ಒಂದು ದೇಶ- ಒಂದೇ ಚುನಾವಣೆ; ಸಾಂವಿಧಾನಿಕ ಸರ್ವಾಧಿಕಾರಕ್ಕೆ BJP ಸಂಚು?

ಕರ್ನಾಟಕದ ವಿಧಾನಸಭೆಯಲ್ಲಿ ಮೊನ್ನೆ ಒಂದು ದೇಶ- ಒಂದು ಚುನಾವಣೆಯ ಬಗ್ಗೆ ಸ್ಪೀಕರ ಸ್ಮಗಲ್ ಮಾಡಿದ್ದ ವಿಷಯ ಚರ್ಚೆ ಆಗಲಿಲ್ಲ. ಆದರೆ ಸದನದ ಹೊರಗೇ ಹಾಗೂ ದೇಶಾದ್ಯಂತ ಈ ಬಗ್ಗೆ ಆರೆಸ್ಸೆಸ್-ಬಿಜೆಪಿ ಕೂಟ ವಿಸ್ತೃತ ಜನಾಭಿಪ್ರಾಯ ರೂಪಿಸುತ್ತಿದೆ.

ಒಂದು ದೇಶ- ಒಂದೇ ಪಕ್ಷ- ಒಂದೇ ಧರ್ಮ- ಒಂದೇ ನಾಯಕ ಎಂಬ ಆರೆಸ್ಸೆಸ್‌ನ ಸಂವಿಧಾನ ವಿರೋಧಿ ಯೋಜನೆಗೆ ಒಂದು ದೇಶ-ಒಂದು ಚುನಾವಣೆ ಎಂಬುದು ಮೊದಲನೇ ಮೈಲಿಗಲ್ಲಾಗಿದೆ. ಆದ್ದರಿಂದಲೇ ಮೋದಿ ಸರ್ಕಾರ ೨೦೧೪ರಲ್ಲಿ ಬಂದಾಗಿನಿಂದಲೂ ಈ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಹಾಗೂ ಈ ಸಾಂವಿಧಾನಿಕ ದಾಳಿಗೆ ಲಾ ಕಮಿಷನ್, ಚುನಾವಣಾ ಅಯೋಗ ಹಾಗೂ NITI ಅಯೋಗಗಳನ್ನೂ ಬಳಸಿಕೊಳ್ಳುತ್ತಿದೆ.

ಮೋದಿ ಸರ್ಕಾರ ಒಂದೇ ಚುನಾವಣೆಯ ಬಗ್ಗೆ ಮುಂದಿಡುತ್ತಿರುವ ವಾದಗಳ ಹುರುಳನ್ನು ಅರ್ಥಮಾಡಿಕೊಳ್ಳುವ ಮುನ್ನ ಒಂದು ದೇಶ ಹಲವು ಚುನಾವಣೆಗಳ ಸಂದರ್ಭ ಏಕೆ ಸೃಷ್ಟಿಯಾಯಿತು ಎಂಬುದನ್ನು ಗಮನಿಸೋಣ.

ಒಂದು ದೇಶ- ಹಲವು ಚುನಾವಣೆ ಆಗಿದ್ದೇಕೆ?

ಹಾಗೆ ನೋಡಿದರೆ, ೧೯೫೨ ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ ೧೯೬೭ರ ಸಾರ್ವತ್ರಿಕ ಚುನಾವಣೆಯ ತನಕವೂ ಭಾರತದಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ಶಾಸನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆಗಳು ನಡೆಯುತ್ತಿದ್ದವು. ಹಾಗೂ ಕೇಂದ್ರದಲ್ಲಿ ಮತ್ತು ಬಹುಪಾಲು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೇ ಬಹುಮತದೊಂದಿಗೆ ಅಧಿಕಾರ ಪಡೆಯುತ್ತಿತ್ತು.

ಆದರೆ ಭಾರತದ ಪ್ರಜಾತಂತ್ರ ಪ್ರಬುದ್ಧತೆಯನ್ನು ಪಡೆಯುತ್ತಿದ್ದಂತೆ ಈ ಪ್ರವೃತ್ತಿಗೆ ೧೯೬೭ರ ಚುನಾವಣೆಯ ಫಲಿತಾಂಶ ದೊಡ್ಡ ಶಾಕ್ ನೀಡಿತು. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೂ ಶಕ್ತಿ ಕ್ಷೀಣಿಸಿತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ತಮಿಳುನಾಡು, ಕೇರಳ, ಪ. ಬಂಗಾಳ, ಒರಿಸ್ಸಾ ಹಾಗೂ ಇನ್ನಿತರ ಒಂಭತ್ತು ರಾಜ್ಯಗಳಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು.

ಇದಕ್ಕೆ ಹಲವು ಕಾರಣಗಳಿದ್ದವು:

ಅ) ನೆಹರೂ ನಂತರ ಕಾಂಗ್ರೆಸ್ ಪಕ್ಷದೊಳಗೆ ಸೃಷ್ಟಿಯಾದ ಬಿಕ್ಕಟ್ಟು
ಆ) ಹಾಗೂ ಕಾಂಗ್ರೆಸ್ ಪಕ್ಷ ೨೦ ವರ್ಷಗಳ ಕಾಲ ಸತತವಾಗಿ ಕೇಂದ್ರದಲ್ಲಿ ಮತ್ತು ಬಹುಪಾಲು ರಾಜ್ಯಗಳಲ್ಲಿ ಅಧಿಕಾರ ನಡೆಸಿದ್ದರೂ ಜನರ ನಿರೀಕ್ಷೆಗಳನ್ನು ಈಡೇರಿಸದೆ ಹಳೆಯ ಶೋಶಕ ವ್ಯವಸ್ಥೆ ಮತ್ತೊಂದು ರೀತಿಯಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದ್ದು
ಇ) ಹಾಗು ಭಾರತದ ಭಾಷೆ, ಸಂಸ್ಕೃತಿ ಹಾಗೂ ಪ್ರಾದೇಶಿಕ ಬಹುತ್ವಗಳನ್ನು ಗುರುತಿಸದೆ ಕಾಂಗ್ರೆಸ್ ಸರ್ಕಾರ ಏಕರೂಪತೆಯ ಸರ್ವಾಧಿಕಾರವನ್ನು ಹೇರುತ್ತಿದ್ದದ್ದು.

ಹೀಗಾಗಿ ಈ ೧೯೬೭ರ ಚುನಾವಣೆಯ ಪರಿಣಾಮಗಳು ಏಕಪಕ್ಷ ಅಧಿಕಾರವನ್ನು ತಿರಸ್ಕರಿಸುವ ಮೂಲಕ ಭಾರತದ ಪ್ರಜಾತಂತ್ರ ಪಕ್ವಗೊಳ್ಳುತ್ತಿದ್ದುದನ್ನೇ ತೋರಿಸುತ್ತಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಆಗಿನ ಕಾಂಗ್ರೆಸ್ ಸರ್ಕಾರ ಈ ಭಿನ್ನತೆ ಮತ್ತು ಬಹುತ್ವಗಳನ್ನು ಗೌರವಿಸದೇ ಸಾಮ, ದಾನ, ಬೇಧ ಮತ್ತು ದಂಡ ಮಾರ್ಗಗಳನ್ನು ಅನುಸರಿಸಿ ಆರ್ಟಿಕಲ್ ೩೫೬ರನ್ನು ದುರ್ಬಳಕೆ ಮಾಡಿಕೊಂಡು ಬಹುಪಾಲು ಎಲ್ಲಾ ಕಾಂಗ್ರೆಸ್ಸೇತರ ಸರ್ಕಾರಗಳನ್ನು ವಜಾ ಮಾಡಿತು. ಆದ್ದರಿಂದ ಆ ರಾಜ್ಯಗಳಲ್ಲಿ ವಿಧಾನಸಭೆಗಳಿಗೆ ೧೯೬೯ರಲ್ಲೇ ಮತ್ತೊಮ್ಮೆ ಚುನಾವಣೆಗಳನ್ನು ನಡೆಯುವಂತಾಯಿತು. ಕಾಂಗ್ರೆಸ್ಸೇತರ ಸರ್ಕಾರಗಳ ಮೇಲಿನ ದಾಳಿಗಳು ೧೯೮೦ರ ದಶಕದಲ್ಲೂ ಮುಂದುವರೆಯಿತು. ಈ ಧೋರಣೆ ಬಲವಾದ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾಗಿ ಭಾರತದ ಚುನಾವಣಾ ಪ್ರಜಾತಂತ್ರವನ್ನು ಮೇಲಿನಿಂದ ಒಂದಷ್ಟು ಪ್ರಜಾತಾಂತ್ರೀಕರಿಸಿತು. ಇಂದಿರಾಗಾಂಧಿ ನಿಧನಾನಂತರ ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ ಅಧಿಪತ್ಯ ಮಾದರಿ ಕುಸಿದು ಮೈತ್ರಿ ಸರ್ಕಾರಗಳ ಸಂಕ್ರಮಣ ಅವಧಿಯಲ್ಲಿ ಏಳು ಲೋಕಸಭೆಗಳೂ ಸಹ ಬಹುಮತವನ್ನು ಕಳೆದುಕೊಂಡು ಅವಧಿಯನ್ನು ಪೂರೈಸದೆ ಚುನಾವಣೆಯನ್ನು ಎದುರಿಸಬೇಕಾಯಿತು.

೨೦೧೪ರ ನಂತರ ಭಾರತದ ಚುನಾವಣಾ ರಾಜಕಾರಣದಲ್ಲಿ ರೂಪುಗೊಳ್ಳುತ್ತಿರುವ ಬಿಜೆಪಿ ಪ್ರಾಧಾನ್ಯತೆಯ ಅವಧಿಯಲ್ಲಿ ಬಿಜೆಪಿ ಪಕ್ಷವು ಕಾಂಗ್ರೆಸ್ ಅನುಸರಿಸಿದ ಕುತಂತ್ರಗಳನ್ನು ಇನ್ನಷ್ಟು ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದೆ. ಕಾರ್ಪೊರೇಟ್ ಕಪ್ಪುಹಣ ದ ಬಲದೊಂದಿಗೆ ಅದು ಪ್ರಾರಂಭಿಸಿರುವ ಆಪರೇಷನ್ ಕಮಲದ ಕುತಂತ್ರವು ಸಂವಿಧಾನಿಕ ಪ್ರಜಾತಂತ್ರಕ್ಕೆ ದೊಡ್ದ ಸವಾಲಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ ಮೇಲೆ ಹೇಳಿದ ಎಲ್ಲಾ ಕಾರಣಗಳಿಂದಾಗಿ ಲೋಕಸಭೆ ಹಾಗೂ ಶಾಸನಸಭೆಗಳ ವೇಳಾಪಟ್ಟಿ ಭಿನ್ನವಾದವು.

ಸರ್ವಾಧಿಕಾರಿ ಸ್ಥಿರತೆಯೋ? ಉತ್ತರದಾಯಿ ಅಸ್ಥಿರತೆಯೋ?

ಆದರೆ ಈ ಬೆಳವಣಿಗೆಯನ್ನು ಹೇಗೆ ನೋಡಬೇಕು? ಸರ್ಕಾರದ ಸ್ಥಿರತೆಯ ದೃಷ್ಟಿಯಿಂದ ನೋಡಿದರೆ ಇದು ಸಮಸ್ಯಾತ್ಮಕ.

ಆದರೆ ಪ್ರಜಾತಂತ್ರವೆಂದರೆ ಪ್ರಜೆಗಳ ಅಭಿಪ್ರಾಯಕ್ಕೆ ತಕ್ಕಂತೆ ಸರ್ಕಾರ ಮಾಡುವುದೋ? ಅಥವಾ ಜನರ ಅಭಿಪ್ರಾಯವನ್ನು ಔಪಚಾರಿಕಗೊಳಿಸಿ ಸ್ಥಿರ ಸರ್ವಾಧಿಕಾರಿ ಸರ್ಕಾರವನ್ನು ರಚಿಸುವುದೋ?

ಪ್ರಜಾತಂತ್ರದ ಬಗೆಗಿನ ಈ ಮೂಲಭೂತ ಪ್ರಶ್ನೆಗಳನ್ನು ಗಣನೆಗೂ ತೆಗೆದುಕೊಳ್ಳದ ಮೋದಿ ಸರ್ಕಾರ ಏಕಕಾಲಿಕ ಚುನಾವಣೆಗಳ ಬಗ್ಗೆ ಈ ಸರ್ವಾಧಿಕಾರಿ-ತಾಂತ್ರಿಕ ವಾದಗಳನ್ನು ಮಂಡಿಸುತ್ತಿದೆ.

ಅ) ಏಕಕಾಲಕ್ಕೆ ಎಲ್ಲಾ ಚುನಾವಣೆಗಳು ಮುಗಿದುಹೋದರೆ ಸರ್ಕಾರಗಳು ನಿರಾತಂಕವಾಗಿ ಆಡಳಿತದ ಕಡೆ ಗಮನಹರಿಸಬಹುದು ಮತ್ತು ಪ್ರತಿ ಚುನಾವಣೆ ಘೋಷಿಸಿದಾಗ ಮಾದರಿ ನೀತಿ ಸಂಹಿತೆ ಗಳು ಜಾರಿಗೆ ಬಂದು ಹಲವಾರು ತಿಂಗಳು ಅಭಿವೃದ್ಧಿ ಕೆಲಸಗಳು ನಿಂತುಹೋಗುವುದನ್ನು ತಡೆಯಬಹುದು:

ಸರ್ಕಾರದ ಈ ವಾದದ ಹಿಂದೆ ಚುನಾವಣೆಗಳು ಅರ್ಥಾತ್ ಜನರನ್ನು ಪದೇಪದೇ ಮುಖಾಮುಖಿಯಾಗುವುದು ಸರ್ಕಾರ ನಡೆಸಲು ಅಡ್ಡಿಯೆಂಬ ಸರ್ವಾಧಿಕಾರಿ-ಫ್ಯಾಸಿಸ್ಟ್ ತಿಳವಳಿಕೆ ಇದೆ. ವಾಸ್ತವದಲ್ಲಿ ಪ್ರಬುದ್ಧ ಪ್ರಜಾತಂತ್ರಗಳು ಚುನಾವಣೆಯ ಸಮಯದಲ್ಲಿ ಮಾತ್ರವಲ್ಲದೆ ಜನರ ಬದುಕನ್ನು ಪ್ರಭಾವಿಸುವ ಯಾವುದೇ ನೀತಿಗಳನ್ನು ಜಾರಿ ಮಾಡುವಾಗಲೂ ಜನಮತಗಣನೆ ನಡೆಸುತ್ತವೆ. ಆದರೆ ಬಿಜೆಪಿ-ಆರೆಸ್ಸೆಸ್-ಕಾರ್ಪೊರೇಟ್ ಕೂಟವು ಜನರು ಒಮ್ಮೆ ಚುನಾವಣೆಯಲ್ಲಿ ಒಟು ಕೊಟ್ಟ ನಂತರ ಉಳಿದ ಐದು ವರ್ಷಗಳ ಕಾಲ ತಟಸ್ಥ ಪ್ರೇಕ್ಷಕರಾಗಿ ಉಳಿಯಬೇಕೆಂದು ನಿರೀಕ್ಷಿಸುತ್ತವೆ.

ಇದನ್ನೂ ಓದಿ: ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ; ನೀಮ್ಮ ಮೌಲ್ಯ ಪೊಳ್ಳಾಗಿದೆ: ತಾಪ್ಸಿ ಪನ್ನು

ಎರಡನೆಯದಾಗಿ ಮಾದರಿ ನೀತಿ ಸಂಹಿತೆಯಿಂದಾಗಿ ಕೆಲವು ತಿಂಗಳು ಕಾಲ ಆಡಳಿತ ಯಂತ್ರಾಂಗ ನಿಷ್ಖ್ರಿಯವಾಗುತ್ತದೆ ಎಮ್ಬ ವಾದವನ್ನು ಆಡಳಿತರೂಢ ಪಕ್ಷವು ತಮ್ಮ ಐದು ವರ್ಷಗಳ ನಿಷ್ಖ್ರಿಯತೆಗೆ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿವೆ ಎಂಬುದು ಎಳೆ ಮಕ್ಕಳಿಗೂ ಅರ್ಥವಾಗುತ್ತದೆ. ಇಷ್ಟಾಗಿ ಅದು ತೊಡಕಾಗಿದ್ದರೆ, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಅಯೋಗವನ್ನು ಭೇಟಿಯಾಗಿ ಪರಿಹರಿಸಿಕೊಳ್ಳಬಹುದಾಷ್ಟು ಚಿಲ್ಲರೆ ಸಮಸ್ಯೆ ಅದು. ಹಾಗೆ ನೋಡಿದರೆ, ಮಾದರಿ ಸಂಹಿತೆ ಇದ್ದರೂ ಬಾಲಾಕೋಟ್ ದಾಳಿಯಾಗಲಿಲ್ಲವೇ? ಸೈನಿಕ ವಿಜಯವನ್ನು ಮೋದಿ ವಿಜಯವೆಂದು ಪ್ರಚಾರ ಮಾಡಲಿಲ್ಲವೇ?

ಆ) ವೆಚ್ಚಗಳು ಕಡಿಮೆಯಾಗುತ್ತವೆ!

ಮೋದಿ ಸರ್ಕಾರ ಪ್ರಕಾರ ೨೦೧೪ರ ಚುನಾವಣೆ ನಡೆಸಲು ಭಾರತ ಸರ್ಕಾರಕ್ಕೆ ಅಧಿಕೃತವಾಗಿ ೩೮೭೦ ಕೋಟಿ ವೆಚ್ಚವಾಯಿತು. ಆಗಲೇ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಗಳು ನಡೆದಿದ್ದರೆ ಹೆಚ್ಚುವರಿಯಾಗಿ ೫೦೦ ಕೋಟಿ ಮಾತ್ರ ಖರ್ಚಾಗುತ್ತಿತ್ತು. ಆದರೆ ಪ್ರತ್ಯೇಕವಾಗಿ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ೩-೪೦೦೦ ಕೋಟಿ ವೆಚ್ಚ ಹೆಚ್ಚುವರಿಯಾಗಿದೆ.

ಆದರೆ ಇದೊಂದು ಹಸಿ ಸುಳ್ಳು.

ಚುನಾವಣ ಅಯೋಗದ ಮತ್ತೊಂದು ಲೆಕ್ಕಾಚಾರದ ಪ್ರಕಾರವೇ ಏಕಕಾಲದಲ್ಲಿ ಚುನಾವಣೆ ನಡೆದರೆ ೨೦೧೯ರ ಲೆಕ್ಕಾಚಾರದಲ್ಲಿ ೧೦ ಲಕ್ಷ ಬೂತುಗಳಲ್ಲಿ ಎರಡೆರಡು EVM ಯಂತ್ರಗಳಂತೆ ೨೦ ಲಕ್ಷ ಯಂತ್ರಗಳು ಹಾಗೂ ೩-೪ ಲಕ್ಷ VVPAT ಯಂತ್ರಗಳಿಗಾಗಿ ಒಟ್ಟಾರೆಯಾಗಿ ೧೦,೦೦೦ ಕೋಟಿ ರೂಪಾಯಿಗಳು ಬೇಕಾಗುತ್ತವೆ. ಈ ಎಲ್ಲಾ ಯಂತ್ರಗಳನ್ನು ಪ್ರತಿ ೧೫ ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ!

ಇ) ಕಪ್ಪುಹಣ ಚಲಾವಣೆ ನಿಯಂತ್ರಣಕ್ಕೆ ಬರುತ್ತದೆ

ಬಿಜೆಪಿ ಪಕ್ಷ ಈ ವಾದವನ್ನು ಮುಂದಿಡುತ್ತಿರುವುದೇ ಅತ್ಯಂತ ಹಾಸ್ಯಾಸ್ಪದವಾದ ಸಂಗತಿ. ಇಂದು ಚುನಾವಣೆಗಳಲ್ಲಿ ಅಪಾರವಾದ ಕಪ್ಪುಹಣವನ್ನು ಬಳಸುತ್ತಿರುವ ಪಕ್ಷಗಳಲ್ಲಿ ಬೆಜೆಪಿ ಕಾಂಗ್ರೆಸ್ಸನ್ನು ತುಂಬಾ ಹಿಂದಕ್ಕೆ ಹಾಕಿದೆ. ಕಾರ್ಪೊರೇಟ್ ಶಕ್ತಿಗಳು ತಮ್ಮ ಪರವಾದ ಸರ್ಕಾರ-ನೀತಿಗಳು ಜಾರಿಗೆ ಬರಲು ಪಕ್ಷಗಳಿಗೆ ನೀಡುವ ದೇಣಿಗೆಯನ್ನು ಎಲೆಕ್ಟೊರಲ್ ಬಾಂಡ್ ಯೋಜನೆಯ ಮೂಲಕ ಅಪಾರದರ್ಶಕಗೊಳಿಸಿದ್ದೂ ಮತ್ತು ಅದರ ಅತ್ಯಂತ ದೊಡ್ಡ ಫಲಾನುಭವಿಯಾಗಿರುವುದೂ ಸಹ ಬಿಜೆಪಿ ಪಕ್ಷವೇ ಆಗಿದೆ. ಐದುವರ್ಷಕ್ಕೊಮ್ಮೆ ಮಾತ್ರ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಗಳಲ್ಲೂ ಕಪ್ಪುಹಣದ ಹೊಳೆ ಹರಿಸಿದ ಕೀರ್ತಿ ಬಿಜೆಪಿ ಪಕ್ಷಕ್ಕೇ ಸಲ್ಲಬೇಕು. ಎಲ್ಲಿಯತನಕ ಎಲೆಕ್ಟೋರಲ್ ಬಾಂಡ್ ಪದ್ಧತಿ ರದ್ದಾಗುವುದಿಲ್ಲವೋ, ಸರ್ಕಾರವೇ ಪಕ್ಷಗಳ ವೆಚ್ಚವನ್ನು ವಹಿಸಿಕೊಂಡು ಪಕ್ಷಗಳ ಎಲ್ಲಾ ಚುನಾವಣಾ ವೆಚ್ಚಗಳು ರದ್ದಾಗುವುದಿಲ್ಲವೋ ಅಲ್ಲಿಯತನಕ ಚುನಾವಣೆಯಲ್ಲಿ ಕಪ್ಪುಹಣ ಚಲಾವಣೆ ನಿಲ್ಲುವುದಿಲ್ಲ. ಅದು ಏಕಕಾಲಿಕ ಚುನಾವಣೆಯಾದರೂ ಅಷ್ಟೆ..ಭಿನ್ನ ಚುನಾವಣೆಯಾದರೂ ಅಷ್ಟೆ.

ಹೀಗೆ ಏಕಕಾಲಿಕ ಚುನಾವಣೆಗಳ ಬಗ್ಗೆ ಸರ್ಕಾರ ಮುಂದಿಡುತ್ತಿರುವ ಎಲ್ಲಾ ವಾದಗಳೂ ಅಸಂಬದ್ಧವಾಗಿವೆ. ಅಸಂಗತವಾಗಿವೆ.

ಆದರೆ ಏಕಕಾಲಿಕ ಚುನಾವಣೆಗಳು ಸಂವಿಧಾನಿಕ ಪ್ರಜಾತಂತ್ರಕ್ಕೆ ಮತ್ತು ಭಾರತದ ಫೆಡರಲ್ ವ್ಯವಸ್ಥೆಗ ಮಾಡುವ ಅಪಾಯ ಮಾತ್ರ ಅಪಾರವಾಗಿದೆ.

ಸಂವಿಧಾನ ನಾಶಕ ಪರಿಹಾರಗಳು:

ಏಕಕಾಲಿಕ ಚುನಾವಣೆ ನಡೆದರೂ ಚುನಾಯಿತ ಪಕ್ಷ ಸದನದ ವಿಶ್ವಾಸ ಕಳೆದುಕೊಂಡಾಗ ಏಕಕಾಲಿಕ ವ್ಯವಸ್ಥೆ ಮುರಿಯುತ್ತದೆ. ಅದನ್ನು ತಡೆಯಲು ಚುನಾವಣ ಅಯೋಗ ಮತ್ತು ನೀತಿ ಅಯೋಗ ಹಾಗೂ ಬಿಜೆಪಿ ಪಕ್ಷ ಮುಂದಿಡುತ್ತಿರುವ ಪರಿಹಾರ ಸಮಸ್ಯೆಗಿಂತ ಭೀಕರವಾಗಿದೆ.

ಅ) ವಿಶ್ವಾಸ ಇದ್ದರೆ ಮಾತ್ರ ಅವಿಶ್ವಾಸ?

ಈಗಿರುವ ಪ್ರಜಾತಾಂತ್ರಿಕ ನಿಯಮಗಳಂತೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಚುನಾಯಿತವಾದ ಸರ್ಕಾರವೊಂದು ಶಾಸನಸಭೆಯ ವಿಶ್ವಾಸವನ್ನು ಕಳೆದುಕೊಂಡರೆ ಅದು ಬಹುಮತವನ್ನು ಸಾಬೀತುಪಡಿಸಬೇಕು ಅಥವಾ ಅಧಿಕಾರ ಬಿಟ್ಟುಕೊಡಬೇಕು. ಬೇರೊಂದು ಪಕ್ಷದ ನಾಯಕರ ನೇತೃತ್ವದಲ್ಲಿ ಬಹುಮತವಿರುವ ಸರ್ಕಾರ ಸ್ಥಾಪನೆಯಾಗಬೇಕು. ಅದಾಗದಿದ್ದಲ್ಲಿ ರಾಜ್ಯಪಾಲ/ರಾಷ್ಟ್ರಪತಿ ಆಡಳಿತ ಜಾರಿಯಾಗಿ ಆದಷ್ಟು ಬೇಗ ಮರುಚುನಾವಣೆ ನಡೆಯುತ್ತದೆ. ಅದರಲ್ಲಿ ಗೆದ್ದುಬಂದವರು ಮುಂದಿನ ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತಾರೆ.

ಆದರೆ ಒಂದು ದೇಶ-ಒಂದು ಚುನಾವಣೆ ಜಾರಿಗೆ ಬರಬೇಕೆಂದರೆ ವಿಧಾನಮಂಡಲದ ಅವಧಿ ಚುನಾವಣೆಗಳಿಗೆ ತಕ್ಕಂತೆ ನಿಗದಿಯಾಗದೆ, ಪೂರ್ವ ನಿಗದಿಯಾದ ಅವಧಿಕೆ ತಕ್ಕಂತೆ ಚುನಾವಣೆಗಳು ನಡೆಯಬೇಕೆಂದು ಲಾ ಕಮಿಷನ್ನಿನ ೧೭೦ನೇ ವರದಿ ಸಲಹೆ ಮಾಡುತ್ತದೆ.

ಚುನಾವಣಾ ಅಯೋಗ ಹಾಗೂ ಲಾ ಕಮಿಷನ್ ೨೦೧೮ರಲ್ಲಿ ಕೊಟ್ಟ ವರದಿಯಲ್ಲಿ ಒಂದು ವೇಳೆ ಸದನದಲ್ಲಿ ಆಳುವ ಸರ್ಕಾರದ ಬಗ್ಗೆ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕೆಂದರೆ ಕಡ್ಡಾಯವಾಗಿ ಅದರ ಜೊತೆಗೆ ಯಾರ ನೇತೃತ್ವದ ಸರ್ಕಾರದ ಬಗ್ಗೆ ವಿಶ್ವಾಸ ಇದೆಯೆಂಬುದನ್ನು ಕೂಡಿಸಿ ಮಂಡಿಸಬೇಕೆಂದು ಸಲಹೆ ಮಾಡಿದೆ.

NITI ಅಯೋಗವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ೧೪ ದಿನಗಳ ಒಳಗೆ ಬದಲಿ ಸರ್ಕಾರವನ್ನು ರಚಿಸುವ ಸಾಧ್ಯತೆ ಇಲ್ಲದಿದ್ದರೆ ಅವಿಶ್ವಾಸ ಗೊತ್ತುವಳಿಗೆ ಅವಕಾಶವೇ ಕೊಡಕೂಡದೆಂದು ಸಲಹೆ ಮಾಡಿದೆ.

ಅವಧಿ ಕಡಿತ- ಸರ್ಕಾರದ ತಪ್ಪು-ಜನರಿಗೆ ಶಿಕ್ಷೆ

ಒಂದು ವೇಳೆ ಬದಲಿ ಸರ್ಕಾರ ರಚಿಸಲು ಸಾಧ್ಯವೇ ಆಗದೆ ಹೋದಲ್ಲಿ ಏನು ಮಾಡಬೇಕು? ಆಗ ಆ ಸದನದ ಅವಧಿ ಮುಗಿದುಹೋಗಲು ಕಡಿಮೆ ಕಾಲಾವಧಿ ಇದ್ದಲ್ಲಿ ರಾಷ್ಟ್ರಪತಿ/ರಾಜ್ಯಪಾಲರ ಆಡಳಿತ ಜಾರಿಯಾಗಬೇಕು. ಒಂದು ವೇಳೆ ಆಯಾ ಲೋಕಸಭ/ ಶಾಸನಸಭಾ ಅವಧಿ ಇನ್ನೂ ಹೆಚ್ಚು ಕಾಲವಿದ್ದರೆ ಹೊಸ ಚುನಾವಣೆ ನಡೆಯಬೇಕು. ಆದರೆ ಆಗ ಚುನಾಯಿತವಾಗುವ ಸರ್ಕಾರದ ಅವಧಿ ಐದು ವರ್ಷಗಳಾಗಿರುವುದಿಲ್ಲ. ಬದಲಿಗೆ ಉಳಿಕೆ ಅವಧಿಗೆ ಮಾತ್ರ ಹೊಸ ಸರ್ಕಾರದ ಆಡಳಿತ ಅವಧಿ ಸೀಮಿತವಾಗಿರುತ್ತದೆ!

ಅಂದರೆ ಏಕಕಾಲಿಕ ಚುನಾವಣೆಯನ್ನು ಸಾಧ್ಯಗೊಳಿಸಲು ಈಬಗೆಯ ಅಪಾಯಕಾರಿ ತಾಂತ್ರಿಕ ಪರಿಹಾರಗಳನ್ನು ಒದಗಿಸುತ್ತಿರುವ ಬಿಜೆಪಿ ಸರ್ಕಾರ ಇದರಿಂದ ಜನರ ಸಾಂವಿಧಾನಿಕ ಹಕ್ಕುಗಳು ಹೇಗೆ ಬಲಿಯಾಗುತ್ತಿವೆ ಎಂಬುದನ್ನು ಮರೆಸುತ್ತಿದೆ.

ಸಾಂವಿಧಾನಿಕ ಸರ್ವಾಧಿಕಾರದ ಹುನ್ನಾರಗಳು

ಅಸಲು ಬಿಜೆಪಿ ಸರ್ಕಾರಕ್ಕೆ ಒಂದು ದೇಶ ಒಂದೇ ಚುನಾವಣೆಯ ವಿಷಯದ ಏಕೆ ಮುಖ್ಯವಾಗಿದೆ?

IDFC Institute ಎಂಬ ಸಂಸ್ಥೆಯು ೧೯೯೯, ೨೦೦೪, ೨೦೦೯ ಮತ್ತು ೨೦೧೪ರ ಸಾರ್ವತ್ರಿಕ ಚುನಾವಣೆಗಳಲ್ಲಿ ಲೋಕಸಭೆ ಮತ್ತು ರಾಜ್ಯಗಳ ಶಾಸನಸಭೆಗಳಿಗೆ ಏಕಾಕಾಲದಲ್ಲಿ ಚುನಾವಣೆ ನಡೆದ ರಾಜ್ಯಗಳ ಮತದಾನದ ಸ್ವರೂಪವನ್ನು ಅಧ್ಯಯನ ಮಾಡಿದೆ. ಅದರ ಪ್ರಕಾರ ಏಕಕಾಲದಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಚುನಾವಣೆ ನಡೆದರೆ ಮತದಾರರು ಒಂದೇ ಪಕ್ಷಕ್ಕೆ ಓಟು ಹಾಕುವ ಸಾಧ್ಯತೆ ಶೇ.೭೭ರಷ್ಟು ಹೆಚ್ಚು. ಕೆಲವು ರಾಜ್ಯಗಳಲ್ಲಿ ಅದು ಶೇ.೮೫ರಷ್ಟು!!
೧೯೬೭ರ ಪೂರ್ವದ ಅವಧಿಯಲ್ಲೂ ಇದೇ ಸ್ವರೂಪದಲ್ಲೇ ಮತದಾನವಾಗಿವೆ.

ಇದನ್ನೂ ಓದಿ: ‘ಒಂದು ರಾಷ್ಟ್ರ – ಒಂದು ಚುನಾವಣೆ’ ಜಾರಿಗೆ ಚುನಾವಣಾ ಆಯೋಗ ಸಿದ್ದವಾಗಿದೆ: ಚುನಾವಣಾ ಆಯುಕ್ತ

ಅಮೆರಿಕದ ಮತ್ತೊಂದು ಅಧ್ಯಯನ ಸಂಸ್ಥೆಯ ಪ್ರಕಾರ ೨೦೧೪ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಜೊತೆಗೇ ಎಲ್ಲಾ ರಾಜ್ಯಗಳ ಶಾಸನಸಭಾ ಚುನಾವಣೆಗಳು ನಡೆದಿದ್ದರೆ ಬಹುಪಾಲು ರಾಜ್ಯಗಳಲ್ಲಿ ಬಿಜೆಪಿ ಅಪಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿತ್ತು. ಆದರೆ ಒಂದು ವರ್ಷದ ನಂತರ ದೆಹಲಿ ವಿಧಾನಸಭೆಗೆ ಮತ್ತು ಬಿಹಾರ ವಿಧಾನಸಭೆಗೆ ಚುನಾವಣೆ ನಡೆದದ್ದರಿಂದ ಆ ರಾಜ್ಯಗಳಲ್ಲಿ ಲೋಕಸಭೆಯಲ್ಲಿ ಅಪಾರ ಬಹುಮತ ಪಡೆದಿದ್ದ ಬಿಜೆಪಿ ಪಕ್ಷಕ್ಕೆ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ಓಟು ಮತ್ತು ಸೀಟುಗಳು ಮಾತ್ರ ದಕ್ಕಿದವು.

ಇದಕ್ಕೆ ಮುಖ್ಯ ಕಾರಣ ಲೋಕಸಭೆಯ ಚುನಾವಣೆಗಳಲ್ಲಿ ರಾಷ್ಟ್ರ , ಧರ್ಮ, ಭದ್ರತೆಯಂಥ ಭಾವನಾತ್ಮಕ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದರೆ, ಸಾಮಾನ್ಯವಾಗಿ ರಾಜ್ಯಗಳ ಶಾಸನಾಸಭಾ ಚುನಾವಣೆಗಳಲ್ಲಿ ಬದುಕಿಗೆ ಸಂಬಂಧಪಟ್ಟ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ.

ಹೀಗಾಗಿ ಏಕಕಾಲದಲ್ಲಿ ಚುನಾವಣೆ ನಡೆದಾಗ ಬದುಕಿಗೆ ಸಂಬಂಧಪಟ್ಟ ವಿಷಯಗಳನ್ನು ಭಾವನಾತ್ಮಕ ವಿಷಯಗಳು ನುಂಗಿಹಾಕುತ್ತವೆ. ಹಾಗೂ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳಿಗೇ ಹೆಚ್ಚಿನ ಮನ್ನಣೆಯನ್ನು ಪಡೆದುಕೊಳ್ಳುತ್ತವೆ.

ಇದು ಪ್ರಜಾತಂತ್ರದಲ್ಲಿ ಪ್ರಬುದ್ಧ ಮತದಾರರ ಪಾತ್ರವನ್ನು ಮತ್ತಷ್ಟು ಗೌಣಗೊಳಿಸಿ ಸರ್ವಾಧಿಕಾರಿ, ಹುಸಿ ರಾಷ್ಟ್ರವಾದಿ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ.

೨೦೨೪ರಲ್ಲಿ ಚುನಾಯಿತ ಸರ್ವಾಧಿಕಾರದ ಗುರಿ?

ಆರೆಸ್ಸೆಸ್-ಬಿಜೆಪಿ ಪಕ್ಷಗಳು ಮತ್ತು ಮೋದಿ ಸರ್ಕಾರ ಈ ವ್ಯವಸ್ಥೆಯನ್ನು ೨೦೧೯ರ ಚುನಾವಣೆಯಲ್ಲೇ ಜಾರಿಗೆ ತರಬೇಕೆಂದಿದ್ದವು ಆದರೆ ಅವು ಜಾರಿಯಾಗಬೇಕೆಂದರೆ ಸಂವಿಧಾನದ ೮೩, ೧೭೨ನೇ ವಿಧಿಗಳಿಗೆ ಸಾಂವಿಧಾನಿಕ ತಿದ್ದುಪಡಿಗಳನ್ನೂ ತರಬೇಕಾಗುತ್ತದೆ. ಆದರೆ ಇದು ಭಾರತದ ಸಂವಿಧಾನದ ಮೂಲರಚನೆಯಾಗಿರುವ ಫೆಡರಲ್ ವ್ಯವಸ್ಥೆಯನ್ನೂ ಬದಲಿಸುತ್ತದೆ. ಸಂಸತ್ತಿಗೆ ಸಂವಿಧಾನದ ಮೂಲರಚನೆಯನ್ನು ಬದಲಿಸುವ ಅವಕಾಶವಿಲ್ಲ. ಹೀಗಾಗಿ ೨೦೧೯ರಲ್ಲಿ ಅದು ಸಾಧ್ಯವಾಗಲಿಲ್ಲ.

ಈಗ ೨೦೨೪ಕ್ಕಾದರೂ ಒಂದೇ ದೇಶ ಒಂದೇ ಚುನಾವಣೆಯೆಂಬ ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿ ಮಾಡಲು ಆರೆಸ್ಸೆಸ್-ಬಿಜೆಪಿ-ಕಾರ್ಪೊರೇಟ್ ಕೂಟವು ೨೦೧೯ರಲ್ಲಿ ಮೋದಿ ಸರ್ಕಾರ ಎರಡನೇ ಬಾರಿ ಅಧಿಕಾರಕೆ ಬಂದ ಒಂದು ತಿಂಗಳಿಂದಲೇ ಪ್ರಯತ್ನಗಳನ್ನು ಪ್ರಾರಂಭಿಸಿವೆ. ಕರ್ನಾಟಕ ವಿಧಾನಸಭೆಯಲ್ಲಿ ನಡೆಸಲೆತ್ನಿಸಿದ ಚರ್ಚೆ ಅದರ ಭಾಗ.

ವಿಧಾನಮಂಡಲದಲ್ಲಿ ಚರ್ಚೆ ನಡೆಸಲಾಗದಿದ್ದರೂ ಹಿಮ್ಮೆಟ್ಟದ ಬಿಜೆಪಿ ಪಕ್ಷ ಸದನದ ಹೊರಗೇ ವಿಷಯದ ಬಗ್ಗೆ ಸಾಲು ಸಾಲು ಸಭೆಗಳನ್ನು ಏರ್ಪಡಿಸಿ ಜನಮಾನಸವನ್ನು ಸಾಂವಿಧಾನಿಕ ಸರ್ವಾಧಿಕಾರಕ್ಕೆ ಸಿದ್ಧಗೊಳಿಸುತ್ತಿದೆ.

ಕಾಂಗ್ರೆಸ್ಸಿನ ಜಡ-ಅವಕಾಶವಾದಿ ರಾಜಕಾರಣಕ್ಕೂ ಬಿಜೆಪಿಯ ಫ್ಯಾಸಿಸ್ಟ್ ರಾಜಕಾರಣಕ್ಕೂ ದೊಡ್ಡ ವ್ಯತ್ಯಾಸ ಇರುವುದು ಇಲ್ಲೇ…

ಈ ಫ್ಯಾಸಿಸ್ಟ್ ಕಥನಕ್ಕೆ ಪ್ರತಿಯಾಗಿ ಪ್ರಜಾತಾಂತ್ರಿಕ ಪ್ರತಿಕಥನವನ್ನು ರೂಪಿಸುತ್ತಾ ಜನಪರಶಕ್ತಿಗಳು ಸಾಂವಿಧಾನಿಕ ಸರ್ವಾಧಿಕಾರ ಜಾರಿಯಾಗದಂತೆ ತಡೆಯಬೇಕಿದೆ.

– ಶಿವಸುಂದರ್


ಇದನ್ನೂ ಓದಿ: ಒಂದು ದೇಶ- ಒಂದು ಚುನಾವಣೆಯೋ? ಒಂದು ಪಕ್ಷದ ಸರ್ವಾಧಿಕಾರವೋ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights