ಶವ ನೀಡಲು 60,000 ಕೇಳಿದ ಆಂಬುಲೆನ್ಸ್ ಮಾಲೀಕ?; ತಾಳಿಯನ್ನೇ ಅಡವಿಡಲು ಮುಂದಾದ ಮಗಳು!
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಶವವನ್ನು ಸಾಗಿಸಲು ಖಾಸಗಿಆಂಬುಲೆನ್ಸ್ ಒಂದರ ಮಾಲೀಕ 60,000 ಹಣಕ್ಕೆ ಬೇಡಿಕೆ ಇಟ್ಟಿದ್ದು, ಅಷ್ಟು ಹಣವನ್ನು ಭರಿಸುವುದಕ್ಕಾಗಿ ಮೃತವ್ಯಕ್ತಿಯ ಮಗಳು ತನ್ನ ತಾಳಿಯನ್ನೇ ಅಡವಿಡಲು ಮುಂದಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊರೊನಾದಿಂದಾಗಿ ನನ್ನ ತಂದೆ ಗಂಭೀರ ಸ್ಥಿತಿಯಲ್ಲಿದ್ದರು. ಮಂಗಳವಾರ ಸಂಜೆ ಜೈ ಹನುಮಾನ್ ಆಂಬುಲೆನ್ಸ್ನವರಿಗೆ ಕರೆ ಮಾಡಿದೆವು. ಮತ್ತಿಕೆರೆಯಿಂದ ಸುಬ್ಬಯ್ಯ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಪ್ರಾಣ ಬಿಟ್ಟಿದ್ದರು. ಆಂಬುಲೆನ್ಸ್ನ ಸಿಬ್ಬಂದಿ 60 ಸಾವಿರ ಕೊಟ್ಟರೆ ಮಾತ್ರ ಶವ ಕೊಡುವುದಾಗಿ ಹೇಳಿದರು. ಅದಕ್ಕೆ ಅನಿವಾರ್ಯವಾಗಿ ಮಾಂಗಲ್ಯ ಅಡವಿಡಲು ಮುಂದಾಗಿದ್ದೆ’ ಎಂದು ಮೃತರ ಮಗಳು ಹೇಳಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ.
‘ಹಣ ಹೊಂದಿಸಲು ಮಧ್ಯರಾತ್ರಿಯವರೆಗೆ ಓಡಾಡಿದ್ದೇವೆ. ಚಿತಾಗಾರದ ಮುಂದೆ ಗಂಟೆಗಟ್ಟಲೇ ಆಂಬುಲೆನ್ಸ್ ನಿಂತಿತ್ತು. ಮಾಧ್ಯಮಗಳಲ್ಲಿ ಸುದ್ದಿ ಬಂದ ನಂತರ ಶವ ನೀಡಿದ್ದಾರೆ. ಕಾಯುವಿಕೆ ಸಮಯದ ಶುಲ್ಕ ಸೇರಿ ಒಟ್ಟು 13,000 ಕಟ್ಟಿಸಿಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ನಾವು ಉತ್ತರ ಕರ್ನಾಟಕದವರು. ಆರು ಸಾವಿರಕ್ಕೆ ನಾವು ಹೇಳುವುದು ಅರವತ್ತು ನೂರು ಎಂದು. ನಾನು ಅರವತ್ತು ನೂರು ಕೊಡಿ ಎಂದಿದ್ದನ್ನು ಅವರು 60 ಸಾವಿರ ಎಂದುಕೊಂಡಿದ್ದರು. ಮಾಸ್ಕ್ ಹಾಕಿದ್ದರಿಂದ ಅವರಿಗೆ ಸರಿಯಾಗಿ ಕೇಳಿಲ್ಲ ಎನಿಸುತ್ತದೆ. ನಮಗೆ ಕೊಟ್ಟಿರುವುದು 6 ಸಾವಿರ ರೂ ಮಾತ್ರ. ಸುಮ್ಮನೆ ಆರೋಪ ಮಾಡಲಾಗುತ್ತಿದೆ’ ಎಂದು ಜೈ ಹನುಮಾನ್ ಆಂಬುಲೆನ್ಸ್ ಮಾಲೀಕ ಹನುಮಂತು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಖುರ್ಚಿಗೆ ಸಂಚಕಾರ?; ನಿಜಕ್ಕೂ ಬಿಎಸ್ವೈಗೆ ಕೊರೊನಾ ಬಂದಿತ್ತಾ? ಇವೆ ಹಲವು ಅನುಮಾನಗಳು!