ತೆಲಂಗಾಣದಲ್ಲಿ ಭಾರೀ ಮಳೆ : ನವವಿವಾಹಿತ ವಧು ಸೇರಿದಂತೆ 7 ಜನ ಸಾವು..!
ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ನವವಿವಾಹಿತ ವಧು ಸೇರಿದಂತೆ ಏಳು ಜನರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ವಿವಾಹ ಸಮಾರಂಭದಿಂದ ನವವಿವಾಹಿತರಾದ ಪ್ರವಳಿಕಾ ಮತ್ತು ನವಾಜ್ ರೆಡ್ಡಿ ಅವರು ಕಾರಿನಲ್ಲಿ ಇತರ ನಾಲ್ವರೊಂದಿಗೆ ಹಿಂದಿರುಗುತ್ತಿದ್ದರು. ಈ ವೇಳೆ ವಿಕಾರಾಬಾದಿನಲ್ಲಿ ಪ್ರವಾಹಕ್ಕೆ ನವ ವಧು, ಆಕೆಯ ಸೊಸೆ ಶ್ವೇತಾ ಮತ್ತು ಸೊಸೆಯ ಮಗ ತ್ರಿನಾಥ ರೆಡ್ಡಿ (8) ಕೊಚ್ಚಿಕೊಂಡು ಹೋಗಿದ್ದಾರೆ. ಕಾಣೆಯಾದ ತ್ರಿನಾಥ ರೆಡ್ಡಿ ಇನ್ನೂ ಪತ್ತೆಯಾಗಿಲ್ಲ.
ಇನ್ನೂ ಸಾಫ್ಟ್ ವೇರ್ ಇಂಜಿನಿಯರ್ ನ ಶವ ಭಾನುವಾರ ರಾತ್ರಿ ವಾರಂಗಲ್ ನ ಚರಂಡಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಆತನನ್ನು ಶಿವನಗರದ ವೊರೊಮ್ ಕ್ರಾಂತಿ ಕುಮಾರ್ ಎಂದು ಗುರುತಿಸಲಾಗಿದೆ.
ಜೊತೆಗೆ ಶಂಕರಪಲ್ಲಿಯಲ್ಲಿ ಕಾರಿನಲ್ಲಿದ್ದ 70 ವರ್ಷದ ವೃದ್ಧರು ಕೊಚ್ಚಿಕೊಂಡು ಹೋದ ಬಗ್ಗೆ ವರದಿಯಾಗಿದೆ. ಆದಿಲಾಬಾದ್ನಲ್ಲಿ 30 ವರ್ಷದ ಕಾರ್ಮಿಕ ಕೂಡ ಕೊಚ್ಚಿ ಹೋಗಿದ್ದಾನೆ. ಯಾದಾದ್ರಿ ಭೋಂಗೀರ್ ಜಿಲ್ಲೆಯಲ್ಲಿ ಸ್ಕೂಟರ್ನಲ್ಲಿ ಹೋಗುತ್ತಿದ್ದ ಇಬ್ಬರು ಯುವತಿಯರು ಕಾಣೆಯಾಗಿದ್ದಾರೆ.
ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯಲ್ಲಿ ಹರಿಯುವ ನೀರಿನಲ್ಲಿ ವಾಹನ ಸಿಲುಕಿಕೊಂಡಿದ್ದರಿಂದ ರಾಜ್ಯ ಸಾರಿಗೆ ಬಸ್ಸಿನಲ್ಲಿದ್ದ 12 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ನೈಋತ್ಯ ಮುಂಗಾರು ಚುರುಕಾಗಿರುವುದರಿಂದ ವಿಕಾರಾಬಾದ್, ರಂಗ ರೆಡ್ಡಿ ಮತ್ತು ಸಿದ್ದಿಪೇಟೆಯಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಹವಾಮಾನ ಇಲಾಖೆ ಹೈದರಾಬಾದ್, ಆದಿಲಾಬಾದ್, ನಿಜಾಮಾಬಾದ್, ಕರೀಂನಗರ, ವಾರಂಗಲ್ ಮತ್ತು ಖಮ್ಮಂನಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ.