ಕೊರೊನಾ 3ನೇ ಅಲೆಗೆ ಸಿದ್ದತೆ: ವೈದ್ಯರು ಮತ್ತು ದಾದಿಯರಿಗೆ ಸಹಾಯ ಮಾಡಲು 5,000 ಯುವಜನರಿಗೆ ತರಬೇತಿ!
ಕೊರೊನಾ 3ನೇ ಅಲೆಯನ್ನು ಎದುರಿಸಲು ದೆಹಲಿ ಸರ್ಕಾರ ಈಗಲೇ ಸಿದ್ದತೆಗೆ ಇಳಿದಿದೆ. ಇದರ ಭಾಗವಾಗಿ ವೈದ್ಯರು ಮತ್ತು ದಾದಿಯರಿಗೆ ಸಹಾಯ ಮಾಡಲು 5,000 ಯುವಜನರಿಗೆ ವೈದ್ಯಕೀಯ ತರಬೇತಿ ನೀಡಿ ಅಣಿಗೊಳಿಸಲು ಮುಂದಾಗಿದೆ. ಯುವಜನರನ್ನು 500 ಅಭ್ಯರ್ಥಿಗಳ ಬ್ಯಾಚ್ಗಳಾಗಿ ವಿಂಗಡಿಸಿ ಜೂನ್ 28ರಿಂದ ತರಬೇತಿಯನ್ನು ಪ್ರಾರಂಭಿಸುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಆರೋಗ್ಯ ಸಹಾಯಕರು ಅಥವಾ ಸಮುದಾಯ ಶುಶ್ರೂಷಾ ಸಹಾಯಕರನ್ನಾಗಿ ಕೆಲಸ ಮಾಡಲು ಯುವಜನರಿಗೆ ಎರಡು ವಾರಗಳ ಕಾಲ ನರ್ಸಿಂಗ್ ಮತ್ತು ಜೀವ ರಕ್ಷಣೆಯ ಮೂಲ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
“ಈ ಕ್ರಮವು ಕೋವಿಡ್ನ ಮೂರನೇ ಅಲೆಯನ್ನು ಎದುರಿಸುವುದಕ್ಕಾಗಿ ನಮ್ಮ ಸಿದ್ಧತೆಯನ್ನು ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಈಗಾಗಲೇ ಮೂರನೇ ಅಲೆ ಆರಂಭವಾಗಿರುವ ಇಂಗ್ಲೆಂಡ್ ನಂತಹ ದೇಶಗಳ ಅನುಭವಗಳಿಂದ ಕಲಿಯುವುದು ಮತ್ತು ಸಂಪೂರ್ಣವಾಗಿ ಸಿದ್ಧವಾಗುವುದು ನಮ್ಮ ಉದ್ದೇಶ” ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
3ನೇ ಅಲೆಯಲ್ಲಿ ಕೆಲಸ ಮಾಡುವ ಯುವಜನರಿಗೆ ಮೂಲಭೂತ ಶುಶ್ರೂಷೆ, ಅರೆವೈದ್ಯಕೀಯ, ಜೀವ ಉಳಿಸುವಿಕೆ ಪ್ರಥಮ ಚಿಕಿತ್ಸಾ, ಮನೆ ಆರೈಕೆ, ಮಾದರಿ ಸಂಗ್ರಹ, ಆಮ್ಲಜನಕ ಮತ್ತು ಸಿಲಿಂಡರ್ಗಳ ಕಾರ್ಯಾಚರಣೆ ಮತ್ತು ಇತರ ವೈದ್ಯಕೀಯ ಕಾರ್ಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.
ತರಬೇತಿಗೆ ಅರ್ಜಿ ಸಲ್ಲಿಸುವವರು 12ನೇ ತರಗತಿಯನ್ನು ಪಾಸು ಮಾಡಿರಬೇಕು ಮತ್ತು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು. ಅರ್ಜಿಗಳನ್ನು ಜೂನ್ 17ರಿಂದ ಆನ್ಲೈನ್ನಲ್ಲಿ ಸ್ವೀಕರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂಭವನೀಯ ಮೂರನೇ ಅಲೆಯಲ್ಲಿ ಆರೋಗ್ಯ ಸಹಾಯಕರು ತಮ್ಮ ಸೇವೆಗಳ ಅಗತ್ಯವಿದ್ದಾಗಲೆಲ್ಲಾ ಜೊತೆಗೂಡುತ್ತಾರೆ. ಅವರು ಕೆಲಸ ಮಾಡುವ ದಿನಗಳವರೆಗೆ ವೇತನ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಕೊರೊನಾ ಮೊದಲ ಮತ್ತು ಎರಡನೆಯ ಅಲೆಯಲ್ಲಿ ನಾವು ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ಅನುಭವಿಸಿದ್ದೇವೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂಲ ತರಬೇತಿಯನ್ನು ಇಂದ್ರಪ್ರಸ್ಥ ವಿಶ್ವವಿದ್ಯಾಲಯ (ಐಪಿ) ಮತ್ತು ದೆಹಲಿಯ ಒಂಬತ್ತು ವೈದ್ಯಕೀಯ ಸಂಸ್ಥೆಗಳು ನೀಡಲಿವೆ ಎಂದು ತಿಳಿಸಿದ್ದಾರೆ.
ಕೊರೊನಾ 3ನೇ ಅಲೆಯನ್ನು ಎದುರಿಸಲು ಆಮ್ಲಜನಕ ಸ್ಥಾವರಗಳು, ಆಮ್ಲಜನಕ ಸಾಂದ್ರಕಗಳು, ಆಮ್ಲಜನಕ ಸಿಲಿಂಡರ್ಗಳು ಮತ್ತು ಆಮ್ಲಜನಕ ಸಂಗ್ರಹ ಟ್ಯಾಂಕ್ಗಳನ್ನು ಹೊಂದಿಸಿಕೊಳ್ಳಲು ದೆಹಲಿ ಸರ್ಕಾರ ಈಗಾಗಲೇ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ವೇಳೆ ಬೆಂಗಳೂರಿನಲ್ಲಿ ವಸೂಲಾಗಿದ್ದು ಬರೋಬ್ಬರಿ 4.54 ಕೋಟಿ ರೂ. ದಂಡ!