ವರ್ಗಾವಣೆ ರದ್ದು ಮಾಡುವಂತೆ ಸಿಎಂ ಮನೆಗೆ ಸಿಂಧೂರಿ; ಸಾಧ್ಯವೇ ಇಲ್ಲ ಎಂದ ಯಡಿಯೂರಪ್ಪ
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ನಡುವಿನ ಸಂಘರ್ಷ ವರ್ಗಾವಣೆಯೊಂದಿಗೆ ಅಂತ್ಯವಾಗಿದೆ. ಇದೀಗ, ತಮ್ಮ ವರ್ಗಾವಣೆಯನ್ನು ರದ್ದು ಮಾಡುವಂತೆ ರೋಹಿಣಿ ಸಿಂಧೂರಿ ಸಿಎಂ ಅವರನ್ನು ಭೇಟಿ ಮಾಡಿದ್ದು, ವರ್ಗಾವಣೆ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿರುವುದಾಗಿ ತಿಳಿದು ಬಂದಿದೆ.
ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಮಾಡಿದ್ದರೆ, ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಆದರೆ, ಸರ್ಕಾರದ ಈ ನಿರ್ಧಾರ ರೋಹಿಣಿ ಸಿಂಧೂರಿ ಅವರು ಬೇಸರ ವ್ಯಕ್ತಪಡಿಸಿದ್ದು, ವರ್ಗಾವಣೆ ರದ್ದು ಕೋರಿ ಯಡಿಯೂರಪ್ಪನವರನ್ನು ಸಿಂಧೂರಿ ಭೇಟಿ ಮಾಡಿದ್ದರು.
ಆದರೆ, ಸಿಂಧೂರಿ ಅವರ ಮನವಿಯನ್ನು ನಿರಾಕರಿಸಿರುವ ಸಿಎಂ ಯಡಿಯೂರಪ್ಪ ವರ್ಗಾವಣೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಪರಿಹಾರ ಸಾಮಗ್ರಿ ಕಳವು ಆರೋಪ; ಸುವೆಂದು ಅಧಿಕಾರಿ ವಿರುದ್ಧ FIR; ಆಪ್ತನ ಬಂಧನ!
ಜಿಲ್ಲಾಧಿಕಾರಿ ಭೇಟಿ ಬಗ್ಗೆ ಮಾತನಾಡಿದ ಸಿಎಂ ಬಿಎಸ್ವೈ, ರೋಹಿಣಿ ಸಿಂಧೂರಿ ಬೆಳಗ್ಗೆ ಬಂದಿದ್ದರು. ಅವರನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ರದ್ದು ಮಾಡಲು ಮನವಿ ಮಾಡಿದರು. ಆದರೆ ವರ್ಗಾವಣೆ ರದ್ದು ಮಾಡಲ್ಲ. ಇದನ್ನು ನಾನು ಸ್ಪಷ್ಟಪಡಿಸಿರುವೆ ಎಂದಿದ್ದಾರೆ.
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಾದಿ ಗೌತಮ್ ಅವರನ್ನು ನೇಮಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಡಳಿತ ವ್ಯವಸ್ಥಾಪಕ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಶಿಲ್ಪಾ ನಾಗ್ ಅವರು ಸಿಎಸ್ಆರ್ ಅನುದಾನ ಬಳಕೆಯ ಲೆಕ್ಕ ನೀಡಿಲ್ಲ, ಕೊರೋನಾ ಕೇಂದ್ರಗಳನ್ನು ಸ್ಥಾಪಿಸಲು ಕೆಲಸ ಮಾಡಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ಅನಗತ್ಯ ವಿವಾದ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದ್ದರು.
ಈ ಬಳಿಕ ರೋಹಿಣಿ ಸಿಂಧೂರಿ ಅವರು ಕರ್ತವ್ಯ ನಿರ್ವಹಣೆಯಲ್ಲಿ ತಮಗೆ ಕಿರುಕುಳ ನೀಡುತ್ತಿದ್ದಾರೆ, ಅವರು ನೀಡುತ್ತಿರುವ ಕಿರುಕುಳ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿ ಶಿಲ್ಪಾ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: ರೋಹಿಣಿ – ಶಿಲ್ಪನಾಗ್ ಕಚ್ಚಾಟ ವರ್ಗಾವಣೆಯಲ್ಲಿ ಅಂತ್ಯ: ಕೆಲಸವಿಲ್ಲದ ಖಾತೆಗೆ ಸಿಂಧೂರಿ ವರ್ಗಾವಣೆ!