ಬಿಜೆಪಿಯಲ್ಲಿ ಬಂಡಾಯದ ಕಿಚ್ಚು : ರಾಜೀನಾಮೆ ನೀಡ್ತಾರೆ ಎಂಟಿಬಿ ನಾಗರಾಜ್..?
ಸಿಎಂ ಬಸವರಾಜ್ ಬೊಮ್ಮಾಯಿಯವರ ನೇತೃತ್ವದ ನೂತನ ಸಚಿವ ಸಂಪೂಟ ರಚನೆಯಾಗಿ ಖಾತೆ ಹಂಚಿಕೆ ಸಹ ಆಗಿದೆ. ತಾವು ಬಯಸಿದ ಖಾತೆ ಸಿಕ್ಕಿಲ್ಲವೆಂದು ಕೆಲ ಸಚಿವರು ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ. ಇದರ ಪರಿಣಾಮ ನೂತನ ಸರ್ಕಾರದ ಎರಡು ವಿಕೆಟ್ಗಳು ಪತನವಾಗುವ ಹಂತ ತಲುಪಿವೆ. ಇಷ್ಟು ದಿನ ಅಸಮಾಧಾನದ ಹೇಳಿಕೆ ಕೊಡುವ ಮೂಲಕ ಹೈಕಮಾಂಡ್ಗೆ ಎಚ್ಚರಿಕೆ ನೀಡುತ್ತಿದ್ದ ಸಚಿವರು ಖಾತೆ ಸಲುವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ಹೌದು.. ಬಯಸಿದ ಖಾತೆ ಸಿಗದೇ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಅಸಮಧಾನ ಹೊರಹಾಕಿದ್ದಾರೆ. ಆನಂದ್ ಸಿಂಗ್ ಮುಖ್ಯಮಂತ್ರಿ ಮಾತ್ರವಲ್ಲ ಬಿಎಸ್ ವೈ ಗೂ ರಾಜೀನಾಮೆ ಪತ್ರ ಆಗಸ್ಟ್ 8 ರಂದೇ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಕೇಳಿರುವ ಖಾತೆ ನೀಡದೇ ಹೋದರೆ ರಾಜೀನಾಮೆ ಅಂಗೀಕರಿಸಬೇಕು ಎಂದು ಆನಂದ್ ಸಿಂಗ್ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಆನಂದ್ ಸಿಂಗ್ ಮನವೊಲಿಸಲು ಮುಂದಾಗಿದ್ದಾರೆ.
ಸಚಿವ ಎಂಟಿಬಿ ನಾಗರಾಜ್ ಖಾತೆ ಬದಲಿಸುವಂತೆ ಮೂರು ದಿನ ಡೆಡ್ ಲೈನ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಎಂಟಿಬಿ ಈ ಹಿಂದೆ ಇರುವ ಖಾತೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಸದ್ಯ ತಾವು ಕೊಟ್ಟ ಡೆಡ್ ಲೈನ್ ಮುಗಿದಿದ್ದು ಎಂಟಿಬಿ ನಾಗರಾಜ್ ಮುಂದಿನ ನಡೆ ಭಾರೀ ಕುತೂಹಲ ಮೂಡಿಸಿದೆ. ಈಗ ಕಾದು ನೋಡುವ ತಂತ್ರಕ್ಕೆ ಎಂಟಿಬಿ ಮುಂದಾಗಿದ್ದಾರೆ.
ವಿಜಯನಗರ ಶಾಸಕ ಆನಂದ್ ಸಿಂಗ್ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನದ ವೇಳೆ ಮೊದಲ ಸಾಲಿನಲ್ಲಿ ನಿಂತು ರಾಜೀನಾಮೆ ನೀಡಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿ ಮತ್ತೆ ರಾಜೀನಾಮೆ ವಿಚಾರವಾಗಿ ಆನಂದ್ ಸಿಂಗ್ ಮತ್ತು ಎಂಟಿಬಿ ಸುದ್ದಿಯಲ್ಲಿದ್ದಾರೆ.
ಖಾತೆಯಿಂದ ಅಸಮಧಾನಗೊಂಡ ಎಂಟಿಬಿ ನಾಗರಾಜ್ ಹಾಗೂ ಆನಂದ್ ಸಿಂಗ್ ರಾಜೀನಾಮೆ ನೀಡ್ತಾರಾ? ಅಥವಾ ಸಿಎಂ ಬೊಮ್ಮಾಯಿ ಿವರ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾರಾ? ಅಥವಾ ಖಾತೆ ಬದಲಿಸಲಾಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.