ಕನ್ನಂಬಾಡಿ ಕಾಳಗ : ಕುಮಾರಸ್ವಾಮಿ ವಿರುದ್ಧ ಸುಮಲತಾ ಮತ್ತೆ ಟ್ವೀಟಾಸ್ತ್ರ!
ಮಂಡ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ಸಂಸದೆ ಸುಮಲತಾ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮತ್ತೆ ಟ್ವೀಟ್ ಬ್ರಹ್ಮಾಸ್ತ್ರ ಸಾರಿದ್ದಾರೆ. ಟ್ವೀಟ್ ಮೂಲಕ ದಳಪತಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ.
ಕೆಆರ್ಎಸ್ ಡ್ಯಾಂ ವಿಚಾರವಾಗಿ ಆರಂಭಗೊಂಡ ಕುಮಾರಸ್ವಾಮಿ ಹಾಗೂ ಸುಮಲತಾ ವಾಕ್ಸಮರ ಅಕ್ರಮಗಣಿಗಾರಿಕೆವರೆಗೆ ಬಂದು ತಲುಪಿದೆ. ಸುಮಲತಾ ವಿರುದ್ಧ ಒಮ್ಮೆ ಗುಡುಗಿದ ಜೆಡಿಎಸ್ ಶಾಸಕರು ಮೌನಕ್ಕೆ ಶರಣಾಗಿದ್ದಾರೆ. ದಳಪತಿಗಳು ಸುಮ್ಮನಾದರು ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತ್ರ ಹೆಚ್ ಡಿಕೆ ಪರ ಬ್ಯಾಡಿಂಗ್ ಮಾಡ್ತಾಯಿದ್ದಾರೆ. ಹೀಗಾಗಿ ಇಂದು ಮತ್ತೆ ಸುಮಲತಾ ದಳಪತಿಗಳ ವಿರುದ್ಧ ಟ್ವೀಟ್ ಮಾಡಿದ್ದಾರೆ.
“ಕೆಸರು ಹಚ್ಚಲು ಪ್ರಯತ್ನ ಮಾಡಿದರೆ ಮೊದಲು ನಮ್ಮ ಕೈ ಕೆಸರು ಆಗುತ್ತದೆ. ಗಂಧ ಹಚ್ಚಲು ಪ್ರಯತ್ನಿಸಿದರೆ ನಮ್ಮ ಕೈ ಗಂಧ ಆಗುತ್ತದೆ” ಎಂದು ಟಾಂಗ್ ಕೊಟ್ಟಿದ್ದಾರೆ.
ನಿನ್ನೆ ಕುಮಾರಸ್ವಾಮಿ ಕನ್ನಂಬಾಡಿ ಸಮರವನ್ನು ಇಲ್ಲಿಗೆ ಕೈಬಿಡೋಣ. ಬೆರೆಯದ್ದೇ ರಿತಿಯಲ್ಲಿ ಹೋರಾಟ ಮಾಡೋಣ ಎಂದು ಟ್ವೀಟ್ ಮೂಲಕ ಸಂದೇಶ ರವಾನೆ ಮಾಡಿದ್ದರು. ಹೀಗಾಗಿ ಈ ವಿಚಾರ ಮುಗಿದೇ ಹೋಯ್ತು ಅಂದುಕೊಳ್ಳುವ ಹೊತ್ತಿಗೆ ಇಂದು ಸುಮಲತಾ ಟ್ವೀಟ್ ಮಾಡಿ ಪ್ರಕರಣಕ್ಕೆ ಜೀವ ತುಂಬಿದ್ದಾರೆ.
ಸಂಸದರ ಸೂಚನೆ ಬೆನ್ನಲ್ಲೆ ಮಂಡ್ಯದ ಚೆನ್ನನಕೆರೆ ಗ್ರಾಮದಲ್ಲಿ ಅಕ್ರಮ ಕಲ್ಲು ಕ್ವಾರಿಗಳಿಗೆ ಬೀಗ ಹಾಕುವ ಕೆಲಸ ಮಾಡಲಾಗುತ್ತಿದೆ. ಇಂದು ಸ್ಥಳಕ್ಕೆ ಭೇಟಿ ನೀಡಿದ ಶ್ರೀರಂಗಪಟ್ಟಣದ ತಹಶೀಲ್ದಾರರು ರೂಪಾ ಅಕ್ರಮ ಕಲ್ಲು ಕ್ವಾರಿಗಳ ಮೇಲೆ ದಾಳಿ ಮಾಡಿದ್ದಾರೆ. ಈ ಮೂಲಕ ದಳಪತಿಗಳ ಮಾತಿಗೆ ಬೀಗ ಹಾಕಲು ಲೇಡಿ ರೆಬೆಲ್ ಸ್ಟಾರ್ ತಂತ್ರ ಹೂಡಿದ್ದಾರೆ.