿಸಿದೆ ಎಂದು ಪಿಂಕಿ ಮತ್ತು ರೋಶನ್ ಪರ ವಕೀಲರು ಆರೋಪಿಸಿದ್ದಾರೆ.
ಫೆಬ್ರವರಿ 26 ರ ತನ್ನ ಆದೇಶದಲ್ಲಿ, ರಾಜಸ್ಥಾನ ಹೈಕೋರ್ಟ್ನ ನ್ಯಾಯಮೂರ್ತಿ ಸತೀಶ್ ಕುಮಾರ್ ಶರ್ಮಾ ಹೀಗೆ ಹೇಳಿದ್ದರು: “ಅರ್ಜಿದಾರರು ಇಬ್ಬರೂ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದಾರೆ ಮತ್ತು ಅವರು ಪರಸ್ಪರ ಒಟ್ಟಿಗೆ ಬದುಕಲು ಬಯಸುತ್ತಾರೆ. ಆದ್ದರಿಂದ, ಪ್ರಕರಣದ ಅರ್ಹತೆಗಳ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸದೆ, ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳದಂತೆ ಮತ್ತು ಅರ್ಜಿದಾರರಿಗೆ ಯಾವುದೇ ರೀತಿಯ ಹಾನಿ ಮಾಡದಂತೆ ಸಲಹೆ ನೀಡಲು ನಿರ್ದೇಶಿಸಲಾಗಿದೆ…’
“ಇದಲ್ಲದೆ, ಅರ್ಜಿದಾರರಿಗೆ ರಕ್ಷಣೆ ನೀಡುವಂತೆ ಸ್ಥಳೀಯ ಪೊಲೀಸ್ ಪ್ರಾಧಿಕಾರಕ್ಕೆ ತಿಳಿಸಲು ಮತ್ತು ಅವರ ಇಚ್ಛೆಯಂತೆ ಅವರನ್ನು ಸುರಕ್ಷಿತ ಸ್ಥಳದಲ್ಲಿ ಕರೆದೊಯ್ಯಲು ಸಾರ್ವಜನಿಕ ಅಭಿಯೋಜಕರಿಗೆ ನಿರ್ದೇಶಿಸಲಾಗಿದೆ” ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದು, ಮಾರ್ಚ್ 9 ರಂದು ನ್ಯಾಯಾಲಯವು ಈ ವಿಷಯವನ್ನು ಮತ್ತೆ ವಿಚಾರಣೆ ನಡೆಸಲು ನಿರ್ಧರಿಸಲಾಗಿತ್ತು.
ಮಾರ್ಚ್ 1 ರಂದು ಪಿಂಕಿಯನ್ನು ಬಲವಂತವಾಗಿ ಕರೆದೊಯ್ದ ಆರೋಪದಲ್ಲಿ, ರೋಶನ್ ಕುಟುಂಬವು ಪಿಂಕಿಯ ತಂದೆ, ಚಿಕ್ಕಪ್ಪ ಮತ್ತು ಇತರ ಸಂಬಂಧಿಕರು ಸೇರಿ 11 ಮಂದಿ ಮತ್ತು 15-20 ಇತರ ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಅಪಹರಣ, ಕ್ರಿಮಿನಲ್ ಬೆದರಿಕೆ ಮತ್ತು ಕಳ್ಳತನ, ಮತ್ತು ಎಸ್ಸಿ /ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿಭಾಗಗಳು ಸೇರಿದಂತೆ ಐಪಿಸಿ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ನೋಂದಾಯಿಸಲಾಗಿದೆ. ಯುವತಿಯ ತಂದೆ ಶಂಕರ್ ಲಾಲ್ ಸೈನಿ ಮತ್ತು ಇತರ ಆರೋಪಿಗಳು ಜಾತಿವಾದಿ ಬೈಗುಳಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ರೋಶನ್ ಅವರ ಕುಟುಂಬ ಆರೋಪಿಸಿದೆ. ಅವರ ಮನೆಗೆ ಹಾನಿ ಮಾಡಿ, 1.2 ಲಕ್ಷ ರೂ. ದೋಚಿಕೊಂಡು ಮತ್ತು ಪಿಂಕಿಯನ್ನು ಬಲವಂತವಾಗಿ ಅಪಹರಿಸಿದರು ಎಂದು ರೋಶನ್ ಕುಟುಂಬ ದೂರು ನೀಡಿದೆ.
“ದಂಪತಿಗಳಿಗೆ ರಕ್ಷಣೆ ನೀಡುವ ಹೈಕೋರ್ಟ್ ಆದೇಶದ ಹೊರತಾಗಿಯೂ, ಪಿಂಕಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ಸಂಪೂರ್ಣ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ದಂಪತಿಗಳು ತಮ್ಮ ಸುರಕ್ಷತೆಗಾಗಿ ಹೆದರುತ್ತಿದ್ದರು ಮತ್ತು ತಮ್ಮ ಸ್ವಂತ ಇಚ್ಛಾಶಕ್ತಿಯಿಂದ ಪರಸ್ಪರ ಒಟ್ಟಿಗೆ ಬದುಕಲು ಬಯಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು ”ಎಂದು ಪಿಂಕಿ ಮತ್ತು ರೋಶನ್ ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ ವಕೀಲ ನವಾಲ್ ಸಿಂಗ್ ಸಿಕಾರ್ವಾರ್ ಹೇಳಿದ್ದಾರೆ.
ಪಿಂಕಿಯ ಹತ್ಯೆಯ ನಂತರ, ಈಗ ತಾನು ನನ್ನ ಜೀವಕ್ಕೆ ಹೆದರುತ್ತಿದ್ದೇನೆ. ನನ್ನನ್ನೂ ಕೊಲೆ ಮಾಡಬಹುದು. ಆದರೆ ಪೊಲೀಸರು ನನ್ನ ಭಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಎಂದು ರೋಶನ್ ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
“ಅವರು ಪಿಂಕಿಯನ್ನು ಕೊಲ್ಲಬಹುದೆಂದು ನನಗೆ ತಿಳಿದಿತ್ತು. ಪಿಂಕಿಯ ಕುಟುಂಬ ಅವಳನ್ನು ಕರೆದುಕೊಂಡು ಹೋದಾಗ ನಾನು ಇದನ್ನು ಪೊಲೀಸರಿಗೆ ತಿಳಿಸಿದ್ದೆ. ಆದರೆ ಅವರು (ಪೊಲೀಸರು), ಪಿಂಕಿಯನ್ನು ಕರೆದುಕೊಂಡು ಹೋಗಿದ್ದ ಆಕೆಯ ಪೋಷಕರು ಮುಂದಿನ ವಿಚಾರಣೆಯಲ್ಲಿ ಆಕೆಯನ್ನು ನ್ಯಾಯಾಲಯಕ್ಕೆ ಕರೆತರುತ್ತಾರೆ ಎಂದು ಹೇಳಿದರು. ನಾನು ಕೂಗಿ ಹೇಳಿದೆ ಮತ್ತು ಪೊಲೀಸರಿಗೆ ಮನವಿ ಮಾಡಿದೆ, ಆದರೆ ಅವರು ನನ್ನ ಕಳವಳವನ್ನು ಗಂಭೀರವಾಗಿ ಪರಿಗಣಿಸಲಿಲ್ಲ” ಎಂದು ರೋಶನ್ ಅಳಲು ತೋಡಿಕೊಂಡಿದ್ದಾರೆ.
“ಅವಳು ಅಂತಿಮವಾಗಿ ಅವಳ ಮನೆಯಲ್ಲಿಯೇ ಕೊಲೆಯಾಗಿರುವುದು ಹೇಗೆ? ಅವಳು ಇಲ್ಲಿಯೇ ದೌಸಾದಲ್ಲಿ, ಅವಳ ಹೆತ್ತವರ ಮನೆಯಲ್ಲಿದ್ದರೆ, ಪೊಲೀಸರು ಅವಳನ್ನು ಮೂರು ದಿನಗಳವರೆಗೆ ಏಕೆ ಕಂಡುಹಿಡಿಯಲಿಲ್ಲ? ನಮ್ಮಿಬ್ಬರನ್ನೂ ಕೊಲ್ಲುವುದಾಗಿ ಆಕೆಯ ಕುಟುಂಬ ಆಗಾಗ್ಗೆ ಬೆದರಿಕೆ ಹಾಕಿತ್ತು. ‘ ದಲಿತ ಕೋಲಿ ಜಾತಿಯವನಾದ ನೀನು, ಒಬಿಸಿ ಮಾಲಿ ಜಾತಿಯ ಪಿಂಕಿಯೊಂದಿಗೆ ಬದುಕಲು ಕನಸು ಕಾಣುತ್ತಿರುವುದೇ ಅಪರಾಧ’ ಎಂದು ಪಿಂಕಿ ಕುಟುಂಬದವರು ನನ್ನನ್ನು ಬೆದರಿಸಿದ್ದರು. ಅವರು ನನ್ನ ಮೇಲೆ ಜಾತಿವಾದಿ ನಿಂದನೆಗಳನ್ನು ಮಾಡಿದ್ದರು” ಎಂದು ರೋಶನ್ ಹೇಳಿದ್ದಾರೆ.
ರೋಶನ್ ಪ್ರಕಾರ, ಸುಮಾರು 40 ಪುರುಷರು ಮತ್ತು ಮಹಿಳೆಯರು, (ಅವರಲ್ಲಿ ಹೆಚ್ಚಿನವರು ಪಿಂಕಿಯ ವಿಸ್ತೃತ ಕುಟುಂಬದ ಸದಸ್ಯರಾಗಿದ್ದರು,) ಪಿಂಕಿಯನ್ನು ಕರೆದೊಯ್ಯಲು ಅವರ ಮನೆಗೆ ಬಂದಿದ್ದರು.
“ನಾವು ಹಣವಿಲ್ಲದ ಕಾರಣ ನಾವು ಮತ್ತೆ ದೌಸಾಗೆ ಬಂದಿದ್ದೇವೆ” ಎಂದು ಪಟ್ಟಣದಲ್ಲಿ ಜಿಮ್ ಹೊಂದಿರುವ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐಟಿಐ) ಪದವಿ ಓದುತ್ತಿರುವ ರೋಶನ್ ಹೇಳಿದರು. “ನಾವು ಮನೆಗೆ ತಲುಪಿದ ತಕ್ಷಣ, ಅವರ ಕುಟುಂಬ ಸದಸ್ಯರು ನಮ್ಮ ಮೇಲೆ ಹಲ್ಲೆ ನಡೆಸಿ ಕರೆದೊಯ್ದರು” ಎಂದು ಅವರು ಹೇಳಿದರು.
ಪಿಂಕಿ ಕಾಲೇಜಿನಲ್ಲಿ ತನ್ನ ಮೊದಲ ವರ್ಷದಲ್ಲಿದ್ದಳು. ನಾವು ಪ್ರೀತಿಸಿ ಊರು ತೊರೆಯುವ ಮೊದಲು, ಅವರ ಕುಟುಂಬವು ಅವಳನ್ನು ಬೇರೆ ಮದುವೆಗೆ ಒತ್ತಾಯಿಸಿತ್ತು ಮತ್ತು ಅವಳನ್ನು ಹೊಡೆದಿತ್ತು ಎಂದು ರೋಶನ್ ಆರೋಪಿಸಿದ್ದಾರೆ. “ನಾನು ಈಗ ನನ್ನ ಪ್ರಾಣಕ್ಕಾಗಿ ಭಯಪಡುತ್ತೇನೆ. ಅವಳ ಮೂವರು ಸಂಬಂಧಿಗಳಾದ ಕಲು, ಮುಖೇಶ್ ಮತ್ತು ರಂಗ್ಲಾಲ್ ನನ್ನನ್ನು ಕೊಲ್ಲಲು ಕೆಲವು ಜನರಿಗೆ ಹಣವನ್ನು ನೀಡಿದ್ದಾರೆ ಎಂದು ನಾನು ತಿಳಿದುಕೊಂಡಿದ್ದೇನೆ” ಎಂದು ರೋಶನ್ ಹೇಳಿದ್ದಾರೆ.
ಘಟನೆ ಬಹಿರಂಗವಾಗುತ್ತಿದ್ದಂತೆ ನೂರಾರು ಸಾಮಾಜಿಕ ಕಾರ್ಯಕರ್ತರು ಪೊಲೀಸರ ನಿರ್ಲಕ್ಷ್ಯ ಖಂಡಿಸಿದ್ದಾರೆ. ಜೊತೆಗೆ ರೋಶನ್ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ.
“ಇದು ನಾಚಿಕೆಗೇಡಿನ ಸಂಗತಿ. ಇದು ಮಹಿಳೆಯರ ಭದ್ರತೆಗಾಗಿ ಪೊಲೀಸ್ ಮತ್ತು ರಾಜಸ್ಥಾನ ಸರ್ಕಾರದ ಬದ್ಧತೆಯನ್ನು ಪ್ರಶ್ನಿಸುತ್ತದೆ. ದಂಪತಿಯನ್ನು ರಕ್ಷಿಸಲು ಹೈಕೋರ್ಟ್ ಪೊಲೀಸರಿಗೆ ಆದೇಶ ನೀಡಿದ್ದರೂ, ಪಿಂಕಿ ಸೈನಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ” ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ನ ರಾಜಸ್ಥಾನ ಘಟಕದ ಅಧ್ಯಕ್ಷ ಕವಿತಾ ಶ್ರೀವಾಸ್ತವ ಹೇಳಿದ್ದಾರೆ.
“ದೌಸಾದ ಸರ್ಕಲ್ ಆಫೀಸರ್, ದೌಸಾ ಎಸ್ಪಿ ಮತ್ತು ಕೊಟ್ವಾಲಿ ಪೊಲೀಸ್ ಠಾಣೆಯ ಎಸ್ಎಚ್ಒ ಸೇರಿದಂತೆ ಅಲ್ಲಿನ ಇತರ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ನಾವು ಒತ್ತಾಯಿಸುತ್ತೇವೆ. ಪಿಂಕಿಯನ್ನು ಅಪಹರಿಸಿದ ನಂತರ ರೋಶನ್ ತುರ್ತು ಸಂಖ್ಯೆ 100ಕ್ಕೆ ಹಲವಾರು ಕರೆಗಳನ್ನು ಮಾಡಿದ್ದಾರೆ. ಆದರೆ ದೌಸಾ ಪೊಲೀಸರು, ಕೊಟ್ವಾಲಿ ಪೊಲೀಸ್ ಠಾಣೆಗೆ ಕರೆ ಮಾಡಲು ಹೇಳುವ ಮೂಲಕ ಅವರು ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದರು ” ಎಂದು ಕವಿತ ಶ್ರೀವಾಸ್ತವ ಹೇಳಿದರು.
ಹೈಕೋರ್ಟ್ ಆದೇಶದ ಬಗ್ಗೆ ದೌಸಾ ಪೊಲೀಸರಿಗೆ ತಿಳಿದಿಲ್ಲ ಎಂದು ಸರ್ಕಲ್ ಅಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ. “ನ್ಯಾಯಾಲಯವು ಅವರಿಗೆ ರಕ್ಷಣೆ ನೀಡಿದೆ ಎಂದು ನಮಗೆ ತಿಳಿದಿರಲಿಲ್ಲ. ಮಹಿಳೆಯನ್ನು ಅಪಹರಿಸಿದ ನಂತರವೇ ನಮಗೆ ಇದು ಗೊತ್ತಾಗಿದ್ದು. ಹೈಕೋರ್ಟ್ ಆದೇಶದ ಬಗ್ಗೆ ಅಧಿಕೃತ ಚಾನೆಲ್ಗಳ ಮೂಲಕ ನಮಗೆ ಯಾವುದೇ ಮಾಹಿತಿ ಬಂದಿಲ್ಲ” ಎಂದು ದೀಪಕ್ ಕುಮಾರ್ ಹೇಳಿದ್ದಾರೆ.
Read Also: ತನ್ನ ಜಮೀನು ಕೇಳಿದ್ದಕ್ಕೆ ದಲಿತ ಹೋರಾಟಗಾರನ ಹತ್ಯೆ: ಮಗಳ ಮುಂದೆಯೇ ತಂದೆಯನ್ನು ಕೊಂದ ಮೇಲ್ಜಾತಿ ಗೂಂಡಾಗಳು!