ಮುಂದಿನ ಚುನಾವಣೆ ವೇಳೆಗೆ ಪಂಜಾಬ್ ಸಿಎಂ ಮತ್ತು ಮೋದಿ ನಡುವೆ ಗಟ್ಟಿ ಬಾಂಧವ್ಯ ಬೆಳೆಯಲಿದೆ: ಮನೀಶ್ ಸಿಸೋಡಿಯಾ
ಮುಂದಿನ ವರ್ಷ (2022) ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆ ವೇಳೆಗೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಮತ್ತು ಪ್ರಧಾನಿ ಮೋದಿಯ ನಡುವೆ ಗಟ್ಟಿ ಬಾಂಧವ್ಯ ಬೆಳೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
2019-20ನೇ ಸಾಲಿನಲ್ಲಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟದ ವಿಷಯದಲ್ಲಿ ಉತ್ತಮ ಕಾರ್ಯಕ್ಷಮತೆ ಶ್ರೇಣಿ ಸೂಚ್ಯಂಕದಲ್ಲಿ ಕೇಂದ್ರ ಸರ್ಕಾರ ಪಂಜಾಬ್ಗೆ ನಂಬರ್ 1ಸ್ಥಾನವನ್ನು ನೀಡಿದೆ.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಸೋಡಿಯಾ, ಪಂಜಾಬ್ನಲ್ಲಿ ಒಂದೇ ವರ್ಷ 500 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಅಂತಹ ರಾಜ್ಯಕ್ಕೆ ನಂಬರ್ 01 ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಸೂಚ್ಯಂಕವನ್ನು ನೋಡಿದರೆ ಪಂಜಾಬ್ ನಲ್ಲಿ ಸರ್ಕಾರಿ ಶಾಲೆಗಳು ಉತ್ತಮವಾಗಿವೆ, ದೆಹಲಿಯಲ್ಲಿ ಉತ್ತಮವಾಗಿಲ್ಲ ಎಂದು ತೋರಿಸುತ್ತದೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮೇಲೆ ದಯೆತೋರಿಸಿ ಪ್ರಧಾನಿ ಮೋದಿಯವರು ನೀಡಿದ ಸೂಚ್ಯಂಕದಂತೆ ಕಂಡುಬರುತ್ತಿದೆ. ಹಿಂದಿನ ಚುನಾವಣೆಯಂತೆ ಈ ಬಾರಿ ಕೂಡ ಇಬ್ಬರ ನಡುವೆ ಗಾಢ ಬಾಂಧವ್ಯ ಬೆಳೆದಂತೆ ಕಂಡುಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಪಂಜಾಬ್ ಸರ್ಕಾರದ ಅಸಮರ್ಪಕ ಸಾಧನೆಯ ಬಗ್ಗೆ ಪ್ರಶ್ನೆ, ಸಂದೇಹಗಳು ಮೂಡುತ್ತಿರುವ ಸಂದರ್ಭದಲ್ಲಿ ಈ ವರದಿ ನೀಡಿರುವುದು ಎಲ್ಲವನ್ನೂ ತಿಳಿಸುತ್ತದೆ, ಮುಂಬರುವ ಪಂಜಾಬ್ ಚುನಾವಣೆಯ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಿಯವರ ಮಧ್ಯೆ ಏರ್ಪಟ್ಟಿರುವ ಬಾಂಧವ್ಯದ ಸಂಕೇತವಿದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಮೋದಿ ನೇತೃತ್ವದ ಬಿಜೆಪಿ ಪಕ್ಷವಿದೆ.
ಇದನ್ನೂ ಓದಿ: ಭಾರತೀಯ ಸರ್ಕಾರದ ಕೆಲವು ಕ್ರಮಗಳು ಅದರ ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಆತಂಕಗಳನ್ನು ಹುಟ್ಟು ಹಾಕಿದೆ: ಅಮೆರಿಕದ ಉನ್ನತ ಅಧಿಕಾರಿ