ರಾಮ ಮಂದಿರಕ್ಕೆ ದೇಣಿಗೆ ನೀಡಲು ಒಪ್ಪದ ಶಿಕ್ಷಕ; ವೃತ್ತಿಯಿಂದ ವಜಾಗೊಳಿಸಿದ ಶಾಲೆ!
ಆರ್ಎಸ್ಎಸ್ ನಡೆಸುವ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರು ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕಾಗಿ 1,000 ರೂ. ದೇಣಿಗೆ ನೀಡಲು ನಿರಾಕರಿಸಿದ್ದಾರೆ. ಈ ಕಾರಣಕ್ಕಾಗಿ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆ ಶಾಲೆಯ ಶಿಕ್ಷಕರೊಬ್ಬರು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಜಗದೀಶ್ಪುರ ಪ್ರದೇಶದಲ್ಲಿರುವ ಸರಸ್ವತಿ ಶಿಶು ಮಂದಿರದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಯಶ್ವಂತ್ ಪ್ರತಾಪ್ ಸಿಂಗ್ ಅವರು ಶಾಲೆಯ ಆಡಳಿತದ ವಿರುದ್ದ ಆರೋಪ ಮಾಡಿದ್ದು, ಶಾಲೆಯು ತನ್ನ ಎಂಟು ತಿಂಗಳ ಸಂಬಳವನ್ನು ತಡೆಹಿಡಿದಿದೆ ಎಂದು ಹೇಳಿದ್ದಾರೆ.
ದೇವಾಲಯಕ್ಕೆ ಹಣ ಸಂಗ್ರಹಿಸಲು ರಶೀದಿ ಪುಸ್ತಕವನ್ನು ನೀಡಲಾಗಿದೆ. ರಾಮಮಂದಿರಕ್ಕಾಗಿ ತಾವು ಸಂಗ್ರಹಿಸಿದ 80,000 ರೂಗಳನ್ನು ಬ್ಯಾಂಕ್ನಲ್ಲಿ ಜಮೆ ಮಾಡಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ಆರ್ಎಸ್ಎಸ್ನ ಜಿಲ್ಲಾ ಪ್ರಚಾರಕ್ ಸತ್ಯಾಂದ್ರ ಅವರು ತಮ್ಮ ಶಾಲೆಗೆ ಬಂದಿದ್ದ ವೇಳೆ ದೇವಾಲಯಕ್ಕಾಗಿ 1,000 ರೂ ನೀಡಬೇಕು ಎಂದು ತಮಗೆ ಒತ್ತಡ ಹಾಕಿದರು. ತಾವು ಹಣ ನೀಡಲು ನಿರಾಕರಿಸಿದಾಗ ಶಾಲೆಯ ಅಧಿಕಾರಿಗಳು ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರು. ಅಲ್ಲದೆ, ತಮ್ಮನ್ನು ಶಾಲೆಯಿಂದ ತೆಗೆದು ಹಾಕಿದರು ಎಂದು ಶಿಕ್ಷಕ ಸಿಂಗ್ ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಲಿಖಿತ ದೂರು ನೀಡಿದ್ದೇನೆ. ತನಗೆ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೊಗುವುದಾಗಿ ಸಿಂಗ್ ಹೇಳಿದ್ದಾರೆ.
ಏತನ್ಮಧ್ಯೆ, ಎಲ್ಲಾ ಉದ್ಯೋಗಿಗಳಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣ ಸಂಗ್ರಹಿಸಲು ರಶೀದಿ ಪುಸ್ತಕಗಳನ್ನು ನೀಡಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಧೀರೇಂದ್ರ ಹೇಳಿದ್ದಾರೆ.
“ಸಿಂಗ್ ಅವರು ಮೂರು ರಶೀದಿ ಪುಸ್ತಕಗಳನ್ನು ಸ್ವಇಚ್ಛೆಯಿಂದ ತೆಗೆದುಕೊಂಡರು. ಆದರೆ, ನಂತರ ಅವರು ಠೇವಣಿ ಮಾಡಲಿಲ್ಲ. ಅವರೇ ರಾಜೀನಾಮೆ ನೀಡಿದರು” ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಮೋದಿ ರ್ಯಾಲಿಗಾಗಿ 3 ರೈಲು ಬಾಡಿಗೆಗೆ; ವಿವಿಧ ಪ್ರದೇಶದ ಜನರನ್ನು ಕರೆತಂದ BJP!