‘ವಂಚಿಕೆ ಕೇಸ್ ಮುಚ್ಚಿಹಾಕಿಲ್ಲ’- ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ‘ಸಾರಥಿ’ ಸಿಟ್ಟು!
ಹೋಟೆಲ್ ನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ. ಜೊತೆಗೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಸೆಟೆಲ್ ಮಾಡಿಕೊಂಡು 25 ಕೋಟಿ ವಂಚನೆ ಕೇಸ್ ಮುಚ್ಚಿಹಾಕಿದ್ದಾರೆಂದು ಇಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, “ನಾವು ಮಾತನಾಡಿಕೊಂಡು ಪ್ರಕರಣ ಮುಚ್ಚಿಹಾಕುತ್ತಿಲ್ಲ. ಪೊಲೀಸವರಿಗೆ ತನಿಖೆಗೆ ಸಮಯ ಕೊಡಬೇಕು ಅಲ್ವಾ? ಅದಕ್ಕೋಸ್ಕರ ನಾವು ಕಾಯುತ್ತಿದ್ದೇವೆ. ಇನ್ನೂ ಅರುಣಾಕುಮಾರಿಯನ್ನು ಯಾಕೆ ಮನೆಗೆ ಬಿಟ್ಟುಕೊಂಡರು? ಎಂದು ಇಂದ್ರಜಿತ್ ಪ್ರಶ್ನೆ ಕೇಳ್ತಾರೆ ನಾನು ಅರುಣಾಕುಮಾರಿ ಅವರು ಬ್ಯಾಂಕ್ ನವರು ಎಂದ್ರು ಅದಕ್ಕೆ ಮನೆಯೊಳಗೆ ಬಿಟ್ಟುಕೊಂಡಿದ್ದೇನೆ. ಯಾವುದೇ ವಂಚನೆ ಕೇಸ್ ಮುಚ್ಚಿಹಾಕಿಲ್ಲ. ಒಳಗಡೆ ಏನೂ ಮಾತನಾಡಿಲ್ಲ. ನಾನು ನಾವು ನಾವೇ ಮಾತನಾಡಿಕೊಳ್ಳುವುದು ಬೇಡ. ತನಿಖೆ ಆಗಲಿ ನಂತರ ಮಾತನಾಡೋಣ ಅಂದಿದ್ದೇನೆ. ಅರುಣಾಕುಮಾರಿ ಕರೆಟ್ಟಾಗಿದ್ದರೆ ಅವರೊಂದಿಗೆ ನಾನು ನಿಂತುಕೊಳ್ಳುತ್ತೇನೆ ಅಂತ ಹೇಳಿದ್ದೇನೆ” ಎಂದು ಇಂದ್ರಜಿತ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.
“ನಾನು ಯಾವ ಸಪ್ಲೈಯರ್ ಮೇಲೆ ಕೈ ಮಾಡಿಲ್ಲ. ಬೈದಿರೋದು ನಿಜ. ಊಟಕ್ಕೆ ಲೇಟ್ ಆಗಿದ್ದಕ್ಕೆ ಯಾಕಪ್ಪ ಲೇಟು ಅಂತ ಕೇಳಿದಿವಿ ಅಷ್ಟೇ. ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿದ್ದಾರೆ. ಆರೋಪ ಮಾಡಲಿ, ಸಾಬೀತು ಮಾಡಲಿ. ಅವರಿಗೆ ಒಳ್ಳೆ ಕಾಂಟೆಕ್ಟ್ಸ್ ಇರಬಹುದು. ಸಾಬೀತು ಮಾಡಲಿ. ಹೋಟೆಲ್ ಮಾಲೀಕ ಸಂದೇಶ್ ಗೂ ನನಗೂ ಸಾವಿರ ಗಲಾಟೆ ಇದೆ. ಇಂದ್ರಜಿತ್ ಅವರು ಇನ್ವೆಸ್ಟಿಗೇಟರ್ ಇದನ್ನು ಮಾಡಲಿ ಒಳ್ಳೆದು” ಎಂದಿದ್ದಾರೆ.
“ಎದುರು ನಿಂತವರು ಹೇಗೆ ನಮ್ಮೊಂದಿಗೆ ಮಾತನಾಡುತ್ತಾರೆ ಹಾಗೇ ನಾವೂ ಮಾತನಾಡುತ್ತೇವೆ. ಎರಡೂ ವಿಚಾರ ಸಾಬೀತಾಗಲಿ ಆಮೇಲೆ ನಾನು ಮಾತನಾಡುತ್ತೇನೆ” ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಸಾರಥಿ ಕಿಡಿ ಕಾರಿದ್ದಾರೆ.