ಮನೆಯಲ್ಲೇ ಕೊರೊನಾ ಲಸಿಕೆ ಪಡೆದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್; ವ್ಯಾಪಕ ಖಂಡನೆ!
ಅನಾರೋಗ್ಯದ ಕಾರಣ ನೀಡಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ರಿಯಾಯಿತಿ ಪಡೆದಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಈಗ ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಮತ್ತೆ ಹೊಸ ವಿವಾದದಲ್ಲಿ ಸಿಲುಕಿದ್ದಾರೆ.
ಭೋಪಾಲ್ ಸಂಸದೆ ಮನೆಯಲ್ಲಿಯೇ ಲಸಿಕೆ ಪಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಅವರ ಮೊದಲ ಕೊರೊನಾ ಲಸಿಕೆಯ ಡೋಸ್ ಎಂದು ತಿಳಿದುಬಂದಿದೆ.
ವಿವಾದಗಳಿಗೆ ಉತ್ತರಿಸಿರುವ ರಾಜ್ಯ ಆಡಳಿತ ಅಧಿಕಾರಿಗಳು, ’ಪ್ರಜ್ಞಾ ಠಾಕೂರ್ ಅವರು ವೃದ್ಧರು ಮತ್ತು ಅಂಗವಿಕಲರಿಗೆ ಇರುವ ವಿಶೇಷ ನಿಯಮಗಳ ಅಡಿಯಲ್ಲಿ ಮನೆ ವ್ಯಾಕ್ಸಿನೇಷನ್ ಪಡೆಯಲು ಅರ್ಹರಾಗಿದ್ದಾರೆ’ ಎಂದಿದ್ದಾರೆ.
“ನಿಯಮಗಳ ಪ್ರಕಾರ, ವೃದ್ಧರು ಮತ್ತು ಅಂಗವಿಕಲರಿಗೆ ಅವರ ಮನೆಗಳಿಗೆ ತೆರಳಿ ಲಸಿಕೆ ನೀಡಲಾಗುವುದು, ಆದ್ದರಿಂದ ಪ್ರಜ್ಞಾ ಠಾಕೂರ್ ಅವರಿಗೆ ಲಸಿಕೆಯ ಮೊದಲ ಡೋಸ್ ನೀಡುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ” ಎಂದು ಅಧಿಕಾರಿ ಸಂತೋಷ್ ಶುಕ್ಲಾ ಎನ್ಡಿಟಿವಿಗೆ ತಿಳಿಸಿದ್ದಾರೆ.
“ನಮ್ಮ ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್ ಅವರು ಕೆಲವೇ ದಿನಗಳ ಹಿಂದೆ ಬ್ಯಾಸ್ಕೆಟ್ಬಾಲ್ ಆಡುತ್ತಿದ್ದರು ಮತ್ತು ಡೋಲಿನ ತಾಳಕ್ಕೆ ನೃತ್ಯ ಮಾಡುತ್ತಿದ್ದರು. ಆದರೆ, ಅವರಿಗೆ ಲಸಿಕೆ ಹಾಕಲು ತಂಡವೊಂದು ಮನೆಗೆ ತೆರಳಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವರೆಗೆ ಎಲ್ಲಾ ಎಲ್ಲಾ ಬಿಜೆಪಿ ನಾಯಕರು ಲಸಿಕೆ ಪಡೆಯಲು ಆಸ್ಪತ್ರೆಗಳಿಗೆ ಹೋಗಿದ್ದಾರೆ. ಇವರಿಗೆ ಮಾತ್ರ ಏಕೆ ಇಂತಹ ವಿನಾಯಿತಿ..?” ಎಂದು ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಪ್ರಶ್ನಿಸಿದ್ದಾರೆ.
अभी कुछ दिन पूर्व ही बास्केट बॉल खेल रही व ढोल की थाप पर नृत्य कर रही हमारी भोपाल की सांसद प्रज्ञा ठाकुर ने आज घर टीम बुलाकर वैक्सीन का डोज़ लगवाया ?
मोदीजी से लेकर शिवराजजी व तमाम भाजपा नेता अस्पताल में जाकर वैक्सीन लगवा कर आये लेकिन हमारी सांसदजी को यह छूट क्यों व किस आधार पर? pic.twitter.com/QYEN4eNiV2
— Narendra Saluja (@NarendraSaluja) July 14, 2021
ವಿವಾದಾತ್ಮಕ ಟೀಕೆಗಳಿಗೆ ಹೆಸರುವಾಸಿಯಾದ 51 ವರ್ಷದ ಪ್ರಜ್ಞಾ ಠಾಕೂರ್ 2008 ರ ಮಾಲೆಗಾಂವ್ ಭಯೋತ್ಪಾದಕ ಸ್ಫೋಟದ ಪ್ರಮುಖ ಆರೋಪಿಯಾಗಿದ್ದಾರೆ. ವೈದ್ಯಕೀಯ ಕಾರಣಗಳಿಂದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. 2017 ರಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು. ಜಾಮೀನು ಪಡೆಯುವ ಮೊದಲು ಅವರು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದರು.
ಮುಂಬೈಯಿಂದ 200 ಕಿ.ಮೀ ದೂರದಲ್ಲಿರುವ ಮಾಲೆಗಾಂವ್ ಎಂಬ ಪಟ್ಟಣದ ಮಸೀದಿಯ ಬಳಿ ಮೋಟಾರ್ ಸೈಕಲ್ನಲ್ಲಿ ಇಟ್ಟಿದ್ದ ಸ್ಫೋಟಕ ಸ್ಪೋಟಗೊಂಡು ಆರು ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: 100 ರೈತರ ವಿರುದ್ದ ದೇಶದ್ರೋಹ ಪ್ರಕರಣ ದಾಖಲು; ಪ್ರಜಾಪ್ರಭುತ್ವಕ್ಕೆ ಅವಮಾನ ಎಂದ ರಾಜಕೀಯ ಪಕ್ಷಗಳು!