ಶಾಲಾ ಮಕ್ಕಳಿಂದ ಮರ ಕಡಿಯದಂತೆ ಮರಗಳನ್ನು ಅಪ್ಪಿಕೊಂಡು ಪ್ರತಿಭಟನೆ!
ನಗರದಲ್ಲಿ ರಸ್ತೆಯನ್ನು ವಿಸ್ತರಣೆ ಮಾಡಲು ಮರಗಳನ್ನು ಕಡಿಯಲು ಬಿಬಿಎಂಪಿ ಏಕಾಏಕಿ ಮುಂದಾಗಿದ್ದು ಶಾಲಾ ಮಕ್ಕಳಿಂದ ಮರ ಕಡಿಯದಂತೆ ಮರಗಳನ್ನು ಅಪ್ಪಿಕೊಂಡು ಪ್ರತಿಭಟನೆ ಮಾಡಿದರು. ಅಬ್ಬಿಗೆರೆ ಸರಕಾರಿ ಶಾಲಾ ಮಕ್ಕಳು ಕೈಯಲ್ಲಿ ನಾಮಫಲಕಗಳನ್ನು ಹಿಡಿದು, ಮರಗಳನ್ನು ಸುತ್ತುವರಿದು ತಬ್ಬಿಕೊಂಡು ಕಡಿಯದಂತೆ ಶಾಲಾ ಆವರಣದಲ್ಲಿ ಮನವಿ ಮಾಡುತ್ತಿದ್ದಾರೆ.
ಪೀಣ್ಯ ದಾಸರಹಳ್ಳಿಯ ಅಬ್ಬಿಗೆರೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಅಪ್ಪಿಕೋ ಚಳವಳಿ ರೀತಿಯಲ್ಲಿ ಪ್ರತಿಭಟನೆ ನೆಡೆಸಿದ್ದಾರೆ. ಅಬ್ಬಿಗೆರೆ ಸರಕಾರಿ ಶಾಲೆ ಆವರಣದಲ್ಲಿರುವ ಮೈದಾನದಲ್ಲಿ 100ಕ್ಕೂ ಹೆಚ್ಚು ಮರಗಳಿವೆ. ಅಬ್ಬಿಗೆರೆಯಿಂದ ಚಿಕ್ಕಬಾಣಾವರಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯನ್ನು ಅಗಲೀಕರಣ ಮಾಡಲು ಪಾಲಿಕೆ ಅಧಿಕಾರಿಗಳು, ಕಾಂಟ್ರಾಕ್ಟರ್ ಗಳು ಮುಂದಾಗಿದ್ದಾರೆ. ಈ ಅಗಲೀಕರಣ ಅವೈಜ್ಞಾನಿಕವಾಗಿದ್ದು ಯಾವುದೇ ಕಾರಣಕ್ಕೂ ಮುಂದುವರೆಸದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೆ ಮನವಿ ಮಾಡುತ್ತಿದ್ದಾರೆ.
ಜಿಂದಾಲ್ ಜುಬ್ಲೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಮತ್ತು ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯೋಪಾದ್ಯಾಯರು ಮತ್ತು ಸ್ಥಳೀಯರನ್ನು ಮತನಾಡಿಸಿದಾಗ ಏನಿಲ್ಲವೆಂದರೂ 15 ರಿಂದ 20 ವರ್ಷದ ಆಮ್ಲಜನಕ ಎತೇಚ್ಛವಾಗಿ ಪೂರೈಸುವ ಮರಗಳು ಇವಾಗಿದ್ದು, ಈ ಶಾಲೆ ಕೂಡ 30 ವರ್ಷ ಹಳೆಯದಾದ ಶಾಲೆಯಾಗಿದೆ. ಶಿಕ್ಷಣ ಅಥವಾ ಅರಣ್ಯ ಇಲಾಖೆಯಾಗಲಿ ಈ ಕುರಿತು ಯಾವುದೇ ಸೂಚನೆ ನೋಟಿಸ್ ನೀಡಿಲ್ಲ ಎಂದು ಹೇಳಿದರು.
ಮುಂದಿನ ಲಕ್ಷ್ಮಿಪುರಕ್ಕೆ ಹೋಗುವ ರಸ್ತೆ ಪಾರ್ಕ್ ಪಕ್ಕದಲ್ಲಿದೆ ಕಳೆದ ಒಂದು ವಾರದಿಂದ ಮರ ಕಡಿಯಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಸ್ಥಳೀಯ ಎಂ.ಎಲ್.ಎ, ಮಾಜಿ ಪಾಲಿಕೆ ಸದಸ್ಯರಿಗೆ ಮನವಿ ಸಲ್ಲಿಸಲಾಗಿದೆ ಆದರೆ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಪೀಣ್ಯ ದಾಸರಹಳ್ಳಿ ವಿಭಾಗದ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.