ರಾಜ್ಯದಲ್ಲಿ ಸರ್ಕಾರಿ ನೌಕರರ ವೇತನ ಕಡಿತ ವದಂತಿ; ಸ್ಪಷ್ಟನೆ ನೀಡಿದ ನೌಕರರ ಸಂಘದ ಅಧ್ಯಕ್ಷ!
ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕಡಿತಗೊಳಿಸಲಾಗುತ್ತದೆ ಎಂಬ ವದಂತಿಗಳು ಸಾಮಾಜಿಕ ಜಾತಾಣದಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿ ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಸ್ಪಷ್ಟನೆ ನೀಡಿದ್ದು, ವೇತನ ಕಡಿತ ಎಂಬುದು ಸುಳ್ಳು, ನೌಕರರ ವೇತನವನ್ನು ಯಾಥಾ ಪ್ರಕಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ನೌಕರರ ವೇತನ ಕಟಾವು ಮಾಡುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಆಧಾರ ರಹಿತವಾಗಿದೆ. ನೌಕರರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ತಡೆ ಹಿಡಿಯುವ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸರ್ಕಾರಿ ನೌಕರರು ಗೊಂದಲಕ್ಕೊಳಗಾಗಿರುವುದನ್ನು ಗಮನಿಸಿ ಈ ಸ್ಪಷ್ಟನೆ ನೀಡಲಾಗಿದೆ ಎಂದಿದ್ದಾರೆ.
ಸಂಪ್ರದಾಯದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಆಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಗಳನ್ನು ಈ ಹಿಂದೆ ಕೈಗೊಳ್ಳಲಾಗುತ್ತಿತ್ತು. ಈ ಕ್ಷಣದವರೆಗೂ ಆ ರೀತಿಯ ಯಾವುದೇ ಚರ್ಚೆಗಳನ್ನು ಸಂಘದ ಜತೆ ಸರ್ಕಾರ ನಡೆಸಿಲ್ಲ ಎಂದು ತಿಳಿಸಿದ್ದಾರೆ