ಮೈಸೂರು ವಿವಿ ಕುಲಸಚಿವರ ಆದೇಶ : ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಡಿ.ಕೆ. ಶಿವಕುಮಾರ್ ಆಗ್ರಹ!
‘ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಆವರಣದಲ್ಲಿ ಸಂಜೆ 6.30 ರ ನಂತರ ಯಾರೂ ಓಡಾಡುವಂತಿಲ್ಲ ಎಂಬ ಕುಲಸಚಿವರ ಆದೇಶದ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಸ್ವತಂತ್ರ ಭಾರತದಲ್ಲಿ ರಾತ್ರಿ ಹೊತ್ತು ಮಹಿಳೆಯರು ಓಡಾಡುವಂತಿಲ್ಲ ಎಂಬ ಆದೇಶ ಹೊರಡಿಸಿರುವುದು ಸರಿಯಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಭದ್ರತೆ ಒದಗಿಸುವುದು ಪೊಲೀಸರ ಕರ್ತವ್ಯ. ಹೀಗಿರುವಾಗ ಈ ರೀತಿ ನಿರ್ಬಂಧ ಹೇರಬಾರದು. ಅದು ಸರ್ವತಾ ಸಮ್ಮತವಲ್ಲ. ಮೈಸೂರು ಪ್ರವಾಸತಾಣಗಳಿಗೆ ವಿಶ್ವದಲ್ಲೇ ಹೆಸರು ಮಾಡಿರುವ ಜಿಲ್ಲೆ. ದಿನನಿತ್ಯ ಲಕ್ಷಾಂತರ ಜನ ಆಗಮಿಸುತ್ತಾರೆ. ಹೀಗಿರುವಾಗ ನಿರ್ಬಂಧ ಹೇರಿರುವ ಆದೇಶ ಖಂಡನೀಯ. ಇಲ್ಲಿ ಗೃಹ ಸಚಿವರದ್ದು ತಪ್ಪಾ? ಪೊಲೀಸ್ ಆಯುಕ್ತರದ್ದು ತಪ್ಪಾ? ಕುಲಸಚಿವರದ್ದು ತಪ್ಪಾ ಎಂಬುದನ್ನು ನೋಡಬೇಕು. ಈ ಆದೇಶ ಹೊರಡಿಸಿರುವ ಕುಲಸಚಿವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು. ಅವರು ಈ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಅತ್ಯಾಚಾರ ಪ್ರಕರಣದ ತನಿಖೆ ವಿಚಾರವಾಗಿ ಉಗ್ರಪ್ಪ, ರೇವಣ್ಣ ಅವರು ನನ್ನ ಜತೆ ಮಾತನಾಡಿದ್ದಾರೆ. ನಾವು ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ಒಳ್ಳೆಯ ಕೆಲಸ ಮಾಡಿದರೆ ನಾವು ಅವರನ್ನು ಅಭಿನಂದಿಸುತ್ತೇವೆ. ಈ ಹಿಂದೆ ಪೊಲೀಸರು ಯಾವ ರೀತಿ ಏಕಪಕ್ಷೀಯವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ನಾವೆಲ್ಲರೂ ನೋಡಿದ್ದೇವೆ.’
ಹಬ್ಬದ ಬಗ್ಗೆ ಸರ್ಕಾರ ತೀರ್ಮಾನ:
ಇನ್ನು ಗಣೇಶ ಚತುರ್ಥಿ ಆಚರಣೆ ಸಂಬಂಧ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಬ್ಬದ ವಿಚಾರವಾಗಿ ನಮ್ಮ ಪಕ್ಷದ ನಿಲುವು ಈಗ ಹೇಳುವುದಿಲ್ಲ. ವಿಜಯಕ್ಕೆ ನಾಯಕ ವಿನಾಯಕ. ಎಲ್ಲ ವಿಘ್ನ ನಿವಾರಿಸುವ ವಿನಾಯಕನ ಹಬ್ಬ ಆಚರಣೆ ಪ್ರತಿ ಮನೆಗಳಲ್ಲಿ ಆಗಬೇಕು. ಯಾವ ಮಟ್ಟದಲ್ಲಿ ಆಗಬೇಕು ಎಂಬುದರ ಬಗ್ಗೆ ಸರ್ಕಾರ ಮಾರ್ಗಸೂಚಿ ಹೊರಡಿಸಲಿ.
ಪಾಲಿಕೆ ಚುನಾವಣೆ; ಧಾರವಾಡ- ಬೆಳಗಾವಿ ಪ್ರವಾಸ:
‘ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪಾಲಿಕೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಕೋವಿಡ್ ಮಾರ್ಗಸೂಚಿ ಇರುವ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಎಷ್ಟು ಸಾಧ್ಯವೋ ಅಷ್ಟು ನೆರವಾಗುತ್ತೇವೆ.’