‘ಹೈಕಮಾಂಡ್ ನಿಂದ ಒತ್ತಡ ಇಲ್ಲ, ರಾಜೀನಾಮೆ ನನ್ನ ಸ್ವಂತ ನಿರ್ಧಾರ’ – ಬಿಎಸ್ವೈ
ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಿದ್ದು ಬಿ ಎಸ್ ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ಹೈಕಮಾಂಡ್ ನಿಂದ ನನಗೆ ಯಾವುದೇ ಒತ್ತಡ ಇಲ್ಲ, ರಾಜೀನಾಮೆ ನನ್ನ ಸ್ವಂತ ನಿರ್ಧಾರ’ ಎಂದಿದ್ದಾರೆ.
ರಾಜ್ಯ ಸರ್ಕಾರ ಎರಡು ವರ್ಷದ ಆಡಳಿತಾವಧಿ ಪೂರೈಸಿದ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾಶವೇಶದಲ್ಲಿ ಮಾತನಾಡಿದ ಅವರು, ತಾವು ಯಾರೂ ಅನ್ಯತಾ ಭಾವಿಸಬಾರದು, ನಾನು ನಿಮ್ಮೆಲ್ಲರ ಅಪ್ಪಣೆ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ. 75 ವರ್ಷ ದಾಟಿದ ಬಳಿವೂ ನನಗೆ ಎರಡು ವರ್ಷ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಿದ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರಿಗೆ ಶಬ್ದಗಳಲ್ಲಿ ಧನ್ಯವಾದ ಹೇಳಲು ಆಗುವುದಿಲ್ಲ ಎಂದರು.
ಎರಡು ದಿನಗಳ ಹಿಂದೆಯೇ ನಾನು ರಾಜೀನಾಮೆಗೆ ನಿರ್ಧರಿಸಿದ್ದೇನೆ. ದೆಹಲಿಯಿಂದ ನನಗೆ ಯಾವುದೇ ಒತ್ತಡ ಬಂದಿಲ್ಲ. ಸಿಎಂ ಆಗಿ 2 ವರ್ಷ ತುಂಬಿದೆ. ಬೇರೆಯವರಿಗೆ ಸಿಎಂ ಸ್ಥಾನ ಸಿಗಬೆಕು. ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಈ ವೇಳೆ ಜೆಪಿ ನಡ್ಡಾ, ಅಮಿತ್ ಶಾ, ಮೋದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಶಿಖಾರಿಪುರ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಠಾಧೀಶರು ಆಶೀರ್ವಾದ ಮಾಡಿ ಬೆಂಬಲವಾಗಿ ನಿಂತಿದ್ದಾರೆ. ರಾಜ್ಯದ ಜನ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಯಾರೇ ಮುಖ್ಯಮಂತ್ರಿಯಾದರೂ ಇದೇ ಸಹಕಾರ ಕೊಡಬೇಕು. ವಲಸೆ ಬಿಜೆಪಿಗರಿಗೂ ಯಾರೇ ಸಿಎಂ ಆದರೂ ಸಹಕಾರ ನೀಡುತ್ತಾರೆ. ರಾಜ್ಯದಲ್ಲಿ ಪಕ್ಷ ಬಲಪಡಿಸುವುದೇ ನನ್ನ ಗುರಿಯಾಗಿದೆ ಎಂದಿದ್ದಾರೆ.