‘ಜಮೀರ್ ಜತೆ ನನ್ನ ಅನುಭವ ಖಾಸಗಿಯಾಗಿ ಹಂಚಿಕೊಳ್ಳಲು ಸಿದ್ಧ’ – ಡಿಕೆ ಶಿವಕುಮಾರ್
ಜಮೀರ್ ಅವರ ಜತೆ ನನ್ನ ಅನುಭವವನ್ನು ಖಾಸಗಿಯಾಗಿ ಹಂಚಿಕೊಳ್ಳಲು ಸಿದ್ಧನಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ‘ನಮ್ಮ ನಾಯಕರ ಮನೆ ಮೇಲೆ ಇಡಿ ದಾಳಿ ಬಗ್ಗೆ ನನಗೆ ಇರುವ ಕಾನೂನು ಅರಿವಿನ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನಾನು ಈ ಬಗ್ಗೆ ವೈಯಕ್ತಿಯವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಖಾಸಗಿಯಾಗಿ ನನ್ನ ಅನುಭವವನ್ನು ಅವರೊಟ್ಟಿಗೆ ಹಂಚಿಕೊಳ್ಳಲು ಸಿದ್ಧನಿದ್ದೇನೆ. ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡುವುದಿಲ್ಲ’ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುರಿತಾಗಿ ಜಮೀರ್ ಅವರು ಮಾಡಿರುವ ಆರೋಪಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅವರು ಇವರ ಬಗ್ಗೆ ಹೇಳಿದರೆ, ಇವರು ಅವರ ಬಗ್ಗೆ ಮಾತನಾಡಿದರೆ, ನೀವು ಅವರನ್ನೇ ಕೇಳಬೇಕು. ಆ ವಿಚಾರವಾಗಿ ನನ್ನನ್ನು ಯಾಕೆ ಪ್ರಶ್ನಿಸುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಮಾತನಾಡಿದ ಜಮೀರ್, ಮನೆ ವಿಚಾರವಾಗಿ ದಾಳಿ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶೀವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೂ ED ದಾಳಿ ಆಗಿತ್ತು. ಹಾಗಾದರೆ ಡಿಕೆಶಿಗೂ ಐಎಂಎಗೂ ಸಂಬಂಧ ಇತ್ತಾ? ಎಂದು ಡಿ.ಕೆ.ಶಿವಕುಮಾರ್ಗೆ ಜಮೀರ್ ಪ್ರಶ್ನೆ ಹಾಕಿದ್ದರು.