ಮಹಿಳೆಯರ ಮೇಲಿನ ಅಪರಾಧಗಳ ವಿಚಾರದಲ್ಲಿ ಕುರುಡಾಗದಿರಿ, ದನಿ ಎತ್ತಿ: ನಟಿ ರಮ್ಯಾ
ಗಂಡಸರು ಮಹಿಳೆಯರ ಮೇಲೆ ಎಸಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರ ಆಗಿರಬಹುದು, ದೈಹಿಕ ದೌರ್ಜನ್ಯ ಅಥವಾ ಮೌಖಿಕ ಶೋಷಣೆಯೇ ಆಗಿರಬಹುದು. ನಿನ್ನದೇ ತಪ್ಪು ಎಂದು ಮಹಿಳೆಗೆ ಹೇಳಲಾಗುತ್ತದೆ. ಮಹಿಳೆಯರ ಮೇಲಿನ ಅಪರಾಧಗಳ ವಿಚಾರದಲ್ಲಿ ಕುರುಡಾಗದಿರಿ, ದನಿ ಎತ್ತಿ ಎಂದು ನಟಿ, ಮಾಜಿ ಸಂಸದೆ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿದ್ಯಾರ್ಥಿನಿಯೊರ್ವಳ ಮೇಲೆ ಅಮಾನವೀಯ ಸಾಮೂಹಿಕ ಅತ್ಯಾಚಾರ ನಡೆದಿದ್ದ ಬೆನ್ನಲ್ಲೇ “ಯುವಕ-ಯುವತಿ 7, 7:30ಯ ಸಮಯಕ್ಕೆ ಅಲ್ಲಿಗೆ ಹೋಗಿದ್ದಾರೆ. ಅದು ನಿರ್ಜನವಾದ ಪ್ರದೇಶ. ಅವರು ಹೋಗಬಾರದಿತ್ತು. ಯಾರನ್ನು ಅಲ್ಲಿಗೆ ಹೋಗಬೇಡಿ ಎಂದು ತಡೆಯಲು ನಮಗೆ ಆಗುವುದಿಲ್ಲ. ಅವರು ಹೋಗಿದ್ದಾರೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಯುವತಿ ಅಲ್ಲಿಗೆ ಹೋಗಿದ್ದೆ ತಪ್ಪು, ಸಂಜೆಯ ವೇಳೆ ಹೊರ ಬಂದಿದ್ದೆ ತಪ್ಪು ಎನ್ನುವಂತೆ ಮಾತನಾಡಿದ್ದರು.
ಅವರ ಹೇಳಿಕೆ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದ್ದು, ರಮ್ಯಾ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ಅವರು ಬರೆದಿರುವ ಪೋಸ್ಟ್ ಹೀಗಿದೆ:
” ಗಂಡಸರು ಮಹಿಳೆಯರ ಮೇಲೆ ಎಸಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರ ಆಗಿರಬಹುದು, ದೈಹಿಕ ದೌರ್ಜನ್ಯ ಅಥವಾ ಮೌಖಿಕ ಶೋಷಣೆಯೇ ಆಗಿರಬಹುದು. ನಿನ್ನದೇ ತಪ್ಪು ಎಂದು ಮಹಿಳೆಗೆ ಹೇಳಲಾಗುತ್ತದೆ” ಎಂದಿದ್ದಾರೆ.
“ಇದು ನಿನ್ನ ತಪ್ಪು, ನೀನು ಆ ರೀತಿ ಮಾತನಾಡಬಾರದಿತ್ತು, ನೀನು ಆ ರೀತಿ ಮಾಡಬಾರದಿತ್ತು, ನೀನು ಆ ಉಡುಪನ್ನು ಧರಿಸಬಾರದಿತ್ತು ತುಂಬ ಬಿಗಿ ಆದಂತಹ, ತುಂಬ ಸಡಿಲ ಆಗಿರುವಂತಹ ಬಟ್ಟೆ ಧರಿಸಬಾರದಿತ್ತು, ತಡರಾತ್ರಿ ನೀನು ಹೊರಗೆ ಹೋಗಬಾರದಿತ್ತು, ಹೊರಗೇ ಹೋಗಬಾರದಿತ್ತು, ಮೇಕ್ಅಪ್ ಹಾಕಿಕೊಳ್ಳಬಾರದಿತ್ತು, ಯಾಕೆ ಕೆಂಪುಬಣ್ಣದ ಲಿಪ್ಸ್ಟಿಕ್, ನೀವು ಕಣ್ಣು ಮಿಟುಕಿಸಬಾರದಿತ್ತು..ಹೀಗೆ ನೀನು ಅದು ಮಾಡಬಾರದಿತ್ತು…ಇದು ಮಾಡಬಾರದಿತ್ತು… ಏಕೆ..? ಏಕೆಂದರೆ ಪುರುಷರು ಯಾವಗಲೂ ಇರುವುದೇ ಹಾಗೆ, ನಾವು ರಾಜಿ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕು- ಇಲ್ಲ. ಇಲ್ಲ… ಇಂಥ ಅಸಂಬದ್ಧವೆಲ್ಲ ಕೊನೆಯಾಗಬೇಕು. ಪ್ರಾಮಾಣಿಕವಾಗಿ ಹೇಳಬೇಕಂದರೆ ಈ ದೂಷಣೆಯನ್ನು ಒಪ್ಪಿಕೊಳ್ಳುವ ತಪ್ಪನ್ನು ನಾನೂ ಮಾಡಿದ್ದೇನೆ. ಸ್ನೇಹಿತರಿಗೂ ಹೇಳಿದ್ದೇನೆ. ಆದರೆ ಇನ್ಮುಂದೆ ಸಾಧ್ಯವಿಲ್ಲ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ನೋಡಿಕೊಂಡು ಸುಮ್ಮನಿರಬೇಡಿ, ಕುರುಡಾಗದಿರಿ. ಧ್ವನಿ ಎತ್ತಿ’ ಇದು ಇಂದಿಗೆ ಕೊನೆಯಾಗಲಿ” ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 2 ವರ್ಷದಲ್ಲಿ 1168 ಅತ್ಯಾಚಾರ ಪ್ರಕರಣಗಳು ದಾಖಲು; ದಿನಕ್ಕೆ ಕನಿಷ್ಟ ಒಂದು ಅತ್ಯಾಚಾರ!