ವೀರಪ್ಪನ್‌ ಹಾಕಿಸಿದ್ದ 03 ಗುಂಡುಗಳನ್ನು ತಲೆಯಲ್ಲಿ ಇಟ್ಟುಕೊಂಡೇ 29 ವರ್ಷ ಬದುಕಿದ್ದ ಪಿಎಸ್‌ಐ ನಿಧನ!

ಕಾಡುಗಳ್ಳ ವೀರಪ್ಪನ್‌ ಜೊತೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಹೋರಾಡಿದ್ದ, ಈ ವೇಳೆ ತಲೆಗೆ ಗುಂಡೇಟು ತಿಂದು, ತಲೆಯಲ್ಲಿ ಗುಂಡುಗಳನ್ನು ಇಟ್ಟಕೊಂಡೇ ಬದುಕುಳಿದಿದ್ದ ಸಬ್ ಇನ್ಸ್‌ಪೆಕ್ಟರ್‌ ಸಿದ್ದರಾಜ ನಾಯಕ್ ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

1992ರಲ್ಲಿ ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಪಿಎಸ್‌ಐಆಗಿ ಸಿದ್ದರಾಜ ನಾಯಕ್‌ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಎಸ್ಪಿ‌ ಹರಿಕೃಷ್ಣ ಹಾಗೂ ಎಸ್‌ಐ ಶಕೀಲ್ ಅಹಮದ್ ಅವರ ನೇತೃತ್ವದಲ್ಲಿ ವೀರಪ್ಪನ್ ಹಿಡಿಯುವ ಕಾರ್ಯಾಚರಣೆ ಭಾಗಿಯಾಗಿದ್ದರು. ಆಗ ಆಗಸ್ಟ್ 14ರಂದು ಮೀಣ್ಯಂನಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಸಿದ್ದರಾಜ ಗುಂಡೇಟು ತಿಂದಿದ್ದರು.

ಗುಂಡಿನ ಚಕಮಕಿಯಲ್ಲಿ ಏಳು ಗುಂಡುಗಳು ಅವರ ದೇಹ ಹೊಕ್ಕಿದ್ದವು. ನಂತರ, ಶಸ್ತ್ರಚಿಕಿತ್ಸೆ ಮಾಡಿ 04 ಗುಂಡುಗಳನ್ನು ಹೊರ ತೆಗೆಯಲಾಗಿತ್ತು. ಆದರೆ, 03 ಗುಂಡುಗಳು ಅವರ ತಲೆಗೆ ಹೊಕ್ಕಿದ್ದರಿಂದ ಅವುಗಳನ್ನು ತೆಗೆಯಲಾಗಿರಲ್ಲಿಲ್ಲ. 29 ವರ್ಷಗಳ ಕಾಲ ತಲೆಯಲ್ಲಿ ಗುಂಡುಗಳನ್ನು ಇಟ್ಟುಕೊಂಡೇ ಬದುಕಿದ್ದ ಸಿದ್ದರಾಜ ಅವರು ಇಂದು ಮೃತಪಟ್ಟಿದ್ದಾರೆ.

ಕಳೆದ ವರ್ಷ ಕರೊನಾ ಸಮಯದಲ್ಲಿ 75 ದಿನಗಳ ಕಾಲ ರಜಾ ತೆಗೆದುಕೊಳ್ಳದೆ ಕರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇನ್ನು 05 ದಿನಗಳಲ್ಲಿ ಸಿದ್ದರಾಜ ಅವರು ನಿವೃತ್ತಿ ಹೊಂದಬೇಕಿತ್ತು. ಇದಕ್ಕೂ ಮುನ್ನವೇ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ದಲಿತ ಯುವಕನಿಗೆ ಮೂತ್ರ ಕುಡಿಸಿ ಪೊಲೀಸರ ದೌರ್ಜನ್ಯ; ಪಿಎಸ್‌ಐ ಬಂಧನಕ್ಕೆ ಕಾಂಗ್ರೆಸ್‌ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights