ಬೈಲೆಕ್ಷನ್ ಕರ್ತವ್ಯಕ್ಕೆ ಹಾಜರಾಗಿದ್ದ 30ಕ್ಕೂ ಹೆಚ್ಚು ಶಿಕ್ಷಕರು ಕೊರೊನಾಕ್ಕೆ ಬಲಿ!
ಕೊರೊನಾ 2 ನೇ ಅಲೆ ಅಬ್ಬರದ ನಡುವೆಯೂ ರಾಜ್ಯದಲ್ಲಿ ನಡೆದ ಉಪಚುನಾವಣೆ ಇದೀಗ ಶಿಕ್ಷಕರನ್ನು ಬಲಿ ಪಡೆದುಕೊಳ್ಳುತ್ತಿದೆ. ಬೈಲೆಕ್ಷನ್ ಕರ್ತವ್ಯಕ್ಕೆ ಹಾಜರಾಗಿದ್ದ 30ಕ್ಕೂ ಹೆಚ್ಚು ಶಿಕ್ಷಕರು ಕೊರೊನಾ ಮಹಾಮಾರಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.
ಉಪಚುನಾವಣಾ ಡ್ಯೂಟಿಗೆ ಹೋಗಿದ್ದ ಶಿಕ್ಷಕ-ಶಿಕ್ಷಕೀಯರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಶಿಕ್ಷಕರ ಕುಟುಂಬಗಳು ಬೀದಿ ಪಾಲಾಗಿ ಕಣ್ಣೀರಿಡುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆ ಮತ್ತು ನಗರಸಭೆ ಚುನಾವಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಹಲವು ಶಿಕ್ಷಕರಲ್ಲಿ ಕೊರೊನಾ ಸೋಂಕು ಹರಡಿದೆ. ಅವರಲ್ಲಿ 30ಕ್ಕೂ ಹೆಚ್ಚು ಶಿಕ್ಷಕರು ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಕೊರೊನಾ ಸಂಕಷ್ಟದಲ್ಲಿ ಜನರ ಪ್ರಾಣಕ್ಕೂ ಬೆಲೆ ಕೊಡದೆ ಕೈ ಚೆಲ್ಲಿ ಕುಳಿತಿರುವ ಸರ್ಕಾರದ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಕುಟುಂಬಸ್ಥರನ್ನು ಕಳೆದುಕೊಂಡು ಜೀವನಕ್ಕೆ ದಾರಿ ಕಾಣದೆ ಕಂಗಾಲಾಗಿರುವ ಜನರ ನೆರವಿಗೆ ಸರ್ಕಾರ ಮುಂದಾದರೂ ಮುಂದಾಗುತ್ತಾ? ಕಾದು ನೋಡಬೇಕಿದೆ.