ನನ್ನ ವರ್ಗಾವಣೆಗೆ ಭೂ ಮಾಫಿಯಾ ಕಾರಣ; ದಾಖಲೆಗಳನ್ನು ಬಹಿರಂಗಪಡಿಸಿದ ಸಿಂಧೂರಿ!
ತಮ್ಮ ವರ್ಗಾವಣೆಯ ಹಿಂದೆ ಭೂಮಾಫಿಯಾದ ಕೈವಾಡವಿದೆ ಎಂದು ಆರೋಪಿಸಿದ್ದ ರೋಹಿಣಿ ಸಿಂಧೂರಿ ಅವರು, ಇದೀಗ, ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಮೈಸೂರು ನಗರದಲ್ಲಿ ಅಕ್ರಮವಾಗಿ ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಪ್ರಕರಣಗಳ ವಿರುದ್ದ ಕ್ರಮ ತಾವು ಕ್ರಮ ಕೈಗೊಂಡಿದ್ದಾಗಿ ಹಾಗೂ ಭೂ ಅಕ್ರಮಗಳಿಗೆ ಕಡಿವಾಣ ಹಾಕಿ ಅವುಗಳ ಆದೇಶ ರದ್ದುಪಡಿಸಿ ಭೂಮಿಯನ್ನು ವಶಪಡಿಸಿಕೊಳ್ಳಲು ಸೂಚಿಸಿದ್ದರ ಬಗ್ಗೆ ಸಿಂಧೂರಿ ದಾಖಲೆಗಳನ್ನಿಟ್ಟು ವಿವರಿಸಿದ್ದಾರೆ.
ಪ್ರಮುಖವಾಗಿ ಮೈಸೂರಿನ ಲಿಂಗಾಬುದಿ ಕೆರೆ ಅಂಗಳದಲ್ಲಿ 2 ಎಕರೆ ಜಾಗದಲ್ಲಿ ರೆಸಾರ್ಟ್ ಆರಂಭಿಸಲು ಉದ್ದೇಶಿಸಿದ್ದದ್ದು, ಕಸಬಾ ಹೋಬಳಿ ಲಿಂಗಾಬುದಿ ಗ್ರಾಮದಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನನ್ನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯನ್ನು ತಪ್ಪು ಮಾಹಿತಿ ನೀಡಿದ ಕಾರಣ ಭೂ ಪರಿವರ್ತನೆ ರದ್ದು ಪಡಿಸಿರುವುದು ಹಾಗೂ ದಟ್ಟಗಳ್ಳಿ ಗ್ರಾಮದ ಸರ್ವೆ ನಂ 123 ರ ಗೋಮಾಳ ಜಮೀನಿಗೆ ಸಂಬಂಧಿಸಿದ ದೂರಿನ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗಿದೆ.
ಭೂ ಚಕ್ರದ ವಿವರ:
ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಲಿಂಗಾಬುದಿ ಗ್ರಾಮದ ಸ.ನಂ 124/2 ರಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನನ್ನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಗೊಳಿಸಿ ಹೊರಡಿಸಿದ ಅಧಿಕೃತ ಜ್ಞಾಪನ ಸಂಖ್ಯೆ ಎ.ಎಲ್.ಎನ್(1)ಸಿಆರ್ 189/2012-13 ದಿನಾಂಕ: 28-11-2016 ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ಆದೇಶಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಮೇಲ್ಕಂಡ ಜಮೀನಿನ ಸಂಬಂಧ ತಪ್ಪಾಗಿ ವರದಿ ಸಲ್ಲಿಸಲು ಕಾರಣಕರ್ತರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮಕೈಗೊಂಡು ಪಾಲನಾ ವರದಿಯನ್ನು ಸಲ್ಲಿಸಲು ನಿರ್ದೇಶಿಸಿದ್ದಾರೆ .( ಈ ಆದೇಶವನ್ನು ದಿನಾಂಕ:04-06-2021 ರಂದು ಹೊರಡಿಸಲಾಗಿದೆ)
ಆರ್.ಟಿ.ಐ ಕಾರ್ಯಕರ್ತ , ಎನ್.ಗಂಗರಾಜು ಅವರ ಉಲ್ಲೇಖದ ಮನವಿಯಲ್ಲಿ ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ದಟ್ಟಗಳ್ಳಿ ಗ್ರಾಮದ ಸ.ನಂ 123 ರ 5.02 ಎಕರೆ ವಿಸ್ತೀರ್ಣದ ಜಮೀನನ್ನು ಹರಾಜಿನ ಮುಖಾಂತರ ಪಡೆದಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ತಮ್ಮ ಪರವಾಗಿ ಆದೇಶಗಳನ್ನು ಪಡೆದಿರುವುದರಿಂದ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಕೋರಿರುತ್ತಾರೆ,
ಈ ಸಂಬಂಧ ಹಿಂದಿನ ಜಿಲ್ಲಾಧಿಕಾರಿಗಳು ಪ್ರಕರಣ ಸಂಖ್ಯೆ ಆರ್.ಎ 24/2008-09 ರಲ್ಲಿ ದಿನಾಂಕ 07-09-2010 ರಂದು ಆದೇಶ ಹೊರಡಿಸುವ ಪೂರ್ವದಲ್ಲಿ ಪ್ರಕರಣ ದಾಖಲಿಸಿದ ರಿವಿಜನ್ ಅರ್ಜಿದಾರರ ಪರವಾಗಿ ಸಲ್ಲಿಸಲಾದ ಸೇಲ್ ಸರ್ಟಿಫಿಕೇಟ್ ನ ಜೆರಾಕ್ಸ್ ಪ್ರತಿಯನ್ನು ಪರಿಗಣಿಸಿ ಆದೇಶ ಹೊರಡಿಸಿರುವುದು ಕಂಡುಬಂದಿರುತ್ತದೆ. ದೂರುದಾರರು ತಮ್ಮ ದೂರಿನಲ್ಲಿ ಹರಾಜಿನ ಮುಖಾಂತರ ಪಡೆದಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡಿರುವುದಾಗಿ ದೂರು ಸಲ್ಲಿಸಿರುವುದರಿಂದ ಈ ಅಂಶವನ್ನು ಪರಿಶೀಲಿಸುವ ಉದ್ದೇಶದಿಂದ ಮೇಲ್ಕಂಡ ಜಮೀನನ್ನು ವಾಸ್ತವವಾಗಿ ಹರಾಜಿಗೆ ಒಳಪಡಿಸಲಾಗಿದೆಯೇ, ಹರಾಜಿಗೆ ಒಳಪಟ್ಟಿರುವುದಾಗಿ ತಿಳಿಸಿದ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಇತರ ಕಡತಗಳಲ್ಲಿ ಮಾಡಿರುವ ಸಹಿಗೂ ಹಾಗೂ ರಿವಿಜನ್ ಅರ್ಜಿದಾರರು ಸಲ್ಲಿಸಿರುವ ಸೇಲ್ ಸರ್ಟಿಫಿಕೇಟ್ ನಲ್ಲಿನ ಸಹಿಗಳು ತಾಳ ಹೊಂದುತ್ತವೆಯೇ ಎಂಬುವುದರ ಬಗ್ಗೆ ಖುದ್ದಾಗಿ ಉಪನೊಂದಣಾಧಿಕಾರಿಗಳ ಕಛೇರಿ ಮತ್ತು ತಾಲ್ಲೂಕು ಕಛೇರಿ ಹಾಗೂ ಇತರ ಕಛೇರಿಗಳಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿ ಪೂರಕವಾದ ದಾಖಲೆಗಳೊಂದಿಗೆ ತಮ್ಮ ಸ್ಪಷ್ಟವಾದ ಅಭಿಪ್ರಾಯವನ್ನು ಒಂದು ವಾರದೊಳಗೆ ಸಲ್ಲಿಸಲು ಮುಡಾ ಆಯುಕ್ತರಿಗೆ , ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ.
ಮೈಸೂರಿನ ಕೆಲ ಪ್ರಭಾವಿ ವ್ಯಕ್ತಿಗಳು ಮೈಸೂರಿನ ಲಿಂಗಾಬುಧಿ ಕೆರೆಯ ಅಂಗಳದಲ್ಲಿ 2 ಎಕರೆ ಜಾಗದಲ್ಲಿ , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾತಿ ಮಾಡಿಸಿಕೊಂಡು ರಸಾರ್ಟ್ ನಡೆಸಲು ಪ್ರಯತ್ನ ನಡೆಸುತ್ತಿರುವುದಾಗಿ ನೀಡಿರುವ ದೂರಿನನ್ವಯ, ಲಿಂಗಾಬುದಿ ಕರೆಯ ಅಂಗಳದಲ್ಲಿ 2-00 ಎಕರೆ ಜಾಗವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾತಿ ಮಾಡಿಕೊಡಲು ಪ್ರಾಧಿಕಾರಕ್ಕೆ ಯಾವುದೇ ಅಧಿಕಾರವಿರುವುದಿಲ್ಲ ಹಾಗೂ ಅಂತಹ ಯಾವುದೇ ಮಂಜೂರಾತಿಯನ್ನು ಮಾಡಿರುವ ಬಗ್ಗೆ ಕಛೇರಿಯಲ್ಲಿ ಯಾವುದೇ ದಾಖಲೆಗಳು ಲಭ್ಯವಿರುವುದಿಲ್ಲವೆಂದು ಹಾಗೂ ಸದರಿ ಕೆರೆಗೆ ಹೊಂದಿಕೊಂಡಂತಿರುವ ಸರ್ವೆ ನ 10/2 ಮೂಲತಃ ಹಿಡುವಳಿ ಭೂಮಿಯಾಗಿದ್ದು, ಸರ್ಕಾರದ ಆದೇಶ ಸಂಖ್ಯೆ ದಿನಾಂಕ: 12/11/2003 ರಂತ ಉದ್ಯಾನವನ ಮತ್ತು ಬಯಲು ಪ್ರದೇಶದಿಂದ ವಾಣಿಜ್ಯ ವಲಯಕ್ಕೆ ಭೂ ಉಪಯೋಗ ಬದಲಾವಣೆ ಆದೇಶದನ್ವಯ ಜಿಲ್ಲಾಧಿಕಾರಿಗಳಿಂದ ದಿನಾಂಕ: 11/10/2007 ರಂದು ಭೂ ಪರಿವರ್ತನೆಗೊಂಡಿದ್ದು, ಕೆರೆಗೆ ಹೊಂದಿಕೊಂಡಿರುವ ಸದರಿ ಸರ್ವೆ ನಂಬರ್ ನ ಭೂಮಿಯ ಭಾಗದಲ್ಲಿ ಸುಮಾರು ಶೇ 46.29 ರಷ್ಟು ಭೂಮಿಯನ್ನು ಬಫರ್ ಮತ್ತು ಉದ್ಯಾನವನವೆಂದು ಕಾಯ್ದಿರಿಸಿ, ಉಳಿದ ಶೇ 48.70 ರಷ್ಟು ಅಂದರೆ 7601.45 ಚ.ಮೀ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪ್ರಾಧಿಕಾರದಿಂದ ದಿನಾಂಕ: 14/12/2016 ರ ಸಭೆಯ ವಿಷಯ ಸಂಖ್ಯೆ 42 ರಲ್ಲಿ ಅನುಮೋದನೆಯಾಗಿರುವಂತೆ ಏಕ ನಿವೇಶನ – ವಾಣಿಜ್ಯ ಬಡಾವಣೆ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಲಾಗಿರುತ್ತದೆ.
ಸದರಿ ಉಲ್ಲೇಖ (3) ರ ಸರ್ಕಾರದ ಸುತ್ತೋಲೆಯಲ್ಲಿ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಜಾರಿಗೆ ತಂದಿರುವ Wetlands (Conservation and Management) Rules, 2010 ರ ವ್ಯಾಪ್ತಿಗೆ “ಕೆರೆಗಳು ಬರುತ್ತಿದ್ದು, ಕರೆ ಪ್ರದೇಶದಲ್ಲಿ ಅನ್ಯ ಚಟುವಟಿಕೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ( National Green Tribunal ) ವು ಸಹ ದಿನಾಂಕ: 04/05/2016 ರ ಆದೇಶದಲ್ಲಿ ಕೆರೆಗಳ ಅಂಚಿನಿಂದ ಕೆರೆ ಸುತ್ತಲು 75 ಮೀ ವ್ಯಾಪ್ತಿಯವರೆವಿಗೂ ಯಾವುದೇ ಉದ್ದೇಶಕ್ಕೂ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳದಿರಲು ನಿರ್ದೇಶಿಸಿದೆ ಹಾಗೂ ಹಾಲಿ ಇರುವ ನಿರ್ಮಿತಿಗಳನ್ನು ತೆರವುಗೊಳಿಸಲು ಸಹ ಆದೇಶಿಸಿರುವುದಾಗಿ ತಿಳಿಸಿ ಸುತ್ತೋಲೆ ಹೊರಡಿಸಲಾಗಿರುತ್ತದೆ.
ಈ ಪ್ರಕರಣದಲ್ಲಿ ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಿರುವಂತೆ ಕೆರೆಯ ಅಂಚಿನಿಂದ ಕೆರೆ ಸುತ್ತಲೂ 75 ಮೀ ವ್ಯಾಪ್ತಿಯವರೆವಿಗೂ ಯಾವುದೇ ಉದ್ದೇಕ್ಕೂ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳದಿರಲು ಹಾಗೂ ಹಾಲಿ ಇರುವ ನಿರ್ಮಿತಿಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ದಿನಾಂಕ: 04/05/2016 ರ ಆದೇಶದಲ್ಲಿ ನೀಡಿರುವ ನಿರ್ದೇಶನದ ಅನುಸಾರ ಮೇಲ್ಕಂಡ ಕರ ಸೇರಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಕೆರೆಗಳ ವ್ಯಾಪ್ತಿಯಲ್ಲಿ 75 ಮೀ ಪ್ರದೇಶದಲ್ಲಿ ವಸತಿ ಮತ್ತು ಇನ್ನಿತರೆ ಉದ್ದೇಶಗಳಿಗೆ ಪ್ರಾಧಿಕಾರದಿಂದ ನಕ್ಷೆ ಮತ್ತು ಇತರೆ ಅನುಮೋದನೆಗಳನ್ನು ನೀಡಿದ್ದಲ್ಲಿ ಕೂಡಲೇ ಅವುಗಳನ್ನು ರದ್ದುಪಡಿಸಲು ಹಾಗೂ ಈ ಕಛೇರಿಯಿಂದ ಅಂತಹ ಜಮೀನುಗಳಿಗೆ ಅನ್ಯಕ್ರಾಂತಕ್ಕೆ ಆದೇಶ ನೀಡಿದ್ದಲ್ಲಿ ಅಂತಹ ಅನ್ಯಕ್ರಾಂತ “ದೇಶಗಳನ್ನು ಹಿಂಪಡೆಯಲು ಅಥವಾ ರದ್ದುಪಡಿಸಲು ಅಗತ್ಯ ಕ್ರಮವಹಿಸಲು ಪ್ರಸ್ತಾವನೆಯನ್ನು ಕಛೇರಿಗೆ ಸಲ್ಲಿಸಲು ರೋಹಿಣಿ ಸಿಂಧೂರಿ ಸೂಚಿಸಿದ್ದಾರೆ.
ಆರ್.ಟಿ.ಐ ಕಾರ್ಯಕರ್ತ ಎನ್.ಗಂಗರಾಜು, ಸಲ್ಲಿಸಿದ ದೂರು ಮನವಿಯಲ್ಲಿ ಮೈಸೂರು ತಾಲ್ಲೂಕು, ಜಯಪುರ ಹೋಬಳಿ, ಕೇರ್ಗಳ್ಳಿ ಗ್ರಾಮದ ಸ.ನಂ 115 ರ ಸರ್ಕಾರಿ ಗೋಮಾಳ ಜಮೀನು ಆಕಾರ ಬಂದ್ ನಂತೆ 129.22 ಎಕರೆ ವಿಸ್ತೀರ್ಣವಿದ್ದು, ಚಾಲ್ತಿ ಆರ್.ಟಿ.ಸಿಯಂತೆ 199.00 ಎಕರೆ ವಿಸ್ತೀರ್ಣ ಇರುತ್ತದೆ. ಅಂದರೆ ಆಕಾರ್ ಬಂದ್ ವಿಸ್ತೀರ್ಣಕ್ಕಿಂತ ಆರ್.ಟಿ.ಸಿ ವಿಸ್ತೀರ್ಣವು 61.18 ಎಕರೆ ವಿಸ್ತೀರ್ಣ ಇರುತ್ತದೆ. ಸದರಿ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿವು ಭೂಸ್ವಾಧೀನ ಪ್ರಕ್ರಿಯೆ ನಡೆಸಿದ್ದು, ಕೆಲವು ಪ್ರಕರಣಗಳಲ್ಲಿ ಡೀನೋಟಿಫಿಕೇಷನ್ ಮಾಡಲಾಗಿದೆ. ಅಲ್ಲದೆ ಕೆಲವು ವ್ಯಕ್ತಿಗಳು ಒಂದೇ ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸೃಷ್ಟಿಸಿಕೊಂಡು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರವನ್ನು ಸಹ ಪಡೆದಿರುತ್ತಾರೆ. ಆದುದರಿಂದ ಭೂ ಅಕ್ರಮದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮಕೈಗೊಂಡು ಹೆಚ್ಚುವರಿಯಾಗಿರುವ 61.18 ಎಕರೆ ವಿಸ್ತೀರ್ಣವನ್ನು ಆರ್.ಟಿ.ಸಿ ಯಿಂದ ರದ್ದುಪಡಿಸಲು ಕೋರಿರುತ್ತಾರೆ.
ಈ ದೂರು ಮನವಿಯ ಬಗ್ಗೆ ಕ್ರಮವಹಿಸಲು ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಅದರಂತೆ ಉಪವಿಭಾಗಾಧಿಕಾರಿ, ಮೈಸೂರು, ಭೂ ದಾಖಲೆಗಳ ಉಪನಿರ್ದೇಶಕರು, ತಹಶೀಲ್ದಾರ್, ಮೈಸೂರು ತಾಲ್ಲೂಕು ಹಾಗೂ ಮೈಸೂರು ನಗರ ಮಾಪನ ಯೋಜನಾಧಿಕಾರಿಗಳ ಕಛೇರಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರು ಕೇರ್ಗಳ್ಳಿ ಗ್ರಾಮದ ಸ.ನಂ 115ರ ಜಮೀನಿಗೆ ಸಂಬಂಧಿಸಿದಂತೆ ಮೂಲ ಮಂಜೂರಾತಿ ಕಡತ ಇತ್ಯಾಧಿಗಳನ್ನು ಖಚಿತ ಪಡಿಸಿಕೊಂಡು ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಜರುಗಿಸುವುದು.
ತಹಶೀಲ್ದಾರ್, ಮೈಸೂರು ಹಾಗೂ ಉಪವಿಭಾಗಾಧಿಕಾರಿಗಳು, ಮೈಸೂರುರವರು ದೂರಿನಲ್ಲಿ ತಿಳಿಸಿರುವ ರೀತ್ಯಾ, ಮೇಲ್ಕಂಡ ಜಮೀನಿನಲ್ಲಿ 61.01 ಎಕರೆ ವಿಸ್ತೀರ್ಣವು ಆಕಾರ್ ಬಂದ್ ವಿಸ್ತೀರ್ಣಕ್ಕಿಂತ ಹೆಚ್ಚುವರಿಯಾಗಿ ಆರ್.ಟಿ.ಸಿಯಲ್ಲಿ ನಮೂದಾಗಿದೆಯೇ ಮತ್ತು ಸದರಿ ನಮೂದುಗಳು ಮ್ಯುಟೇಷನ್ ನಡವಳಿಕೆಗಳ ಅನ್ವಯ ಆಗಿದೆಯೇ ಎಂಬುದನ್ನು ದಾಖಲಾತಿಗಳನ್ನು ಪರಿಶೀಲಿಸಿಕೊಂಡು ಕ್ರಮಬದ್ಧವಾದ ರೀತಿಯಲ್ಲಿ ಹಕ್ಕು ಬದಲಾವಣೆ ಆಗಿಲ್ಲದೇ ಆರ್.ಟಿ.ಸಿಯಲ್ಲಿ ಖಾತದಾರರ ಹೆಸರು ನಮೂದಾಗಿದ್ದಲ್ಲಿ ನಿಯಮಾನುಸಾರ ಖಾತದಾರರ ಹೆಸರು ರದ್ದುಪಡಿಸಲು ಕ್ರಮ ಕೈಗೊಳ್ಳುವುದು.
ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರುರವರು ಮೇಲ್ಕಂಡ ಕೇರ್ಗಳ್ಳಿ ಗ್ರಾಮದ ಸ.ನಂ 15 ರ ಜಮೀನಿನ ಸಂಬಂಧ ಕೂಡಲೇ ಜೆ.ಎಂ.ಸಿ ಯಾಗಿಲ್ಲದಿದ್ದಲ್ಲಿ ಕೂಡಲೇ ಜೆ.ಎಂ.ಸಿ ಕಾರ್ಯ ಕೈಗೊಳ್ಳುವುದು ಹಾಗೂ ಒಂದೇ ಜಮೀನಿಗೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚು ಪರಿಹಾರವನ್ನು ಅಂದರೇ ದ್ವಿಗುಣ ಪರಿಹಾರವನ್ನು ನೀಡಲಾಗಿರುವುದನ್ನು ಹಾಗೂ ಜಮೀನಿನ ಭೌತಿಕ ವಿಸ್ತೀರ್ಣಕ್ಕಿಂತ ಪರಿಹಾರ ಪಾವತಿಸಿದ ವಿಸ್ತೀರ್ಣ ಹೆಚ್ಚುವರಿಯಾಗಿದಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮಗಳನ್ನು ತೆಗೆದುಕೊಳ್ಳುವುದು ಎಂದು ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ.
ಇದನ್ನೂ ಓದಿ: ವರ್ಗಾವಣೆ ರದ್ದು ಮಾಡುವಂತೆ ಸಿಎಂ ಮನೆಗೆ ಸಿಂಧೂರಿ; ಸಾಧ್ಯವೇ ಇಲ್ಲ ಎಂದ ಯಡಿಯೂರಪ್ಪ