ಜನಾಶೀರ್ವಾದ ಯಾತ್ರೆ ಮಾಡಿದ್ರೆ ಕೊರೊನಾ ಬರಲ್ವಾ..? : ಸೆಲೆಬ್ರಿಟಿಗಳ ಅದ್ದೂರಿ ಸ್ವಾಗತಕ್ಕಿಲ್ವಾ ಕೊರೊನಾ?
ಪ್ರತಿಭಟನೆಗಳನ್ನ ಮಾಡಿದ್ರೆ ಕೊರೊನಾ ಬರುತ್ತೆ, ಮದ್ವೆಯಲ್ಲಿ ಜನ ಸೇರಿದ್ರೆ ಕೊರೊನಾ ಬರುತ್ತೆ, ತರಕಾರಿ ತರಲು ಮಾರ್ಕೇಟ್ ಹೋದ್ರು ಕೊರೊನಾ ಬರುತ್ತೆ, ರಾತ್ರಿ 9 ಗಂಟೆ ಮೇಲೆ ಜನ ಓಡಾಡಿದ್ರೆ ಕೊರೊನಾ ಬರುತ್ತೆ ಹೀಗೆ ಜನ ಸಾಮಾನ್ಯರು ಏನೇ ಮಾಡಲಿ ಕೊರೊನಾ ಬರುತ್ತೆ. ಹಾಗೊಂದು ವೇಳೆ ಕೊರೊನಾ ಬಂದ್ರು ಬರಲಿ ಅಂತ ಆಚೆ ಬಂದು ಗುಂಪು ಸೇರಿದ್ರೆ ಖಾಕಿ ಹಾಕಿದ ಪೊಲೀಸ್ರು, ಬಿಬಿಎಂಪಿ ಪ್ರಶ್ನೆ ಮಾಡ್ತಾರೆ. ಕ್ಯಾಮಾರಾ ಹಿಡ್ಕೊಂಡು ಮಾಧ್ಯಮದವರೂ ಕೂಡ ನಿಮ್ ಮುಖವನ್ನು ಝೂಮ್ ಮಾಡಿ ಕಳ್ಳನ್ನಂತೆ ಜಗತ್ತಿಗೆ ಪರಿಚಯಿಸಿಬಿಡುತ್ತಾರೆ.
ಹಾಗಾದ್ರೆ ಜನಾಶೀರ್ವಾದ ಯಾತ್ರೆ ಮಾಡಿದ್ರೆ ಕೊರೊನಾ ಬರಲ್ವಾ..? ಸೆಲೆಬ್ರಿಟಿಗಳ ಅದ್ದೂರಿ ಸ್ವಾಗತಕ್ಕಿಲ್ವಾ ಕೊರೊನಾ? ಹೀಗೊಂದು ಪ್ರಶ್ನೆ ಇಂದಿನ ಟಿವಿ ಚಾನೆಲ್ ಗಳು ಪ್ರಸಾರ ಮಾಡಿದ ಸುದ್ದಿಗಳಿಂದ ಹುಟ್ಟುಕೊಂಡಿದೆ.
ಹೌದು… ಹೀಗೆ ಒಂದು ಬಾರಿ ಇಂದಿನ ಸುದ್ದಿಗಳತ್ತ ಗಮನ ಹರಿಸೋಣ… ಒಂದು ಬಾರಿ ವೀಡಿಯೊಮ್ಮೆ ಗಮನಿಸಿ..
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮಂಡ್ಯ ಜಿಲ್ಲೆಯ ಹೊನಗನಹಳ್ಳಿಯಲ್ಲಿ ನಾಟಿ ಮಾಡುವ ಮೂಲಕ ಜನರ ಗಮನ ಸೆಳೆದ್ರು. ನಮಗಿರೋ ಒಂದೇ ಒಂದು ಪ್ರಶ್ನೆ. ಈ ಸ್ಥಳದಲ್ಲಿ ಜನ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರೂ ಇಲ್ಲ್ಯಾಕೆ ಯಾವ ಪೊಲೀಸರು ಪ್ರಶ್ನೆ ಮಾಡಿಲ್ಲ..? ಜನ ಪ್ರತಿನಿಧಿಗಳು ಬಂದಾಗಾ ಜನ ಸೇರಿದಾಗ ಕೊರೊನಾ ಬರಲ್ವೇ..? ಯಾಕೆ ಟಿವಿ ಮಾಧ್ಯಮದಲ್ಲೂ ಇದಕ್ಕೆ ಪುಷ್ಠಿ ನೀಡುವಂತ ಸುದ್ದಿಗಳನ್ನೇ ಪ್ರಸಾರ ಮಾಡಲಾಗುತ್ತೆ..? ಜನ ಪ್ರತಿನಿಧಿಗಳು ಪ್ರಚಾರಕ್ಕೆ ಆಗಮಿಸಿದಾಗ ಬಾರದ ಕೊರೊನಾ ಜನ ದುಡಿಯಲು ರಸ್ತೆಗಿಳಿದ್ರೆ ಬಂದುಬಿಡುತ್ತಾ..? ನಿಯಮ ಅಂದ್ಮೇಲೆ ಎಲ್ಲರಿಗೂ ಒಂದೇ ಅಲ್ವೇ..? ಜನಪ್ರತಿನಿಧಿಗಳಾದ್ರೇನು ಜನಸಾಮಾನ್ಯರಾದ್ರೇನು ಎಲ್ಲರೂ ಅದನ್ನ ಪಾಲಿಸಲೇಬೇಕು ಅಲ್ವೇ..?
ಇದೊಂದು ಮಾತ್ರವಲ್ಲ ಇಲ್ಲೊಂದು ಸುದ್ದಿ ಇದೆ ನೋಡಿ…
ಇಂದು ಹುಬ್ಬಳ್ಳಿ ಜನಾಶೀರ್ವಾದ ಯಾತ್ರೆಗೆ ಆಗಮಿಸಿದ ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಅವರು ಇಲ್ಲಿನ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದರು. ಮಠದ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದ ಸಚಿವರು, ಉಭಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಇಲ್ಲಿ ಅದೆಷ್ಟು ಜನ ಸೇರಿದ್ರು..? ಅದೆಷ್ಟು ಜನ ಮಾಸ್ಕ್ ಹಾಕಿದ್ರು..? ಅದೆಷ್ಟು ಜನ ಸಾಮಾಜಿಕ ಅಂತರ ಕಾಯ್ದುಕೊಂಡ್ರೋ ಆ ದೇವರೇ ಬಲ್ಲ… ಜನಪ್ರತಿನಿಧಿಗಳು ಅಂದಾಕ್ಷಣ ಅದ್ಯಾವ ಪೊಲೀಸ್ ಆಗಲಿ, ಕೊರೊನಾ ವಾರಿಯರ್ಸ್ ಆಗಲಿ ಕೊರೊನಾ ನಿಯಮಗಳ ಬಗ್ಗೆ ಪ್ರಶ್ನೇ ಮಾಡೋದಿರಲಿ ಆಕಡೆ ಸುಳಿಯೋದೇ ಇಲ್ಲ. ಕಣ್ಮುಂದೆ ಇಂಥಹ ತಾರತಮ್ಯ ನಡೆಯುತ್ತಿದ್ರು ಪೊಲೀಸರು ಕಣ್ಣಿದ್ದು ಕುರುಡರಾಗಿರುತ್ತಾರೆ. ಇದೇ ರೀತಿ ಒಂದು ಪ್ರತಿಭಟನೆ ನಡೆಯಲಿ. ಜನ ಮಾಸ್ಕ್ ಹಾಕದೇ ಮಾರುಕಟ್ಟೆಗೋ, ರಸ್ತೆಗೋ ಇಳಿಯಲಿ ಬಿಡಲಿ ಬೀದಿ ಬೀದಿ ಬೀದಿಯಲ್ಲಿ ನಿಂತು ದಂಡ ವಸೂಲಿ ಮಾಡ್ತಾರೆ. ಇದು ನಮ್ ರಾಜ್ಯದ ಪರಿಸ್ಥಿತಿ… ರಾಜಕಾರಣಿಗಳು ಕಥೆ ಬಿಡಿ… ಕೊರೊನಾ ಸಂದರ್ಭದಲ್ಲಿ ಸೆಲೆಬ್ರಿಗಳು ಬಂದ್ರೂ ಅಷ್ಟೇ ಅದ್ದೂರಿ ಸ್ವಾಗತ ಸಿಗುತ್ತೆ…
ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಮಂಜು ತಮ್ಮ ಹುಟ್ಟೂರಿಗೆ ತೆರಳಿದ್ದು ಅಲ್ಲಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಇದು ನಮ್ಮ ರಾಜ್ಯದಲ್ಲಿ ಇರುವ ಕೊರೊನಾ ರಾಜಕಾರಣ. ಜನ ಸಾಮಾನ್ಯರು ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೇಗಾದ್ರು ಮಾಡಿ ಜೀವನ ಕಟ್ಟಿಕೊಳ್ಳೋಣ ಅಂದ್ರೆ ನೂರೆಂಟು ಕೊರೊನಾ ರೂಲ್ಸ್ ಪಾಲಿಸಬೇಕು. ರಸ್ತೆಗಿಳಿದ್ರೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಡ್ಡಾಯ, ಪಾಲಿಸದಿದ್ರೆ ದಂಡ ಕಟ್ಟು ಅನ್ನುತ್ತೆ ಬಿಬಿಎಂಪಿ. ಇದರಲ್ಲೇ ರಾಜ್ಯ ಸರ್ಕಾರ ಪ್ರಚಾರದ ಗೀಳಿನಲ್ಲಿ ತಮ್ಮ ಬೇಳೆ ಬೇಸಿಕೊಳ್ಳುತ್ತಿದೆ. ಇದಕ್ಕೆ ಯಾರನ್ನ ಹೊಣೆ ಮಾಡೋದು..? ಯಾರನ್ನ ಪ್ರಶ್ನೆ ಮಾಡೋದು..? ಬೇಲಿ ಎದ್ದು ಹೊಲ ಮೇಯಿದಂತಾಗುತ್ತಿದೆ ರಾಜ್ಯದ ಪರಿಸ್ಥಿತಿ.
Published by: Sunita Bhandari