ರಮೇಶ್ ಜಾರಕಿಹೊಳಿ ನೇರವಾಗಿ ಕೊಡದ ದೂರನ್ನು ಪೊಲೀಸರು ಹೇಗೆ ಸ್ವೀಕರಿಸಿದ್ರು?- ರಮೇಶ್ ಕುಮಾರ್
ವಿಧಾನಸಭಾ ಕಲಾಪದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸದ್ದು ಗದ್ದಲಕ್ಕೆ ಎಡೆ ಮಾಡಿದೆ. ವಿಪಕ್ಷ ನಾಯಕರು ಆಡಳಿತ ಪಕ್ಷಕ್ಕೆ ಗಂಭೀರವಾಗಿ ಪ್ರಶ್ನಿಸಿದ್ದು ಕೆಲವು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಕಲಾಪದ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಗೆ ಮಾಜಿ ಸ್ಪೀಕರ್ ಆರ್. ರಮೇಶ್ ಕುಮಾರ್ ಗಂಭೀರವಾಗಿ ಪ್ರಶ್ನೆ ಮಾಡಿದ್ದಾರೆ.
ಮಾರ್ಚ್ 2ಕ್ಕೆ ಬಿಡುಗಡೆಯಾಗಿ ಭಾರೀ ಸುದ್ದಿ ಮಾಡಿದ್ದ ಸಿಡಿ ಬಗ್ಗೆ ರಮೇಶ್ ಜಾರಕಿಹೊಳಿ ನನಗೇನು ಗೊತ್ತಿಲ್ಲ ಎಂದು ಹೇಳಿದ್ದರು. ಹೀಗಾಗಿ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದಿದ್ದರು. ಬಳಿಕ ಮಾರ್ಚ್ 13 ಕ್ಕೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಯಿತು. ಅದು ಹೇಗೆ? ರಮೇಶ್ ಜಾರಕಿಹೊಳಿ ನೇರವಾಗಿ ದೂರು ದಾಖಲಿಸಿಲ್ಲ. ಬದಲಿಗೆ ಮಾಜಿ ಶಾಸಕ ನಾಗರಾಜ್ ಅವರ ಮೂಲಕ ದಾಖಲಿಸಲಾಗಿದೆ. ನಾಳೆ ರಮೇಶ್ ಜಾರಕಿಹೊಳಿ ಬಂದು ನಾನು ದೂರು ಕೊಟ್ಟಿಲ್ಲ ಎಂದು ಹೇಳಿದ್ದರೆ ಏನ್ ಮಾಡುತ್ತಾರೆ. ಇಂಥಹ ದೂರನ್ನು ದಾಖಲಿಸಿಕೊಳ್ಳಬೇಕಾ? ಬೇಡವಾ? ಅನ್ನೋ ಸಣ್ಣ ಪರಿಜ್ಞಾನ ಕೂಡ ಪೊಲೀಸರಿಗೆ ಇಲ್ವಾ? ಎಂದು ರಮೇಶ್ ಸದನದಲ್ಲಿ ಪ್ರಶ್ನೆ ಮಾಡಿದ್ದಾರೆ.
ರಮೇಶ್ ಅವರು ಮನೆಯಲ್ಲೇ ಇದ್ದು, ಅವರ ವಿರುದ್ಧವೇ ಸಿಡಿ ಪ್ರಕರಣ ಇದ್ದು, ಆದರೆ ಅವರು ದಾಖಲಿಸುವ ದೂರನ್ನು ಬೇರೆಯವರ ಕೈಯಲ್ಲಿ ದಾಖಲಿಸಿದ್ದಾರೆ. ಇದು ಏನನ್ನು ಸೂಚಿಸುತ್ತದೆ. ಇಂಥಹ ಗಂಭೀರ ವಿಚಾರವನ್ನು ಪೊಲೀಸರು ಅದು ಹೇಗೆ ಇಷ್ಟು ನಿರ್ಲಕ್ಷ್ಯ ತೋರುತ್ತಾರೆ? ಎಂದು ಮಾಜಿ ಸ್ಪೀಕರ್ ಹರಿಹಾಯ್ದಿದ್ದಾರೆ.
22 ತಾರೀಖು ಆದರೂ ಪೊಲೀಸರು ಆ ಯುವತಿಯನ್ನು ಪತ್ತೆ ಹಚ್ಚಲಾಗಿಲ್ಲಾ? ಅಂದರೆ ಪೋಲೀಸರು ಅಸಹಾಯಕರಾಗಿದ್ದಾರೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ‘ಸಿಡಿ ವಿಚಾರ ತನಿಖಾ ಹಂತದಲ್ಲಿದೆ. ತನಿಖೆ ಬಳಿಕ ಸವಿಸ್ತಾರವಾದ ಮಾಹಿತಿ ನಿಮಗೆ ನೀಡುತ್ತೇವೆ. ಎಸ್ ಐಟಿ ಮತ್ತು ಪೊಲೀಸರು ಈ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ತನಿಖಾ ಹಂತದಲ್ಲಿರುವ ವಿಚಾಋವನ್ನು ನಾವು ಪ್ರಸ್ತಾಪ ಮಾಡಲು ಬರುವುದಿಲ್ಲ’ ಎಂದು ಹೇಳಿದ್ದಾರೆ.