ರೇನಬೋ ಸ್ಟಾರ ಬಿರುದು ಪಡೆದ ಉ.ಕರ್ನಾಟಕದ ಹುಡುಗನಿಗೆ ಸಿಎಂ ಸನ್ಮಾನ..!
ಕುಂದಾನಗರಿಯ ಪ್ರತಿಮೆ ಕಿರುತೆರೆ ಹಾಗೂ ಚಲನಚಿತ್ರ ನಟ ಸಂತೋಷರಾಜ್ ಝಾವರೆ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ ರೇನಬೋ ಸ್ಟಾರ (RAINBOW STAR)’ ಎಂದು ಬಿರುದು ನೀಡಿ ಸನ್ಮಾನಿಸಿದರು.
ಸಂತೋಷರಾಜ್ ಅಪ್ರತಿಮ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ , ನಾಯಕ ನಟನಾಗಿ ನಟಿಸಿ, ಜತೆಗೆ ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಈಗಲೂ ಸಹ ಕಾರ್ಯ ಪ್ರವೃತ್ತರಾಗಿದ್ದಾರೆ.
ದಿ. ವೈಶಾಲಿ ಕಾಸರವಳ್ಳಿ ಗರಡಿಯಿಂದ ‘ಮೂಡಲಮನೆ’ ಧಾರವಾಹಿಯಲ್ಲಿ ಶೀಹರಿ, ಬಂಗಾರ ಧಾರವಾಹಿಯಲ್ಲಿ ಡಿಸಿ ಎಂದೇ ಖ್ಯಾತಿ ಪಡೆದ ಕಳೆದ 22 ಕ್ಕೂ ಹೆಚ್ಚು ವರ್ಷಗಳಿಂದ ಬಣ್ಣ ಹಚ್ಚಿ, ರಾಜ್ಯದ ಜನರನ್ನು ಮನರಂಜಿಸಿದ್ದಾರೆ. ಕಲೆ, ಸಾಮಾಜಿಕ ಕಾರ್ಯಗಳಿಂದ ಜನರ ಮನದಲ್ಲಿ ನೆಲೆಯೂರಿ , ಅಭಿಮಾನಿಗಳಿಂದ ಗುರುತಿಸಿಕೊಂಡಿರುತ್ತಾರೆ. ಇವರ ಕಲಾ ಪ್ರತಿಭೆ ಹಾಗೂ ಕಲಾಸೇವೆ ಅವಿಸ್ಮರಣೀಯ.
ಬೆಳಗಾವಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ನೀಡುವ ಬಿರುದು ಹಾಗೂ ಪ್ರಶಸ್ತಿಯನ್ನು ಇಂದು ಶ್ರೀ. ಎನ್. ಆರ್. ಲಾತೂರ, ಕಾರ್ಮಿಕ ಸಂಘದ ಅಧ್ಯಕ್ಷರ ಉಪಸ್ಥಿತಿಯಲ್ಲಿ ಸಿಎಂ, ಸಚಿವರುಗಳು ಪ್ರಧಾನ ಮಾಡಿದರು. ಶೀಘ್ರದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಲಕ್ಷ್ಯ ಕನ್ನಡ ಚಲನಚಿತ್ರ ಸಾಮಾಜಿಕ ಕಳಕಳಿಯ ವಿಷಯ ಹೊಂದಿದ್ದು ಲಕ್ಷ್ಯ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಶಾಸಕ ಅನಿಲ ಬೆನಕ, ಮಾಜಿ ಸಚಿವ ಶಶಿಕಾಂತ ನಾಯಕ, ಕಿರಣ ನಾಗಲೋಟಿ, ಡಾ. ಆದಿ , ನಿರ್ಮಾಪಕ ಸುಧೀರ ಹುಲ್ಲೊಳಿ, ಆನಂದ ಕೊಳಕಿ, ನಿರ್ದೇಶಕ ರವಿ ಸಾಸನೂರ, ನಿರ್ದೇಶಕ ಸಂಕಲನ ಶಿವಕುಮಾರ್, ಸಾಕ್ಷಿ ಝಾವರೆ, ಆರ್ಯನ್ ಝಾವರೆ ಇತರರು ಉಪಸ್ಥಿತಿತರಿದ್ದರು.