ಬಿರುಗಾಳಿಗೆ ದೆಹಲಿ ಪ್ರತಿಭಟನಾನಿರತ ರೈತರ ಟೆಂಟ್ಗಳು ನಾಶ : ಮೂವರು ಅನ್ನದಾತರಿಗೆ ಗಾಯ!
ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ 6 ತಿಂಗಳು ಕಳೆದಿದೆ. ದೆಹಲಿ ಗಡಿ ಭಾಗದಲ್ಲಿ ಇರುವ ರೈತರಿಗೆ ಭಾರೀ ಮಳೆಯಿಂದಾಗಿ ಸಾಕಷ್ಟು ತೊಂದರೆಯಾಗಿದೆ. ಬಿರುಗಾಳಿ ಸಮೇತ ಮಳೆಗೆ ರೈತರ ಟೆಂಟ್ಗಳು ನಾಶವಾಗಿ ರಾತ್ರಿಯಿಡಿ ರೈತರು ಡಾಬಾ ಮತ್ತು ಇತರ ಸ್ಥಳಗಳಲ್ಲಿ ಆಶ್ರಯ ಪಡೆಯುವಂತಾಗಿದೆ.
ನಿನ್ನೆ ಸುರಿದ ಭಾರೀ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ರೈತರ ಗುಡಿಸಲುಗಳು ಹಾಗೂ ಟೆಂಟ್ಗಳು ಶೇಕಡಾ 90 ರಷ್ಟು ನಾಶವಾಗಿವೆ. ಟೆಂಟ್ ನಲ್ಲಿದ್ದ ಮೂವರು ರೈತರಿಗೆ ಗಾಯಗಳಾಗಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರಿ ಮಳೆಗೆ ಟೆಂಟ್ಗಳು, ಗುಡಿಸಲುಗಳು, ಚಾಪೆ, ಕುರ್ಚಿಗಳು, ಧ್ವನಿವರ್ಧಕಗಳು, ಫ್ಯಾನ್, ಕೂಲರ್ಗಳು, ಹುಕ್ಕಾಗಳು, ಪಾತ್ರೆಗಳು ಇತ್ಯಾದಿ ದೆಹಲಿ-ಜೈಪುರ ಹೆದ್ದಾರಿ ಮತ್ತು ಹತ್ತಿರದ ಹೊಲಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವುದು ಕಂಡುಬಂದಿದೆ.
“ಬಿರುಗಾಳಿ ಆರಂಭವಾದಾಗ ನಾವು ತಕ್ಷಣ ಹೊರಬಂದು ಡಾಬಾದಲ್ಲಿ ಆಶ್ರಯ ಪಡೆದಿದ್ದೇವೆ. ಆದರೆ, ನಮ್ಮ ಸಹಚರರೊಬ್ಬರು ಟೆಂಟ್ ಒಳಗೆ ಉಳಿದಿದ್ದರು. ಟೆಂಟ್ ಅವರ ಮೇಲೆ ಬಿದ್ದು ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರೈತರೆಲ್ಲಾ ರಾತ್ರಿ ಪೂರ್ತಿ ಹಾಸಿಗೆಗಳ ಮೇಲೆ ಕುಳಿತುಕೊಂಡು ಕಾಲ ಕಳೆದಿದ್ದಾರೆ ”ಎಂದು ಅಖಿಲ ಭಾರತ ಕಿಸಾನ್ ಸಭಾದ ಮುಖಂಡ ರಘುವೀರ್ ಸಿಂಗ್ ಹೇಳಿದ್ದಾರೆ.