ಆಂಧ್ರ v/s ಬಿಜೆಪಿ: ವೈಜಾಗ್ ಸ್ಟೀಲ್ ಖಾಸಗೀಕರಣದ ವಿರುದ್ಧ 10 ಕಿ.ಮೀ ಮಾನವ ಸರಪಳಿ!
ವಿಶಾಖಪಟ್ಟಣಂ ಉಕ್ಕು ಸ್ಥಾವರ (ವೈಜಾಗ್ ಸ್ಟೀಲ್)ವನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರದ ವಿರುದ್ದ ವಿಸಾಗ್ ಉಕ್ಕು ಪರಿರಕ್ಷಣಾ ಪೋರಾಟ ಸಮಿತಿಯು ಕಳೆದ 200 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಹೋರಾಟವನ್ನು ತೀವ್ರಗೊಳಿಸಿದೆ. ಇದರ ಭಾಗವಾಗಿ 10 ಕಿ.ಮೀ ಉದ್ದದ ಮಾನವ ಸರಪಳಿ ರಚಿಸಿ ಭಾನುವಾರ ಪ್ರತಿಭಟನೆಯನ್ನು ನಡೆಸಿದೆ.
ಉಕ್ಕು ಸ್ಥಾವರದ ಕಾರ್ಮಿಕರು, ರಾಜಕೀಯ ಪಕ್ಷಗಳ ಹೋರಾಟಗಾರರು, ಉಕ್ಕು ಸ್ಥಾವರದಿಂದ ಭೂಮಿ ಕಳೆದುಕೊಂಡವರು ಹಾಗೂ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರು ವಿಶಾಖಪಟ್ಟಣಂನ ಅಗನಂಪುಡಿಯಿಂದ ಅಕ್ಕಿರೆಡ್ಡಿಪಾಳ್ಯಂವರೆಗೆ ಸುಮಾರು 10 ಕಿ.ಮೀ. ಉದ್ದದ ಮಾನವ ಸರಪಳಿ ‘ಮಹಾ ಮಾನವ ಹಾರಂ’ ರಚಿಸಿ ಹೋರಾಟ ನಡೆಸಿದ್ದಾರೆ.
ವಿಶಾಖಪಟ್ಟಣಂನ ಸರ್ಕಾರಿ ಸ್ವಾಮ್ಯದ ಉಕ್ಕು ತಯಾರಿಕಾ ಘಟಕವಾದ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ಆರ್ಐಎನ್ಎಲ್) ನ ಶೇ. 100 ವ್ಯೆಹಾತ್ಮಕ ಹೂಡಿಕೆಯನ್ನು ಹಿಂಪಡೆದುಕೊಳ್ಳಲು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿವರ್ಹಣೆ ಇಲಾಖೆ (ಡಿಐಡಿಎಎಂ) ಅನುಮೋದನೆ ನೀಡಿದೆ. ಈ ಮೂಲಕ ವೈಜಾಗ್ ಸ್ಟೀಲ್ ಸ್ಥಾವರನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ : 8 ಜನ ಸಾವು – 5000ಕ್ಕೂ ಅಧಿಕ ಮಂದಿ ಅಸ್ವಸ್ಥ!
ಉಕ್ಕು ಸ್ಥಾವರದ ಖಾಸಗೀಕರಣಕ್ಕೆ ಡಿಐಡಿಎಎಂ ಅನುಮೋದನೆ ನೀಡಿದ ಬಳಿಕ ಮಾರ್ಚ್ 06ರಂದು ಆಂಧ್ರಪ್ರದೇಶದಾದ್ಯಂತ ಬೃಹತ್ ಹೋರಾಟ ನಡೆಸಲಾಯಿತು. ಅಂದಿನಿಂದ ಆರಂಭಗೊಂಡ ಹೋರಾಟ ಭಾನುವಾರಕ್ಕೆ 200 ದಿನಗಳನ್ನು ಪೂರೈಸಿದೆ. ಇದರ ಭಾಗವಾಗಿ ಆಂಧ್ರ ಜನರು ಮಾನವ ಸರಪಳಿ ರಚಿಸಿ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಗುಡುಗಿದ್ದಾರೆ. ಬಿಜೆಪಿ ವಿರುದ್ದ ಘೋಷಣೆಗಳನ್ನು ಮೊಳಗಿಸಿದ್ದಾರೆ.
ಹೋರಾಟವು ಬಿಜೆಪಿಗೆ ಬಲವಾದ ಸಂದೇಶವನ್ನು ರವಾನಿಸುತ್ತದೆ. ಸ್ಥಾವರವನ್ನು ಮಾರಾಟ ಮಾಡುವ ಕುರಿತಾದ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ಕೇಸರಿ ಪಕ್ಷದ ನಾಯಕರು ರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ. ರಾಜ್ಯ ಬಿಜೆಪಿ ನಾಯಕರು ಮತ್ತು ಅವರ ಮಿತ್ರ ಜನಸೇನೆ ಪಕ್ಷವು ಪ್ರತಿಭಟನಾನಿರತ ಕಾರ್ಮಿಕರ ಪರವಾಗಿ ಮಾತನಾಡುವ ಮೂಲಕ ತಮ್ಮ ಮುಖವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ವಿಶಾಖಾ ಉಕ್ಕು ಪರಿಕ್ಷಾಣ ಪೊರಟಾ ಸಮಿತಿಯ (ವಿ.ಯು.ಪಿ.ಪಿ.ಸಿ) ಕನ್ವೀನರ್ ಜ್ಯೇಸ್ತಾ ಅಯೋಧ್ಯ ರಾಮು ಹೇಳಿದ್ದಾರೆ.
ಹೋರಾಟಕ್ಕೆ ಆಂಧ್ರ ಆಡಳಿತಾರೂಢ ವೈಎಸ್ಆರ್ಸಿಪಿ ಪಕ್ಷ, ತೆಲುಗು ದೇಶಂ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ಸಿಪಿಐ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಬೆಂಬಲ ನೀಡಿದ್ದಾರೆ.
ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ಸ್, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್, ಇಂಡಿಯನ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್, ಬುಡಕಟ್ಟು ಮತ್ತು ದಲಿತ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳು, ಮಹಿಳಾ ಹಕ್ಕು ಮತ್ತು ನಾಗರಿಕ ಸಂಸ್ಥೆಗಳು, ಆಂಧ್ರಪ್ರದೇಶದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮತ್ತು ಇತರ ಕಾರ್ಮಿಕರು ಮತ್ತು ನೌಕರರ ಸಂಘಗಳು ಸೇರಿದಂತೆ ಕಾರ್ಮಿಕ ಸಂಘಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.