ಬೆಂಗಳೂರಿನಲ್ಲಿ ಕೊರೊನಾ 2ನೇ ಅಲೆ ಅಬ್ಬರ : ಆಸ್ಪತ್ರೆಗಳಲ್ಲಿ ಬೆಡ್, ಐಸಿಯು ಕೊರತೆ…!
ರಾಜ್ಯ ರಾಜಧಾನಿಯಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದು ದಿನಕಳೆದಂತೆ ಸಾವಿನ ಸಂಖ್ಯೆ ಅಧಿಕವಾಗುತ್ತಿದೆ. ಎಷ್ಟೇ ಕಠಿಣ ನಿಮಯ ಜಾರಿಗೆ ತಂದರೂ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಸೊಂಕಿತರ ಸಂಖ್ಯೆ ಹೆಚ್ಚಾದಂತೆ ಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕ ಮತ್ತು ಐಸಿಯು ಕೊರತೆ ಹೆಚ್ಚಾಗುತ್ತಿದೆ. ಇನ್ನೂ ಶವ ಸಂಸ್ಕಾರಕ್ಕೂ ಗಂಟೆಗಟ್ಟೆಲೆ ಶವಾಗಾರಗಳ ಮುಂದೆ ಸಂಬಂಧಿಕರು ಕಾಯುವ ಸ್ಥಿತಿ ಉಂಟಾಗಿದೆ.
ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ” ಈಗಾಗಲೇ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸೋಂಕಿಗೆ ಒಳಗಾಗುತ್ತಿದ್ದು ಒಂದು ಸಾವಿರಕ್ಕೂ ಹೆಚ್ಚು ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಪ್ರತಿನಿತ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್ ಗಳು, ಆಮ್ಲಜನಕ ಹಾಗೂ ಐಸಿಯು ಕೊರತೆ ಎದುರುಸುವಂತಾಗಿದೆ. ಇದರಿಂದ ಎಂದು ಮಧ್ಯಾಹ್ನ ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
ಹೀಗಾಗಿ ಇಂದು ರಾಜ್ಯದಲ್ಲಿ ಸಭೆ ಬಳಿಕ ಮಹತ್ವದ ಆದೇಶ ಹೊರಬಂದರೂ ಆಶ್ಚರ್ಯವಿಲ್ಲ. ಪ್ರತಿ ನಿಮಿಷಕ್ಕೆ 9 ಜನರಿಗೆ ಕೊರೊನಾ ಸೋಂಕು ತಗುಲುತ್ತಿದ್ದು ಗಂಟೆಗೆ 2-3 ಜನ ಬಲಿಯಾಗುತ್ತಿದ್ದಾರೆನ್ನಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಇನ್ನಷ್ಟು ಕಠಿಣ ಕ್ರಮ ಜಾರಿಗೆ ತರಲು ಇಂದು ಮಧ್ಯಾಹ್ನ 3 ಗಂಟೆಗೆ ಉನ್ನತ ಮಟ್ಟದ ಸಭೆ ಕರೆಯಲಾಗಿದೆ.
ಸಭೆ ಬಳಿಕ ಈಗಾಗಲೇ ತಜ್ಞರ ಸಲಹೆ ಮೇರೆಗೆ ಎಲ್ಲೆಲ್ಲಿ ಹೆಚ್ಚು ಜನ ಸೇರುತ್ತಾರೆ ಅಲ್ಲೆಲ್ಲೆ 144 ಸೆಕ್ಷನ್ ಜಾರಿ ಮಾಡಬಹುದು. ಜೊತೆಗೆ ಹೆಚ್ಚು ಜನ ಸೇರುವ ಜಾಗಗಳಾದ ಮಾರ್ಕೇಟ್, ಮಾಲ್, ಅಂಗಡಿ ಮುಗ್ಗಟ್ಟುಗಳ ಮುಂದೆ ಜನ ಸೇರಲು ಕಡಿವಾಣ ಹಾಕುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೆ ಲಾಕ್ ಡೌನ್ ಮಾಡುವಂತ ಸ್ಥಿತಿ ನಿರ್ಮಾಣವಾಗುತ್ತಿದೆ.
ಇನ್ನೂ ದೇಶದಲ್ಲಿ ಕೊರೊನಾ ತಡೆಗಟ್ಟುವ ವಿಚಾರವಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ತುರ್ತು ಸಭೆ ಕೂಡ ಕರೆಯಲಾಗಿದೆ. ಕಳೆದ ವರ್ಷದಂತೆ ದೇಶದಲ್ಲಿ ಅತೀ ಹೆಚ್ಚು ಸೋಂಕಿತರು ಇರುವ ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡುವ ಸಾಧ್ಯತೆ ಇದೆ.