ಸಿಡಿ ಕೇಸ್ – ಕೊರೊನಾ ನೆಗೆಟಿವ್ ಬಂದರೂ ವಿಚಾರಣೆಗೆ ಗೈರಾದ ರಮೇಶ್ ಜಾರಕಿಹೊಳಿ!
ಸಿಡಿ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ನೆಗಟಿವ್ ಬಂದಿದ್ದು ಎಸ್ಐಟಿ ವಿಚಾರಣೆಗೆ ಮಾತ್ರ ಹಾಜರಾಗಿಲ್ಲ.
ಹೌದು… ಸಿಡಿ ಸಂತ್ರಸ್ತೆ ಕಣ್ಮರೆಯಾಗಿ ಬಂದಾಗಿನಿಂದಲೂ ಆಕೆಯ ಮತ್ತು ಆಕೆಯ ಕುಟುಂಬಸ್ಥರ ವಿಚಾರಣೆ ನಡೆಯುತ್ತಲೇ ಇದೆ. ಆದರೆ ಸಿಡಿ ಪ್ರಕರಣದ ಪ್ರಮುಖ ಆರೋಪಿ ಮಾತ್ರ ಇಲ್ಲಿಯವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಸಿಡಿ ಸಂತ್ರಸ್ತೆ ಪ್ರತ್ಯಕ್ಷಳಾಗುತ್ತಿದ್ದಂತೆ ಅಜ್ಞಾತವಾಸಕ್ಕೆ ತೆರಳಿದ್ದ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಚಾರಣೆಯಿಂದ ತಪ್ಪಿಸಿಕೊಳ್ಳುವ ನಾಟಕ ಇದು ಎಂದು ಕೆಲವರು ವ್ಯಂಗ್ಯವಾಡಿದ್ದು ಉಂಟು. ಆದರೆ ಸದ್ಯ ರಮೇಶ್ ಜಾರಕಿಹೊಳಿಗೆ ಕೊರೊನಾ ನೆಗೆಟಿವ್ ಬಂದಿದೆ. ಆದರೂ ರಮೇಶ್ ಎಸ್ಐಟಿ ವಿಚಾರಣೆಗೆ ಹಾಜರಾಗಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಮ್ಮೆ ಮಾತ್ರ ಎಸ್ಐಟಿ ಮುಂದೆ ಹಾಜರಾಗಿದ್ದ ರಮೇಶ್ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ತಬ್ಬಿಬ್ಬಾಗಿದ್ದರು. ಇದಾದ ಬಳಿಕ ಅವರು ವಿಚಾರಣೆಗೆ ಹಾಜರಾಗೇ ಇಲ್ಲ. ಹೀಗಾಗಿ ಹಿಂದೆ ಸಿಡಿ ಸಂತ್ರಸ್ತೆ ರಮೇಶ್ ಜಾರಕಿಹೊಳಿ ವಿಚಾರಣೆ ಮಾಡಬೇಕೆಂದು ಒತ್ತಾಯ ಹೇರಿದ್ದಳಾದರೂ ಪ್ರಯೋಜನವಾಗಿಲ್ಲ.
ರಮೇಶ್ ಇನ್ನು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿರುವುದರಿಂದ ಗೋಕಾಕ್ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು,ಇಂದು ಕೂಡ ವಿಚಾರಣೆಗೆ ಹಾಜರಾಗುವುದು ಕಷ್ಟ ಇದೆ ಎನ್ನಲಾಗುತ್ತಿದೆ.